BBMP Election: ಬಿಜೆಪಿ ವಿರುದ್ಧ ಎಎಪಿಯಿಂದ ಸಹಿ ಸಂಗ್ರಹ ಅಭಿಯಾನ, ರಾಜ್ಯಪಾಲ ಭೇಟಿ
ಬೆಂಗಳೂರು, ಡಿಸೆಂಬರ್ 02: ಬಿಬಿಎಂಪಿ ಚುನಾವಣೆ ಮುಂದೂಡಲು ರಾಜ್ಯ ಬಿಜೆಪಿ ಸರ್ಕಾರ ಕುತಂತ್ರ ಮಾರ್ಗದಡಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿದೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ. ಇದರ ವಿರುದ್ಧ ಎಎಪಿ ಬೆಂಗಳೂರಿನಾದ್ಯಂತ 'ಬಿಬಿಎಂಪಿ ಚುನಾವಣೆ ನಡೆಸಿ-ಬೆಂಗಳೂರು ಉಳಿಸಿ' ಅಭಿಯಾನ ಹಮ್ಮಿಕೊಂಡಿದೆ.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಡಿಸೆಂಬರ್ 3ರಿಂದ 5ರ ತನಕ ಬೆಂಗಳೂರಿನಾದ್ಯಂತ ಮೂರು ದಿನಗಳ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಲಿದ್ದೇವೆ. ಒಟ್ಟು ಸುಮಾರು ಐದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಡಿಸೆಂಬರ್ 6ರ ಮಂಗಳವಾರದಂದು ಎಎಪಿ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಬೆಂಗಳೂರಿನಾದ್ಯಂತ ಸಂಗ್ರಹಿಸಿದ ಸಹಿಗಳನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗ್ರಹಿಸಲಿದ್ದೇವೆ ಎಂದು ಹೇಳಿದರು.
2020ರಲ್ಲೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಲೇ ಬಂದಿದೆ. ಇದರಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಳ್ಳುವುದರ ಜೊತೆಗೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಚುನಾವಣೆ ನಡೆಯುವುದಕ್ಕೆ ಪದೇ ಪದೆ ಅಡ್ಡಗಾಲು ಹಾಕುವ ಮೂಲಕ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಎಸಗಿದೆ ಎಂದು ಅವರು ಆರೋಪಿಸಿದರು.

ಪ್ರತಿಪಕ್ಷಗಳು ಬಿಜೆಪಿ ಜೊತೆ ಶಾಮೀಲು: ಎಎಪಿ
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಲ್ಲಿನ ದುರಾಡಳಿತದಿಂದಾಗಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಶತಸಿದ್ಧ ಎಂದು ಬಿಜೆಪಿಗೆ ಮನವರಿಕೆ ಆಗಿರುವುದರಿಂದ ಬಿಜೆಪಿಯು ಚುನಾವಣೆ ಮುಂದೂಡುವ ಕುತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೂಡ ಈ ವಿಷಯದಲ್ಲಿ ಮೌನ ವಹಿಸಿವೆ. ಇದನ್ನು ಗಮನಿಸಿದರೆ, ಅವು ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಹಾಗೂ ಕಾರ್ಪೊರೇಟರ್ಗಳು ಇಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. 2022-23ನೇ ವಾರ್ಡ್ ಮಟ್ಟದ 2,543 ಕಾಮಗಾರಿಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ 867 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಎಂಟು ತಿಂಗಳಾದರೂ ಈ ಪೈಕಿ ಕೇವಲ 76 ಕಾಮಗಾರಿಗಳು ಆರಂಭಗೊಂಡಿವೆ.

ಬಿಬಿಎಂಪಿ ಅಧಿಕಾರಿಗಳು ನಾಮಕಾವಸ್ಥೆಗೆ ವಾರ್ಡ್ ಮಟ್ಟದ ಸಭೆಗಳನ್ನು ನಡೆಸುತ್ತಿದ್ದರೂ ಪ್ರಶ್ನಿಸುವವರು ಯಾರು ಇಲ್ಲದಾಗಿದೆ. ಕಸದ ಸಮಸ್ಯೆ, ರಸ್ತೆ ಗುಂಡಿಗಳು, ಅವ್ಯವಸ್ಥಿತ ಒಳಚರಂಡಿ, ಕೆಟ್ಟು ಹೋಗಿರುವ ವಿದ್ಯುತ್ ದೀಪ, ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಬೆಂಗಳೂರಿನಲ್ಲಿ ತಾಂಡವವಾಡುತ್ತಿವೆ. ಇದರಿಂದಾಗಿ ನಾಗರಿಕರು ಬೆಂಗಳೂರನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.












Click it and Unblock the Notifications