ಬಿಬಿಎಂಪಿ ಚುನಾವಣೆ ಫಲಿತಾಂಶ : ಗೆದ್ದ-ಸೋತ ಪ್ರಮುಖರು
ಬೆಂಗಳೂರು, ಆ.26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಪಾಲಿಕೆಯಲ್ಲಿ ಮತ್ತೆ ಅಧಿಕಾರ ನಡೆಸಲು ಸಿದ್ಧವಾಗುತ್ತಿದೆ. ಗೆದ್ದ ಮತ್ತು ಸೋತ ಅಭ್ಯರ್ಥಿಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮಾಜಿ ಮೇಯರ್, ಶಾಸಕರ ಪತ್ನಿ, ಮಾಜಿ ಶಾಸಕರ ಸಹೋದರ, ಸಿನಿಮಾ ನಿರ್ದೇಶಕಿ, ಶಾಸಕರ ಪುತ್ರ ಸೇರಿದಂತೆ ವಿವಿಧ ಸ್ಟಾರ್ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಇಬ್ಬರು ಮಾಜಿ ಮೇಯರ್ಗಳಿಗೆ ಜನರು ಬೆಂಬಲ ನೀಡಿದ್ದು, ಅವರು ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. [ಚುನಾವಣೆ ಫಲಿತಾಂಶ : ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?]
ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚುನಾವಣಾ ಕಣಕ್ಕಿಳಿದಿದ್ದವರಿಗೆ ಗೆಲುವು ಸಿಕ್ಕಿದೆ. ಇಬ್ಬರು ಶಾಸಕರ ಪುತ್ರರು ಚುನಾವಣೆಯಲ್ಲಿ ಗೆದ್ದು ಮಹಾನಗರ ಪಾಲಿಕೆಗೆ ಪ್ರವೇಶ ಪಡೆದಿದ್ದಾರೆ. ವೈದ್ಯ ವೃತ್ತಿ ತೊರೆದು ಚುನಾವಣೆಗೆ ಸ್ಪರ್ಧಿಸಿದವರಿಗೆ ನಿರಾಸೆಯಾಗಿದೆ.[ಕಾಂಗ್ರೆಸ್ ಸೋಲಿಗೆ 10 ಕಾರಣಗಳು]
ಸಿನಿಮಾ ಕ್ಷೇತ್ರದವರಿಗೆ ಜನರು ಬೆಂಬಲ ನೀಡಿಲ್ಲ. ನಿರ್ದೇಶಕಿ ಮತ್ತು ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಾವೇರಿಪುರ ವಾರ್ಡ್ನಿಂದ ಚುನಾವಣಾ ಕಣಕ್ಕಿಳಿದಿದ್ದರು. ಆದರೆ, ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಹಾಗಾದರೆ ಚುನಾವಣೆಯಲ್ಲಿ ಸೋತ-ಗೆದ್ದ ಪ್ರಮುಖರು ಯಾರು ನೋಡೋಣ ಬನ್ನಿ.....

ಮಾಜಿ ಮೇಯರ್ ಕಟ್ಟೆ ಸತ್ಯಾಗೆ ಜಯ
ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ನಂ 154ರಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರು 8798 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ.ಆರ್.ಮುರಳಿ ಅವರ 5412 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದಾರೆ. 2010ರಲ್ಲಿಯೂ ಕಟ್ಟೆ ಸತ್ಯನಾರಾಯಣ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು.

ಮಾಜಿ ಮೇಯರ್ ಶಾಂತ ಕುಮಾರಿಗೆ ಗೆಲುವು
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿ ಮಂದಿರ ವಾರ್ಡ್ (126) ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಮೇಯರ್ ಎನ್.ಶಾಂತಕುಮಾರಿ ಅವರು 6806 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ನ ಸಿದ್ದಾರ್ಥ ಅವರು 6686 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದರು. 2010ರಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ವಾಗೀಶ್ ಗೆಲುವು ಸಾಧಿಸಿದ್ದರು.

ಶಾಸಕರ ಪತ್ನಿಗೆ ಸೋಲು
ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ಚೌಡೇಶ್ವರಿ ನಗರ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮಾವತಿ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ. ಪದ್ಮಾವತಿ ಅವರು 10,533 ಮತಗಳನ್ನು ಪಡೆದರೆ, ವಾಣಿಶ್ರೀ ವಿಶ್ವನಾಥ್ ಅವರು 7426 ಮತಗಳನ್ನು ಪಡೆದಿದ್ದಾರೆ.

ವಿಜಯಲಕ್ಷ್ಮೀಗೆ ಒಲಿಯಲಿಲ್ಲ ಜಯ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಸೋಲು ಅನುಭವಿಸಿ, ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ರಮೀಳಾ ಅವರು 12,037 ಮತಗಳನ್ನು ಪಡೆದು ಜಯಗಳಿಸಿದ್ದರೆ, ಕಾಂಗ್ರೆಸ್ನ ಸುನಂದಾ ಅವರು 9366 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದಾರೆ.

ಶಾಸಕರ ಪುತ್ರನಿಗೆ ಗೆಲುವು
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಅವರು ತಮ್ಮ ಪುತ್ರನನ್ನು ಸುಧಾಮನಗರ ವಾರ್ಡ್ನಲ್ಲಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್.ವಿ.ಯುವರಾಜ್ 6996 ಮತಗಳನ್ನು ಪಡೆದು ಜಯಗಳಿಸಿದರೆ, ಜೆಡಿಎಸ್ನ ವಿ.ಕೆ.ಪ್ರವೀಣ್ 4033 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು. 2010ರಲ್ಲಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದರು.

ನೆ.ಲ.ಮಹೇಶ್ ಕುಮಾರ್ಗೆ ಸೋಲು
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಾಪುರ ವಾರ್ಡ್ನಿಂದ ಸ್ಪರ್ಧಿಸಿದ್ದ ನೆ.ಲ.ನರೇಂದ್ರಬಾಬು ಅವರ ಕಿರಿಯ ಸಹೋದರ ನೆ.ಲ. ಮಹೇಶ್ ಕುಮಾರ್ ಸೋಲು ಅನುಭವಿಸಿದ್ದಾರೆ. ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಭದ್ರೇಗೌಡ ಅವರು 7434 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 7200 ಮತಗಳನ್ನು ಪಡೆದ ಬಿಜೆಪಿಯ ಎಸ್.ಹರೀಶ್ 2ನೇ ಸ್ಥಾನಗಳಿಸಿದ್ದಾರೆ.

ಬಿಬಿಎಂಪಿಗೆ ಪ್ರವೇಶ ಪಡೆದ ಶಾಸಕರ ಪುತ್ರ
ಹೊಸಕೋಟೆ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ಅವರ ಪುತ್ರ ಬಿ.ಎನ್. ನಿತೇಶ್ ಪುರಷೋತ್ತಮ್ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗರುಡಾಚಾರ್ ಪಾಳ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.10,059 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. 9815 ಮತಗಳನ್ನು ಪಡೆದ ಬಿಜೆಪಿಯ ಎಂ.ಅನಂತರಾಮಯ್ಯ ಅವರು 2ನೇ ಸ್ಥಾನಗಳಿಸಿದ್ದಾರೆ.

ಪತ್ನಿಯನ್ನು ಗೆಲ್ಲಿಸಿಕೊಂಡು ಬಂದ ಶಾಸಕ
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಅವರು ಪತ್ನಿ ಎಸ್.ಪಿ.ಹೇಮಲತಾ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃಷಭಾವತಿ ವಾರ್ಡ್ನಿಂದ ಹೇಮಲತಾ ಅವರು ಕಣಕ್ಕಿಳಿದಿದ್ದರು 16,654 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ.

ಪೊಲೀಸ್ ಹುದ್ದೆ ತೊರೆದ ಮಹಿಳೆಗೆ ಗೆಲುವು
ಪೊಲೀಸ್ ನೌಕರಿ ತೊರೆದು ಚುನಾವಣೆಗೆ ಸ್ಪರ್ಧಿಸಿದ್ದ ಜೆ.ಎಂ.ಸವಿತಾ ಅವರು ಜಯಗಳಿಸಿದ್ದಾರೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸವಿತಾ ಸ್ಪರ್ಧಿಸಿದ್ದರು. 6,814 ಮತಗಳನ್ನು ಪಡೆದು ಅವರು ಗೆಲುವು ಸಾಧಿಸಿದ್ದಾರೆ.












Click it and Unblock the Notifications