ಬಿಬಿಎಂಪಿ ಮೇಯರ್ ಆಯ್ಕೆ, ಮಂಗಳವಾರ ಹೈಕೋರ್ಟ್ ತೀರ್ಪು?
ಬೆಂಗಳೂರು, ಸೆಪ್ಟೆಂಬರ್, 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ?. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆ ಸಫಲವಾಗುವುದೇ ಎಂಬ ಪ್ರಶ್ನೆಗಳಿಗೆ ಮಂಗಳವಾರ ಉತ್ತರ ಮಂಗಳವಾರ ದೊರಕಲಿದೆ. ಮೇಯರ್ ಆಯ್ಕೆ ಚುನಾವಣೆಯ ಚೆಂಡು ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿದೆ.
ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತದಾನ ಮಾಡುವ ಹಕ್ಕು ನೀಡಬಾರದು ಎಂದು ಬಿಜೆಪಿಯ ಪಾಲಿಕೆ ಸದಸ್ಯರಾದ ಎಂ. ಪ್ರಮೀಳಾ, ಆರ್.ಪ್ರತಿಮಾ, ದೀಪಾ ನಾಗೇಶ್, ಉಮಾವತಿ ಪದ್ಮರಾಜ್, ಕುಮಾರಿ ಪಳನಿಕಾಂತ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೆ.8ರ ಮಂಗಳವಾಗ ನಡೆಯಲಿದೆ. [ಕಾಂಗ್ರೆಸ್-ಜೆಡಿಎಸ್ ಮೈತ್ರ ಬಗ್ಗೆ ಎಚ್ಡಿಕೆ ಅಪಸ್ವರ]

ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ಸೆ.1ರಂದು ಅರ್ಜಿಯ ವಿಚಾರಣೆಯನ್ನು ನಡೆಸಿ ಸೆ.8ಕ್ಕೆ ವಿಚಾರಣೆ ಮುಂದೂಡಿದೆ. ಒಂದು ವೇಳೆ ಮಂಗಳವಾರ ಮಧ್ಯಂತರ ತೀರ್ಪು ಪ್ರಕಟಗೊಂಡು ಬಿಜೆಪಿ ಸದಸ್ಯರ ಅರ್ಜಿಯ ಪರವಾದ ತೀರ್ಪು ಬಂದರೆ, ಲೆಕ್ಕಾಚಾರಗಳು ಬದಲಾವಣೆಯಾಗಲಿವೆ.[ಮೇಯರ್ ಆಯ್ಕೆ ಮ್ಯಾಜಿಕ್ ನಂಬರ್ 131]
ಬಿಜೆಪಿಯ ಮೌನ : ಸೆಪ್ಟೆಂಬರ್ 11ರ ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಆದರೆ, ಬಿಜೆಪಿ ಇದುವರೆಗೂ ತನ್ನ ಕಾರ್ಯತಂತ್ರವೇನು? ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮೇಯರ್ ಆಯ್ಕೆಗೆ ಮ್ಯಾಜಿಕ್ ನಂಬರ್ 131 ಹೈಕೋರ್ಟ್ ತೀರ್ಪು ಬಿಜೆಪಿ ಪರವಾಗಿ ಬಂದರೆ, ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿರುವ ಪಕ್ಷ ಮೇಯರ್ ಗದ್ದುಗೆ ಏರಲಿದೆ. [ಶಾಸಕರು, ಸಂಸದರು ಏಕೆ ಮತ ಹಾಕಬೇಕು?]
ರೆಸಾರ್ಟ್ನತ್ತ ಕಾಂಗ್ರೆಸ್ : ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಬಳಿಕ ಕಾಂಗ್ರೆಸ್ ಸದಸ್ಯರು ರೆಸಾರ್ಟ್ನತ್ತ ಮುಖ ಮಾಡಿದ್ದಾರೆ. ಶುಕ್ರವಾರದ ಚುನಾವಣೆಗೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇರುವುದರಿಂದ ಈ ರೆಸಾರ್ಟ್ ಮೊರೆ ಹೋಗಲಾಗುತ್ತಿದೆ.
ದೋಸ್ತಿ ಮಾತುಕತೆ : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಅಧಿಕಾರ ನಡೆಸುವ ಮಾತುಕತೆಗಳನ್ನು ನಡೆಸುತ್ತಿವೆ. ಮೇಯರ್ ಪಟ್ಟ ಕಾಂಗ್ರೆಸ್ಗೆ, ಉಪ ಮೇಯರ್ ಪಟ್ಟ ಜೆಡಿಎಸ್ಗೆ ಎಂಬುದು ಸದ್ಯದ ಮಾತುಕತೆ.
ಬಿಬಿಎಂಪಿ ವಿಭಜನೆ, ಬಿಜೆಪಿ ಅವಧಿಯಲ್ಲಾದ ಹಗರಣಗಳ ತನಿಖೆ, ಸ್ಥಾಯಿ ಸಮಿತಿಗಳ ಸ್ಥಾನ ಹಂಚಿಕೆ ಮುಂತಾದ ವಿಚಾರಗಳ ಬಗ್ಗೆ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ಮುಂದೇನಾಗುತ್ತದೆ ಎಂಬುದಕ್ಕೆ ಮಂಗಳವಾರ ಉತ್ತರ ದೊರೆಯುವ ಸಾಧ್ಯತೆ ಇದೆ.












Click it and Unblock the Notifications