ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಊಟ?
ಬೆಂಗಳೂರು, ಫೆಬ್ರವರಿ19 : ಪೌರಕಾರ್ಮಿಕರಿಗೆ ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಮೂಲಕ ಬಿಸಿಯೂಟ ಒದಗಿಸಲು ಬಿಬಿಎಂಪಿ ಮುಂದಾಗಿದ್ದು ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ.
ಬಿಬಿಎಂಪಿಯು ಈ ವರೆಗೆ ತನ್ನೆಲ್ಲಾ ಪೌರ ಕಾರ್ಮಿಕರಿಗೆ ನಿತ್ಯ ಇಸ್ಕಾನ್ ನ ಅಕ್ಷಯ ನಿಧಿ ಕಾರ್ಯಕ್ರಮದ ಮೂಲಕ ಬಿಸಿಯೂಟ ಪೂರೈಸುತ್ತಿತ್ತು. ಇದೀಗ ಉದ್ಯಾನ ನಗರಿಯ ಬಡ ಜನರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ನೀಡಲು ಬಹುತೇಕ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದೆ. ಹೀಗಾಗಿ ಈ ಕ್ಯಾಂಟೀನ್ ಗಳಿಂದಲೇ ಇನ್ನುಮುಂದೆ ಪೌರಕಾರ್ಮಿಕರಿಗೆ ಬಿಸಿಯೂಟ ಪೂರೈಸಲು ನಿರ್ಧರಿಸಿತ್ತು.
ಆಯಾ ವಾರ್ಡ್ ಕ್ಯಾಂಟೀನ್ ಗಳಿಂದಲೇ ಪೌರ ಕಾರ್ಮಿಕರಿಗೆ ಸುಲಭವಾಗಿ ಊಟ ನೀಡಬಹುದು. ಪಾಲಿಕೆಯಿಂದಲೇ ಕ್ಯಾಂಟೀನ್ ಗಳಿಗೆ ಹಣ ಪಾವತಿಸಬಹುದು. ಇದರಿಂದ ಅಕ್ಷಯ ನಿಧಿಯಿಂದ ಬಿಸಿಯೂಟ ಪೂರೈಕೆಗೆ ವಾರ್ಷಿಕ ತಗುಲುತ್ತಿರುವ ೨೪ ಕೋಟಿ ರೂ. ಹಣದಲ್ಲಿ ಒಂದಷ್ಡು ಹಣ ಪಾಲಿಕೆಗೆ ಉಳಿಯುತ್ತದೆ ಎಂಬುದು ಲೆಕ್ಕಾಚಾರ.
ಅಲ್ಲದೆ, ಇಸ್ಕಾನ್ ನಿಂದ ಪೂರೈಕೆಯಾಗುವ ಆಹಾರದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸುವುದಿಲ್ಲ, ಹೀಗಾಗಿ ಆಹಾರ ರುಚಿಯಾಗಿರುವುದಿಲ್ಲ. ಹೀಗಾಗಿ ಆಹಾರ ಬದಲಿಸಬೇಕು ಎಂದು ಪೌರಕಾರ್ಮಿಕರು ಕೂಡ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಸ್ಕಾನ್ ಬದಲು ಇಂದಿರಾ ಕ್ಯಾಂಟೀನ್ ಗಳಿಂದಲೇ ಆಹಾರ ಸರಬರಾಜು ಮಾಡಲು ಆಲೋಚನೆ ನಡೆಸಿದೆ. ಇದರ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.