ಬಗೆಹರಿದ ಕಟ್ಟಡ ತ್ಯಾಜ್ಯ ಸಮಸ್ಯೆ; ನಿಟ್ಟುಸಿರು ಬಿಟ್ಟ ನಿವಾಸಿಗಳು
ಬೆಂಗಳೂರು, ಫೆಬ್ರವರಿ 20 : ಕೆಂಪಾಪುರದಲ್ಲಿ ವಾಲಿದ್ದ 5 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಕಟ್ಟಡದ ತಾಜ್ಯವನ್ನು ಎಲ್ಲಿಗೆ ವಿಲೇವಾರಿ ಮಾಡಬೇಕು? ಎಂಬ ಸಮಸ್ಯೆ ಬಗೆಹರಿದಿದ್ದು, ಅಕ್ಕ-ಪಕ್ಕದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಫೆಬ್ರವರಿ 5ರಂದು ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ಕೆಂಪಾಪುರದ ಜಿ.ರಾಮಯ್ಯ ಲೇಔಟ್ನಲ್ಲಿ 5 ಅಂತಸ್ತಿನ ಕಟ್ಟಡ ವಾಲಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾಲಿದ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿತ್ತು.
ವಾಲಿದ ಕಟ್ಟಡವನ್ನು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗದಂತೆ ಧ್ವಂಸಗೊಳಿಸಲಾಗಿತ್ತು. ಆದರೆ, ಕಟ್ಟಡ ಅವಶೇಷಗಳನ್ನು ಎಲ್ಲಿ ಸುರಿಯುವುದು? ಎಂಬುದು ಬಿಬಿಎಂಪಿಗೆ ಸವಾಲಾಗಿತ್ತು. ಈಗ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿ ಶಾಮಕ ದಳದ ಅಧಿಕಾರಿಗಳು ಸಹ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದ್ದರು.

ಬಿಬಿಎಂಪಿ ಮೇಯರ್ ಮಾಹಿತಿ
ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ಕೆಂಪಾಪುರದ ಜಿ.ರಾಮಯ್ಯ ಲೇಔಟ್ನಲ್ಲಿ ವಾಲಿದ್ದ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕಟ್ಟಡದ ತ್ಯಾಜ್ಯವನ್ನು ಬೆಳ್ಳಹಳ್ಳಿ ಹಾಗೂ ಕೋಗಿಲು ಬಂಡೆ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಕಟ್ಟಡದ ಅಕ್ಕ-ಪಕ್ಕದಲ್ಲಿನ ಮನೆಯ ನಿವಾಸಿಗಳಿಗೆ ವಾಸಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆತಂಕ ಮೂಡಿಸಿದ್ದ ಕಟ್ಟಡ
ಜಿ. ರಾಮಯ್ಯ ಲೇಔಟ್ನಲ್ಲಿ ಕಟ್ಟಡ ವಾಲಿದ ಬಳಿಕ ಅಕ್ಕ-ಪಕ್ಕದ ಜನರಲ್ಲಿ ಆತಂಕ ಉಂಟಾಗಿತ್ತು. ಸುಮಾರು 150 ಜನರನ್ನು ಸ್ಥಳಾಂತರ ಮಾಡಿದ್ದ ಬಿಬಿಎಂಪಿ ಅವರಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಿ, ಊಟ ಮತ್ತು ವಸತಿ ವ್ಯವಸ್ಥೆ ಮಾಡಿತ್ತು.

ವಾಲಿದ್ದ 5 ಅಂತಸ್ತಿನ ಕಟ್ಟಡ
5 ಅಂತಸ್ತಿನ ಕಟ್ಟಡದ ಹಿಂಭಾಗದಲ್ಲಿ ಮನೆ ಕಟ್ಟಲು 8 ಅಡಿ ಆಳದ ಹಳ್ಳ ತೆಗೆಯಲಾಗಿತ್ತು. ಆದ್ದರಿಂದ, ಕಟ್ಟಡ ವಾಲಿತ್ತು. ತಕ್ಷಣದ ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿ, ಗ್ಯಾಸ್ ಸಂಪರ್ಕಗಳನ್ನು ತೆಗೆಯಲಾಗಿತ್ತು.

ಇಂಜಿನಿಯರ್ಗಳ ಸಲಹೆ
ಇಂಜಿನಿಯರ್ಗಳ ಸಲಹೆ ಪಡೆದಿದ್ದ ಬಿಬಿಎಂಪಿ ವಾಲಿದ್ದ ಕಟ್ಟಡ ಅಕ್ಕಪಕ್ಕದಲ್ಲಿದ್ದ ಕಟ್ಟಡಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಂಡಿತ್ತು. ಯಶಸ್ವಿಯಾಗಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ.












Click it and Unblock the Notifications