ನವೆಂಬರ್ ಅಂತ್ಯಕ್ಕೆ ಬೆಂಗಳೂರಿನಾದ್ಯಂತ ಹೊಸ ರಸ್ತೆಗಳು: ಬಿಬಿಎಂಪಿ
ಬೆಂಗಳೂರು, ಸೆಪ್ಟೆಂಬರ್ 05: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನವೆಂಬರ್ ಅಂತ್ಯದೊಳಗೆ ಬೆಂಗಳೂರು ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸಲು ಪ್ರತಿಜ್ಞೆ ಮಾಡಿದ್ದಾರೆ.
ನಗರದಾದ್ಯಂತ ಹೆಚ್ಚುತ್ತಿರುವ ಗುಂಡಿಗಳು ಮತ್ತು ರಸ್ತೆಗಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾದರಿಂದ ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಸೆಪ್ಟೆಂಬರ್ 7ರವರೆಗೆ ಮಳೆಯಾಗಲಿದೆ. ಈ ಅವಧಿಯಲ್ಲಿ ಸಿಮೆಂಟ್ ಕಾಂಕ್ರೀಟ್ ಮತ್ತು ಕೋಲ್ಡ್ ಮಿಕ್ಸ್ ಹಾಕಿ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುತ್ತೇವೆ ಎಂದು ಹೇಳಿದರು.
ಸೆಪ್ಟೆಂಬರ್ ಎರಡನೇ ವಾರದಿಂದ ಹವಾಮಾನವು ಶುಷ್ಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ನಾವು ಗುಂಡಿಗಳನ್ನು ತುಂಬಲು ಮುಂದಾಗುತ್ತೇವೆ. ಬಿಬಿಎಂಪಿ ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಯೋಜಿಸಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭಿಸುತ್ತೇವೆ. ನವೆಂಬರ್ ವೇಳೆಗೆ ನಾವು ಎಲ್ಲಾ ಹೊಸ ರಸ್ತೆಗಳನ್ನು ಸಿದ್ದಮಾಡುತ್ತೇವೆ. ಇಲ್ಲಿ ಗುಂಡಿಗಳು ಇರುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದರು.
ರಸ್ತೆಗಳನ್ನು ಸರಿಪಡಿಸಲು ಮುಂದಾಗಿರುವ ಬಿಬಿಎಂಪಿಯ ಈ ಕಾರ್ಯಚರಣೆಯು ಡಿಸೆಂಬರ್ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಒತ್ತಡದಿಂದ ಆರಂಭವಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಮುಖ್ಯಮಂತ್ರಿಗಳ ನವ ನಗರೋತ್ಥಾನ ಕಾರ್ಯಕ್ರಮದಡಿ ಬಿಡುಗಡೆಯಾದ 6,000 ಕೋಟಿ ಅನುದಾನದಲ್ಲಿ, 3,698 ಕೋಟಿ ರೂ.ಗಳ ಪ್ರಮುಖ ಭಾಗವನ್ನು ವಾರ್ಡ್ ಮಟ್ಟದಲ್ಲಿ, ವಸತಿ ಬಡಾವಣೆಗಳು ಮತ್ತು ಬೈಲೇನ್ಗಳಲ್ಲಿ ರಸ್ತೆಗಳ ಡಾಂಬರೀಕರಣಕ್ಕೆ ಮೀಸಲಿಡಲಾಗಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೆ ಇನ್ನೂ 700 ಕೋಟಿ ರೂ. ಮೀಸಲಿಡಲಾಗಿದೆ.

ಕೆಆರ್ ಪುರದವರೆಗೆ ರಸ್ತೆ ವಿಸ್ತರಣೆ
ಇತ್ತಿಚೆಗೆ ಮುಖ್ಯ ಆಯುಕ್ತರು ಇಂಜಿನಿಯರ್ಗಳ ಜತೆ ಸಾರಕ್ಕಿ, ಜೀಡಿಮರ, ಇಬ್ಲೂರು, ಕೆಆರ್ ಪುರಂ, ಹೆಬ್ಬಾಳದ ಪ್ರಮುಖ ಜಂಕ್ಷನ್ಗಳನ್ನು ಪರಿಶೀಲಿಸಿದ್ದಾರೆ. ಹೆಬ್ಬಾಳ ಜಂಕ್ಷನ್ನಲ್ಲಿ ಪರಿಶೀಲನೆ ನಡೆಸಿದ ಗಿರಿನಾಥ್, ಎಸ್ಟೀಮ್ ಮಾಲ್ನಿಂದ ಕೆಆರ್ ಪುರದವರೆಗೆ ರಸ್ತೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ದಟ್ಟಣೆಯನ್ನು ನಿವಾರಿಸುವ ಯೋಜನೆಯ ಪ್ರಕಾರ, ಬಿಬಿಎಂಪಿಯು ಬಳ್ಳಾರಿ ರಸ್ತೆಯ ವಿಸ್ತರಣೆಯನ್ನು ಹೆಬ್ಬಾಳ ಕೆರೆಯ ಹತ್ತಿರದಿಂದ ವಿಸ್ತರಿಸುವ ಗುರಿಯನ್ನು ಹೊಂದಿದೆ. ಬೀದಿದೀಪಗಳು, ಬ್ಯಾರಿಕೇಡ್ ಫುಟ್ಪಾತ್ಗಳನ್ನು ಅಳವಡಿಸಲು ಮತ್ತು ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ತೆಗೆದುಹಾಕಲು ಅಧಿಕಾರಿಗಳು ಯೋಜಿಸಿದ್ದಾರೆ.

ಸುಗಮ ಸಂಚಾರಕ್ಕೆ ದಾರಿ ಮಾಡಲು ಸಲಹೆ
ಬಿಬಿಎಂಪಿಯು ಪ್ರಸ್ತುತ ಮಳೆನೀರು ಹರಿಯಲು ಹೊಸ ಪೈಪ್ಲೈನ್ಗಳನ್ನು ಆರ್ಎಂಜೆಡ್ ಇಕೋಸ್ಪೇಸ್ ಬಳಿ ಪ್ರವಾಹ ಪೀಡಿತ ಹೊರವರ್ತುಲ ರಸ್ತೆ (ಒಆರ್ಆರ್)ಗೆ ಹಾಕುತ್ತಿದ್ದು ಇಲ್ಲಿಗೆ ತುಷಾರ್ ಗಿರಿನಾಥ್ ಭೇಟಿ ನೀಡಿದರು. ಈ ವೇಳೆ ಇಬ್ಲೂರು ಜಂಕ್ಷನ್ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನೀರಿನ ಹರಿವನ್ನು ತಡೆಯುವಂತೆ ಬಿಬಿಎಂಪಿ ಮುಖ್ಯಾಧಿಕಾರಿ ಎಂಜಿನಿಯರ್ಗಳಿಗೆ ಸೂಚಿಸಿದರು.

ಗುಂಡಿಬಿದ್ದಿರುವ ರಸ್ತೆಗಳಿಂದ ವಾಹನ ಸವಾರರ ಕಂಟಕ
ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಪ್ರಮುಖವಾದ ಸಮಸ್ಯೆ ಇದಕ್ಕೂ ಮುಖ್ಯವಾಗಿ ನಗರದ ಜೀವನಾಡಿಗಳಾಗಿರುವ ರಸ್ತೆಗಳು ಸಮರ್ಪಕವಾಗಿಲ್ಲದೆ ಯಾವಾಗಲೂ ಬಿಬಿಎಂಪಿಯನ್ನು ಟೀಕೆಗೆ ಒಡ್ಡುತ್ತವೆ. ಇಲ್ಲಿನ ಗುಂಡಿಬಿದ್ದಿರುವ ರಸ್ತೆಗಳು ನಿತ್ಯವೂ ವಾಹನ ಸವಾರರ ಕಂಟಕವಾಗಿವೆ. ಮುಂದುವರಿದು ಹಲವು ಜನರ ಪ್ರಾಣಕ್ಕೂ ಎರವಾಗಿ ಪರಿಣಮಿಸಿವೆ. ಈ ವೇಳೆ ಉಂಟಾಗುವ ಸಾರ್ವಜನಿಕ ಆಕ್ರೋಶವನ್ನು ಮಣಿಸಲು ಒಂದಷ್ಟು ಕಾಸುನ್ನು ಆಡಳಿತ ವರ್ಗ ಕೊಡುತ್ತದೆಯೆ ಹೊರತು ಗುಂಡಿಬಿದ್ದ ರಸ್ತೆಯ ದುರಸ್ತಿಗೆ ಮುಂದಾಗಿಲ್ಲ.

ನೀರಿನ ಹರಿವಿಗೆ ಸಾಕಷ್ಟು ಪೂರಕ ವ್ಯವಸ್ಥೆ ಇಲ್ಲ
ಈ ಮಧ್ಯೆ ಇತ್ತೀಚೆಗೆ ಸುರಿದ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು ಬಿಬಿಎಂಪಿಯನ್ನು ಜನರು ಮತ್ತಷ್ಟು ತೆಗಳಲು ದಾರಿ ಮಾಡಿಕೊಟ್ಟಿದೆ. ಸಮರ್ಪಕ ನೀರಿನ ಹೊರ ಹರಿವಿಗೆ ಸಾಕಷ್ಟು ಪೂರಕ ವ್ಯವಸ್ಥೆ ಇಲ್ಲದೆ ಜನರು ವಾಹನ ಚಲಾಯಿಸಲು ಪ್ರಯಾಸ ಪಡುವುದು ನಿತ್ಯವೂ ನಡೆದಿದೆ. ಪ್ರತಿದಿನ ಗುಂಡಿಬಿದ್ದ ರಸ್ತೆಗಳಿಂದ ಹಲವು ಅಪಘಾತಗಳು ನಡೆಯುತ್ತಲೆ ಇವೆ. ಹೀಗಾಗಿ ನಾಗರೀಕ ಸಂಸ್ಥೆ ಬಿಬಿಎಂಪಿ ಈಗ ಕೊಟ್ಟಿರುವ ವಾಗ್ದಾನ ಉಳಿಸಿಕೊಳ್ಳುತ್ತದೆಯೇ ನೋಡಬೇಕಿದೆ.












Click it and Unblock the Notifications