ಬಸವನಗುಡಿಯಲ್ಲಿ ಪರಿಷೆ ಆರಂಭ, ಕಡಲೆಕಾಯಿ ಕೊಳ್ಳಲು ಬನ್ನಿ
ಬೆಂಗಳೂರು, ನವೆಂಬರ್ 25 : ಬೆಂಗಳೂರು ನಗರದ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಚಾಲನೆ ಸಿಕ್ಕಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆ ಕಡಲೆಕಾಯಿ ವ್ಯಾಪಾರಿಗಳಿಂದ ತುಂಬಿ ಹೋಗಿದೆ. ವಿವಿಧ ಪ್ರದೇಶಗಳ ಜನರು ಪರಿಷೆಗೆ ಆಗಮಿಸುತ್ತಿದ್ದಾರೆ.
ಸೋಮವಾರ ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ 2019ರ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು. ನೂರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೊಡ್ಡ ಗಣಪತಿ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಗಣಪತಿಗೆ ಕಡಲೆಕಾಯಿಯ ಅಭಿಷೇಕ ಮಾಡಲಾಯಿತು. ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದ್ದು, ಲಕ್ಷಾಂತರ ಜನರು ಆಗಮಿಸಲಿದ್ದಾರೆ.
ಭಾನುವಾರ ಬೆಳಗ್ಗೆಯಿಂದಲೇ ಬುಲ್ ಟೆಂಪಲ್ ರಸ್ತೆಯಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ ಜೋರಾಗಿತ್ತು. ಬುಲ್ ಟೆಂಪಲ್ ರಸ್ತೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಜೆ ವೇಳೆಗೆ ಸಾವಿರಾರು ಜನರು ಆಗಮಿಸಿದರು.

30 ರಿಂದ 45 ರೂ.ಗೆ ಮಾರಾಟ
ಕಡಲೆಕಾಯಿ ಪರಿಷೆಯಲ್ಲಿ ಒಂದು ಸೇರು ಕಡಲೆಕಾಯಿಗೆ 30 ರಿಂದ 45 ರೂ. ತನಕ ದರವಿದೆ. ಬೇಯಿಸಿದ ಕಡಲೆಕಾಯಿಗೆ 50 ದೂ. ದರ ನಿಗದಿ ಮಾಡಲಾಗಿದೆ. ಶನಿವಾರ, ಭಾನುವಾರವೇ ಸಾವಿರಾರು ಜನರು ಬಂದಿದ್ದು ವ್ಯಾಪಾರಿಗಳಿಗೆ ಉತ್ತಮ ಮಾರಾಟವಾಗಿದೆ.

ವಾಹನ ಸಂಚಾರ ಸ್ಥಗಿತ
ಬುಲ್ ಟೆಂಪಲ್ ರಸ್ತೆ ಕಡಲೆಕಾಯಿ ವ್ಯಾಪಾರಿಗಳಿಂದ ತುಂಬಿ ಹೋಗಿದೆ. ವಿವಿಧ ಪ್ರದೇಶಗಳ ಜನರು ಪರಿಷೆಗೆ ಆಗಮಿಸುತ್ತಿದ್ದಾರೆ. ಆದ್ದರಿಂದ, ಪರಿಷೆ ಮುಗಿಯುವ ತನಕ ಬುಲ್ ಟೆಂಪಲ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜಾಗ
ಬುಲ್ ಟೆಂಪಲ್ ರಸ್ತೆ ಕಡಲೆಕಾಯಿ ಪರಿಷೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಉತ್ತಮ ಜಾಗವಾಗಿದೆ. ಪರಿಷೆಗೆ ಆಗಮಿಸಿರುವ ಜನರು ದೀಪಾಲಂಕೃತ ರಸ್ತೆಯಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ.

ವ್ಯಾಪಾರ ಬಲು ಜೋರು
ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ಮಾತ್ರವಲ್ಲ. ಆಟಿಕೆ, ಕಲಕುಶಲ ವಸ್ತುಗಳು, ಸಿಹಿ ತಿಂಡಿಗಳ ವ್ಯಾಪಾರವೂ ಜೋರಾಗಿದೆ. ಜನರು ಗುಂಪು-ಗುಂಪಾಗಿ ಆಗಮಿಸುತ್ತಿದ್ದು, ಪರಿಷೆಯ ಸಂಭ್ರಮ ಮುಗಿಲು ಮುಟ್ಟಿದೆ.












Click it and Unblock the Notifications