ಗೌರಿ ಹತ್ಯೆಯ ಪ್ರಚೋದಕರನ್ನು ಬಂಧಿಸಿ: ಸರ್ಕಾರಕ್ಕೆ ಬರಗೂರು ಆಗ್ರಹ
ಬೆಂಗಳೂರು, ಜೂನ್ 23: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಯಾರಿಂದಾಗಿದೆ, ಹತ್ಯೆ ಮಾಡಲು ಯಾರು ಪ್ರಚೋದನೆ ನೀಡಿದ್ದಾರೆ ಎನ್ನುವುದು ಪತ್ತೆಯಾಗಬೇಕೇ ಹೊರತು, ಧರ್ಮ, ಜಾತಿಯ ಬಗ್ಗೆ ಚರ್ಚೆಯಾಗಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಹತ್ಯೆ ಮಾಡಿದವರು ಮತ್ತು ಮಾಡಿಸಿದವರು ಯಾರು ಎಂಬುದಷ್ಟೇ ಮುಖ್ಯ. ಆತ ಹಿಂದೂ ಆಗಿರಬಹುದು ಅಥವಾ ಮುಸ್ಲಿಂ ಆಗಿರಬಹುದು, ಜಾತಿ ಧರ್ಮಗಳು ಅಡ್ಡಿಯಾಗಬಾರದು, ತನಿಖೆ ಸ್ವತಂತ್ರವಾಗಿ ನಡೆಯಬೇಕು. ಈ ಹಂತದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.
ಗೌರಿ ಹತ್ಯೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಸಿಲುಕಿಸಲಾಗಿದೆ ಎಂದು ಹಿಂದು ಸಂಘಟನೆಗಳು ಆರೋಪ ಮಾಡಿವೆ. ಮೂಲಭೂತವಾದಿಗಳು ಪ್ರಗತಿಪರ ಸಾಹಿತಿಗಳನ್ನು ಹತ್ಯೆ ಮಾಡಲು ಹಿಟ್ಲಿಸ್ಟ್ ತಯಾರಿಸಿರುವುದು ಅತ್ಯಂತ ಆಘಾತಕಾರಿ.

ಇದರಿಂದ ದೇಶ ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ ಹಾದುಹೋಗುತ್ತದೆ ಎಂಬುದು ಗೊತ್ತಾಗುತ್ತದೆ. ಹಿಟ್ಲಿಸ್ಟ್ ನನ್ನ ಹೆಸರಿರುವುದು ದುರಂತ. ನಾನು ಹಿಂದೂ ಮತ್ತು ಮುಸ್ಲಿಂ ಎರಡೂ ರೀತಿಯ ಮೂಲಭೂತವಾದವನ್ನು ವಿರೋಧಿಸುತ್ತಿದ್ದೇನೆ. ಧರ್ಮ, ಜಾತಿ ನೋಡಿ ಯಾವತ್ತೂ ಚರ್ಚೆ ಮಾಡಿಲ್ಲ. ಆರೋಗ್ಯಕರ ನಿಲುವು ಇರುವ ನನ್ನನ್ನೂ ಹಿಟ್ಲಿಸ್ಟ್ನಲ್ಲಿದ್ದಾರೆ ಎಂದರೆ ರಾಷ್ಟ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಭೇಕು ಎಂದರು.
ಕೋಮುವಾದ ಎಂದರೆ ಅದು ಹಿಂದೂ ಧರ್ಮದಲ್ಲಾದರೂ ಸರಿ, ಮುಸ್ಲಿಂ ಧರ್ಮದಲ್ಲಾದರೂ ಸರಿ. ಸಮಾಜದ ಶಾಂತಿ ಕದಡುವ ಯಾವುದೇ ಕೋಮುವಾದವಾದರೂ ಖಂಡಿಸಲೇಬೇಕು. ಸರ್ಕಾರ ನನ್ನ ಮನೆಗೆ ರಕ್ಷಣೆ ನೀಡಿದೆ. ಮನೆ ಬಳಿ ಗನ್ಮ್ಯಾನ್ ಇದ್ದಾರೆ. ಗೌರಿ ಹತ್ಯೆ ಪ್ರಕರಣದ ತನಿಖೆ ಕ್ಷಿಪ್ರವಾಗಿ ನಡೆಯುತ್ತಿದೆ. ಹತ್ಯೆಗೆ ಪ್ರಚೋದನೆ ನೀಡಿದವರ ಬಂಧನವೂ ಆಗಬೇಕು, ಅದೇ ರೀತಿ ಚಿಂತಕರಾದ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಸರ್ಕಾರ ಭೇದಿಸಬೇಕು ಎಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ ಎಂದರು.












Click it and Unblock the Notifications