ಚುನಾವಣೆಗಾಗಿ ‘ಬನ್ನೇರುಘಟ್ಟ’ ಪಾರ್ಕ್ ರಜೆ ಕ್ಯಾನ್ಸಲ್!
ಬೆಂಗಳೂರು: ಚುನಾವಣೆ ದಿನಕ್ಕಾಗಿ ಏನೆಲ್ಲಾ ತ್ಯಾಗ ಮಾಡಲಾಗ್ತಿದೆ ಅನ್ನೋದು ನಿಮಗೆ ಗೊತ್ತು. ಅದ್ರಲ್ಲೂ ಪ್ರವಾಸಿ ಕೇಂದ್ರಗಳನ್ನೇ ಮುಚ್ಚಿ ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲೇ 'ಬನ್ನೇರುಘಟ್ಟ' ಪಾರ್ಕ್ ಮಾತ್ರ ತನ್ನ ವಾರದ ರಜೆ ಕ್ಯಾನ್ಸಲ್ ಮಾಡಿದೆ. ಅರೆರೆ ಕಾರಣ ಏನು? ಅಂದ್ರಾ, ಆ ಬಗ್ಗೆ ಮಾಹಿತಿ ಮುಂದೆ ಇದೆ ಬನ್ನಿ ತಿಳಿಯೋಣ.
ಬೆಂಗಳೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಪಿಕ್ನಿಕ್ಗಾಗಿ ಹೇಳಿ ಮಾಡಿಸಿದ ಜಾಗ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ವಾಸ ಇರುವ ಬಹುತೇಕ ಕುಟುಂಬಗಳು ತಮ್ಮ ಮಕ್ಕಳ ಜೊತೆ ವೀಕೆಂಡ್ ಸಮಯದಲ್ಲಿ ಇಲ್ಲಿಗೆ ಬಂದು ಕಾಲ ಕಳೆಯುತ್ತಾರೆ. ಹುಲಿ, ಸಿಂಹ, ಆನೆ, ಕರಡಿ ಸಫಾರಿ ಜೊತೆಗೆ ಜೂ ಕೂಡ ಗಮನ ಸೆಳೆಯುತ್ತದೆ. ಇನ್ನು ಚುನಾವಣೆಗೆ ರಜೆ ಸಿಕ್ಕರೆ ಬಿಡ್ತಾರಾ? ಇಲ್ಲ ತಾನೆ. ಆವತ್ತು ಕೂಡ ಮತದಾನಕ್ಕೆ ಬಹುತೇಕರು ಚಕ್ಕರ್ ಹಾಕಿ, ಬನ್ನೇರುಘಟ್ಟಕ್ಕೆ ಬರುವ ಸಾಧ್ಯತೆಯೇ ಇತ್ತು. ಹೀಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಬನ್ನೇರುಘಟ್ಟ ಪಾರ್ಕ್ ಅಧಿಕಾರಿಗಳು.

ಬನ್ನೇರುಘಟ್ಟ ಅಧಿಕಾರಿಗಳ ಚುನಾವಣಾ ತಂತ್ರ!
ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಇನ್ನೇನು ಕೆಲ ಗಂಟೆಗಳಲ್ಲಿ ಶುರುವಾಗಲಿದೆ. ಹೀಗಾಗಿ ಮತದಾನದ ಪ್ರಮಾಣ ಹೆಚ್ಚಿಸಲು ಈ ಬಾರಿ ಖಡಕ್ ಕ್ರಮ ಕೈಗೊಂಡು, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು ಅಂದ್ರೆ ಪ್ರವಾಸಿ ಜಾಗಗಳನ್ನ ಬಂದ್ ಮಾಡಿಸಲಾಗಿದೆ. ಈ ಮೂಲಕ ಜನ ಮನೆಯಲ್ಲಿ ಉಳಿದು ವೋಟ್ ಮಾಡಲಿ ಎಂಬುದೇ ಮುಖ್ಯ ಉದ್ದೇಶ. ಇನ್ನು ಚುನಾವಣಾಧಿಕಾರಿಗಳ ಈ ಉತ್ತಮ ಕೆಲಸಕ್ಕೆ ಬನ್ನೇರುಘಟ್ಟ ಪಾರ್ಕ್ನ ಅಧಿಕಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ಹೇಗೆ ಎಂಬುದನ್ನ ಮುಂದೆ ತಿಳಿಯಿರಿ.
ಚುನಾವಣೆಗಾಗಿ ವಾರದ ರಜೆ ಕ್ಯಾನ್ಸಲ್!
ಹೌದು, ಸಾಮಾನ್ಯವಾಗಿ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ವಾರದ ಪ್ರತಿ ಮಂಗಳವಾರ ಮುಚ್ಚಿರುತ್ತೆ. ಆ ದಿನವನ್ನೇ ಬನ್ನೇರುಘಟ್ಟ ಪಾರ್ಕ್ ಸಿಬ್ಬಂದಿಗೆ ವಾರದ ರಜೆಯಾಗಿ ನೀಡಲಾಗುತ್ತದೆ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆ ಬುಧವಾರ ಬಂದಿದೆ. ಹೀಗಾಗಿ ಮಂಗಳವಾರದ ರಜೆಯನ್ನೇ ಕ್ಯಾನ್ಸಲ್ ಮಾಡಿ ಅದೇ ವಾರದ ರಜೆಯನ್ನ 10-05-2023ರಂದು ಬನ್ನೇರುಘಟ್ಟ ಪಾರ್ಕ್ ಸಿಬ್ಬಂದಿಗೆ ರಜೆ ನೀಡಿ ಉದ್ಯಾನ ಮುಚ್ಚಲು ಆದೇಶಿಸಲಾಗಿದೆ.
ಪಾರ್ಕ್ ಅಧಿಕಾರಿಗಳು ಹೇಳಿದ್ದೇನು?
10-05-2023 ರಂದು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರಜೆ ಘೋಷಣೆ ಮಾಡಲಾಗಿದೆ. ಆದ್ದರಿಂದ ಎಲ್ಲಾ ಘಟಕಗಳಾದ ಮೃಗಾಲಯ, ಸಿಂಹ, ಹುಲಿ, ಕರಡಿ, ಸಸ್ಯಹಾರಿ ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಇತ್ಯಾದಿಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿಯೇ ಇಂದು ಅಂದರೆ ಬನ್ನೇರುಘಟ್ಟ ಪಾರ್ಕ್ನ ಸಾಮಾನ್ಯ ವಾರದ ರಜೆ ದಿನವಾದ ಮಂಗಳವಾರ ಕಾರ್ಯನಿರ್ವಹಿಸಿ, ನಾಳೆಗೆ ರಜೆ ಮುಂದೂಡಲಾಗಿದೆ.
ಒಟ್ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ಈ ಕ್ರಮ ಮೆಚ್ಚುಗೆ ಪಡೆದಿದೆ. ಬನ್ನೇರುಘಟ್ಟ ಪಾರ್ಕ್ ಅಧಿಕಾರಿಗಳ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎನ್ನುತ್ತಿದ್ದಾರೆ.












Click it and Unblock the Notifications