ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!
ಬೆಂಗಳೂರು, ಜೂನ್ 12: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಸುತ್ತಲಿನ ಕಲ್ಲಿನ ಕ್ವಾರಿಗಳ ಲೈಸೆನ್ಸ್ ರದ್ದುಪಡಿಸಲು ಭೂಗರ್ಭ ಹಾಗೂ ಗಣಿ ಇಲಾಖೆಯು ಮುಂದಾಗಿದೆ. ಇಂದಿನಿಂದ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬೀಳಲಿದೆ.
ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಬನ್ನೇರುಘಟ್ಟ ಪ್ರದೇಶದಲ್ಲಿರುವ 10 ಗಣಿಗಾರಿಕೆ ಕಂಪನಿಗಳಿಗೆ ಬೀಗ ಜಡಿಯಲಾಗಿದೆ.
ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು
ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿರುವ ತಿಮ್ಮನಾಯಕನಹಳ್ಳಿಯಲ್ಲಿನ ಎಎಸ್ ಝೆಡ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ 15 ಗಣಿಗಾರಿಕೆ ಕಂಪನಿಗಳು ಅಕ್ರಮವೆಸಗಿದ್ದರ ಪರಿಣಾಮವಾಗಿ 80 ಕೋಟಿ ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಶಿವನಹಳ್ಳಿಯಲ್ಲಿ 5 ಕಂಪನಿಗಳಿಗೆ ಬೀಗ ಜಡಿಯಲಾಗಿತ್ತು.
ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ತಪಾಸಣೆ ಮಾಡಿದ್ದು, 15 ಗಣಿಗಾರಿಕೆ ಕಂಪನಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 1-10 ಕಿಮೀ ವ್ಯಾಪ್ತಿಯಲ್ಲಿ ಹೆಚ್ಚು ಗಣಿಗಾರಿಕೆ ಮಾಡಿದ್ದು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚು ಗಣಿಗಾರಿಕೆ ಮಾಡಿರುವುದಷ್ಟೇ ಅಲ್ಲದೇ, ಮಾಲಿನ್ಯ ತಡೆಗೆ ಇರುವ ನಿಯಮಗಳನ್ನು ಪಾಲನೆ ಮಾಡದೇ ಇರುವುದು, ಗಡಿಯನ್ನು ಸರಿಯಾಗಿ ಪಾಲನೆ ಮಾಡಿರುವುದೂ ಸೇರಿದಂತೆ ಗಂಭೀರವಾದ ತಪ್ಪುಗಳೂ ನಡೆದಿವೆ. ಗಣಿಗಾರಿಕೆ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿ ಎನ್ಎಸ್ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಪರಿಸರ ತಜ್ಞರು ಹಾಗೂ ಉದ್ಯಾನದ ಸುತ್ತಲಿನ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖೆ ಲೈಸೆನ್ಸ್ ರದ್ದುಪಡಿಸುತ್ತಿದೆ. ಈ ಕುರಿತು ನಿವೃತ್ತ ನ್ಯಾಯಾಧೀಶ ಎಂ.ಎಫ್. ಸಾಲ್ಡಾನಾ ಅವರು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ 47 ಗ್ರಾಮಗಳ ಜನರ ಜೀವನಕ್ಕೆ ಎರವಾಗಿದ್ದ ಕಲ್ಲು ಗಣಿಗಾರಿಕೆ ಗೆ ಕೊನೆಗೂ ಬ್ರೇಕ್ ಬೀಳುತ್ತಿರುವುದು ಸ್ವಾಗತಾರ್ಹ. ಭವಿಷ್ಯದಲ್ಲಿ ಗಣಿ ಮಾಲೀಕರು ಇತ್ತ ದೃಷ್ಟಿ ಹರಿಸದಂತೆ ಇಲ್ಲಿನ ಜನರು ಸದಾ ಜಾಗೃತಿಯಿಂದ ಇರಬೇಕು ಎಂದು ಅವರು ಹೇಳಿದ್ದರು.