ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶ ಕಡಿತ!
ಬೆಂಗಳೂರು, ನವೆಂಬರ್ 11 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಮರು ಪರಿಶೀಲನೆ ಮಾಡಲಾಗಿದೆ. 286.96 ಚದರ ಕಿ.ಮೀ. ಇದ್ದ ವಲಯವನ್ನು 168.84 ಚದರ ಕಿ.ಮೀ.ಗೆ ಕಡಿಮೆ ಮಾಡಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕೇಂದ್ರ ಪರಿಸರ ಖಾತೆ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಮರು ವಿಂಗಡನೆ ಮಾಡಿ, ಕರಡು ಪ್ರತಿಯನ್ನು ಹೊರಡಿಸಿದೆ. ಹೊಸ ವಲಯದಲ್ಲಿ ಕೇವಲ 77 ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರಲಿವೆ. ಹಿಂದೆ 147 ಗ್ರಾಮಗಳು ಸೇರಿದ್ದವು.
ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 168.84 ಚದರ ಕಿ.ಮೀ.ಗೆ ಕಡಿಮೆ ಮಾಡಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸುತ್ತ-ಮುತ್ತ ಉಳಿದಿರುವ ಈ ಹಸಿರು ವಲಯವನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

ಕನಕಪುರ ಮತ್ತು ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಕಡಿತಗೊಳಿಸಲಾಗಿದೆ. ಕಡಿಮೆ ಮಾಡಿರುವ ಪ್ರದೇಶದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಯಬಹುದು ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರ ಪ್ರೇಮಿಗಳು ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕರಡು ಪ್ರತಿಗೆ ಆಕ್ಷೇಪಣೆಯನ್ನು ಸಲ್ಲಿಸಲು ಕೇಂದ್ರ ಸರ್ಕಾರ 60 ದಿನಗಳ ಗಡುವು ನೀಡಿದೆ.
ಪರಿಸರ ಸೂಕ್ಷ್ಮ ವಲಯ ಕಡಿತಗೊಳಿಸಿರುವ ಹೊಸ ಆದೇಶ ಜಾರಿಗೆ ಬರುವ ತನಕ 2016ರಲ್ಲಿ ನೀಡಲಾಗಿರುವ ಆದೇಶ ಜಾರಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications