ಬೆಂಗಳೂರಿನಲ್ಲಿ ಇದೇನಿದು ಟೆಕ್ಕಿಯ ಮಂಗ್ಯಾಟ?
ಬೆಂಗಳೂರು, ಜ.20: ಯುವ ಮನಸ್ಸುಗಳು ಇಷ್ಟೊಂದು ವ್ಯಗ್ರಗೊಂಡಿವೆಯಾ? ಬೆಂಗಳೂರಿನಲ್ಲಿ ಕೋತಿಗಳೇ ಅಪರೂಪದ. ಅಂತಹುದರಲ್ಲಿ ಅತಿಥಿಗಳಿಂತೆ ಸದಾ ಮನೆಗೆ ಬಂದು ಕಾಟ ಕೊಡುತ್ತಿದ್ದ ಕೋತಿಗಳಿಗೆ ಸಾಫ್ಟ್ವೇರ್ ಇಂಜಿನಿಯರೊಬ್ಬ ಸೀದಾ ಗುಂಡಿಟ್ಟು ಪರಲೋಕಕ್ಕೆ ಕಳುಹಿಸಿದ್ದಾನೆ ಭೂಪ! ಬೆಂಗಳೂರಿನಲ್ಲಿ ಇಂತಹ ಪ್ರಕರಣ ನಡೆದಿರುವುದು ಇದೇ ಮೊದಲು.
ವನ್ಯಜೀವಿ ಹತ್ಯೆ ಮಹಾಪರಾಧ ಎಂಬ ತಪ್ಪಿನ ಅರಿವಾಗಿ ಟೆಕ್ಕಿ ಇದೀಗ ಕಾಲ್ಕಿತ್ತಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಅವನಿಗೊಂದಿಷ್ಟು ಪಾಠ ಕಲಿಸಲು, ಅವನ ಬೆನ್ನುಹತ್ತಿದ್ದಾರೆ.
ಏರ್ ಗನ್ನಿಂದ ಶೂಟ್ ಔಟ್ ?: ( ಹೆಸರಘಟ್ಟ:ವಿಷದ ಮುದ್ದೆ ತಿನ್ನಿಸಿ 12 ಕೋತಿಗಳ ಹತ್ಯೆ )

ಕೇರಳ ಮೂಲದ ರೂಪೇಶ್ ಕುಮಾರ್ ಈ ದುರ್ವರ್ತನೆ ತೋರಿರುವ.ಟೆಕ್ಕಿ. ಕೋರಮಂಗಲದ ರಹೇಜಾ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟಿನ 2ನೇ ಮಹಡಿಯಲ್ಲಿರುವ ರೂಪೇಶ್, ಕೋತಿಗಳ ಕಾಟದಿಂದ ಬೇಸತ್ತಿದ್ದ. ಶನಿವಾರ ಬೆಳಗ್ಗೆ 10 ಗಂಟೆಯಲ್ಲಿ ಎರಡನೇ ಮಹಡಿಯಿಂದ ಏರ್ ಗನ್ನಿಂದ ಶೂಟ್ ಮಾಡಿದ್ದು, ಎರಡು ಕೋತಿಗಳು ನೆಲಕ್ಕುರುಳಿವೆ. ಇದನ್ನು ಕಂಡ ಅಕ್ಕಪಕ್ಕದವರು ವನ್ಯ ಜೀವಿ ಸಂರಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಕೆಅರ್ ಪುರಂ ವಲಯ ಅರಣ್ಯ ಅಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿನ ಪರಿಶೀಲಿಸಿದ ಪ್ರಾಜೆಕ್ಟ್ ಪ್ರೊಟೆಕ್ಟ್ ವೈಲ್ಡ್ ಲೈಫ್ ಸ್ವಯಂ ಸೇವಾ ಸಂಸ್ಥೆಯ ಸ್ವಯಂ ಸೇವಕರು 'ಗಂಡು ಕೋತಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಗರ್ಭ ಧರಿಸಿದ್ದ ಹೆಣ್ಣು ಕೋತಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದೆ' ಎಂದು ತಿಳಿಸಿದ್ದಾರೆ.

ಮೃತ ಕೋತಿಗಳನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋತಿಗಳಿಗೆ ಗುಂಡೇಟು ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಗುಂಡೇಟಿನಿಂದ ಸತ್ತಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ವಿರುದ್ಧ ವನ್ಯಜೀವಿ ಸಂಕರಕ್ಷಣೆ ಕಾಯ್ದೆ ಅಡಿ ಜಾಮೀನುರಹಿತ ಬಂಧನ ಕ್ರಿಮಿನಲ್ ಕೇಸು ದಾಖಲಿಸಿದ್ದೇವೆ. ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ವರದಿ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಕೆಆರ್ ಪುರಂ ವಲಯ ಅರಣ್ಯ ಅಧಿಕಾರಿ ಬಿ ವೀರಣ್ಣ ತಿಳಿಸಿದ್ದಾರೆ.
ರಹೇಜಾ ಅಪಾರ್ಟ್ಮೆಂಟ್ ಸಮೀಪ ಐದು ಕೋತಿಗಳ ಚೊಕ್ಕ ಸಂಸಾರ ಅದಾಗಿತ್ತು. ಗರ್ಭ ಧರಿಸಿದ್ದ ಹೆಣ್ಣು ಕೋತಿ ಗುಂಡೇಟಿನಿಂದ ನೆಲಕ್ಕೆ ಬೀಳುತ್ತಿದ್ದಂತೆ ಅದರ ಎರಡು ಮರಿಗಳು ಕಿರುಚಾಡತೊಡಗಿದವು. ರಕ್ತ ಸೋರಿ ನಿತ್ರಾಣ ಸ್ಥಿತಿಯಲ್ಲಿದ್ದ ಅಮ್ಮನನ್ನು ಎಬ್ಬಿಸಲು ಮರಿ ಕೋತಿಗಳು ಪ್ರಯತ್ನಿಸುತ್ತಿದ್ದವು. ಸತ್ತ ಕೋತಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಲು ಹೋದಾಗಲೂ ಮರಿ ಕೋತಿಗಳು ಕಿರಿಚಾಡುತ್ತಿದ್ದವು.












Click it and Unblock the Notifications