ಟೆಕ್ಕಿ ಸಾವು, ಸಾಫ್ಟ್ ವೇರ್ ಉದ್ಯೋಗಿ ರೇಪ್ ಯತ್ನ

ಬೈಕ್ ಡಿಕ್ಕಿ: ಎಚ್ಎಎಲ್ ಸಮೀಪ ವರ್ತೂರು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಲ್ಲಿ ಎರಡು ಬೈಕುಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.
HSR Layoutನ ಬೆಳ್ಳಂದೂರು ನಿವಾಸಿ ಪಡಾಲ ಸೂರ್ಯನಾರಾಯಣ ರೆಡ್ಡಿ (23) ಮೃತರು. ಈ ಘಟನೆಯಲ್ಲಿ ಗಾಯಗೊಂಡಿರುವ ಗಜ್ಜಲ್ ಧಿರೀಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ತಮ್ಮ ಬೈಕಿನಲ್ಲಿ ಸ್ನೇಹಿತನ ಜತೆಗೂಡಿ ರೆಡ್ಡಿ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರು ಮೂಲತಃ ಆಂಧ ಪ್ರದೇಶದವರಾಗಿದ್ದು, ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಮನೆಗೆ ಮರಳುವಾಗ ವರ್ತೂರು ಮುಖ್ಯ ರಸ್ತೆಯಲ್ಲಿ ಮುಂದೆ ಚಲಿಸುತ್ತಿದ್ದ ಬೈಕ್ ಸವಾರ ಹಠಾತ್ ಬ್ರೇಕ್ ಹಾಕಿದ್ದು, ಆ ವೇಳೆ ಅತಿ ವೇಗದಲ್ಲಿ ಬೈಕ್ ಸಾಗುತ್ತಿದ್ದರಿಂದ ನಿಯಂತ್ರಣ ತಪ್ಪಿ ಬೈಕಿನಿಂದ ರೆಡ್ಡಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಕ್ಕಿಯಿಂದ ಅತ್ಯಾಚಾರಕ್ಕೆ ಯತ್ನ:
ಮನೆ ಮುಂದೆ ಆಟವಾಡುತ್ತಿದ್ದ 8 ವರ್ಷದ ಪೋರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದ ಜಕ್ಕಸಂದ್ರದಲ್ಲಿ ಮೂರನೆ ತರಗತಿಯ ಬಾಲಕಿ ತನ್ನ ಮನೆ ಮುಂದೆ ಶನಿವಾರ ಸಂಜೆ 7 ಗಂಟೆಯಲ್ಲಿ ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಚೆಂಡು ಪಕ್ಕದ ಮನೆಯ ಕಾಂಪೌಂಡಿನೊಳಕ್ಕೆ ಬಿದ್ದಿತ್ತು. ಚೆಂಡು ತರಲು ಹೋದಾಗ ಅಲ್ಲಿದ್ದ ಯುವಕ ತಿಂಡಿ ಕೊಡುವುದಾಗಿ ಹೇಳಿ ಮನೆಗೆ ಕರೆದೊಯ್ದಿದ್ದಾನೆ.
ಆಟವಾಡುತ್ತಿದ್ದ ಮಗು ದಿಢೀರನೆ ಕಾಣೆಯಾದಾಗ ತಾಯಿ ಮಗುವನ್ನು ಹುಡುಕುತ್ತಿದ್ದಾಗ ಪಕ್ಕದ ಮನೆ ಅಂಕಲ್ ಮನೆಗೆ ಹೋದ ಬಗ್ಗೆ ಅಲ್ಲಿದ್ದ ಮಕ್ಕಳು ಮಾಹಿತಿ ನೀಡಿದ್ದಾರೆ. ಅದರಂತೆ ತಾಯಿ ಆರೋಪಿಯ ಮನೆಯತ್ತ ಹೋಗಿ ಕಿಟಕಿಯಿಂದ ನೋಡಿದಾಗ ಆರೋಪಿ ತನ್ನ ಮಗಳ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದುದ್ದು ಕಣ್ಣಿಗೆ ಬಿತ್ತು. ಮಗಳ ಬಟ್ಟೆ ಬಿಚ್ಚುತ್ತಿದ್ದ. ಜೋರಾಗಿ ಕೂಗಿಕೊಂಡೆ. ಆಗ ಬಾಗಿಲು ತೆರೆದು ಆರೋಪಿ ಅಲ್ಲಿಂದ ಓಡಿಹೋದ. ತಕ್ಷಣ ಪೊಲೀಸರಿಗೆ ತಿಳಿಸಿ, ಮಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದೆವು ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications