ಫ್ಲೈಓವರ್ನಲ್ಲಿ ಅಡ್ಡಾದಿಡ್ಡಿ ಚಲಿಸಿದ ವ್ಯಾಗ್ನಾರ್: 3 ಸಾವು
ಕೆಂಗೇರಿ ಉಪನಗರದ ಜೆ ಭವ್ಯಶ್ರೀ (23), ಜಾಲಹಳ್ಳಿಯ ಜಿ ಪ್ರಸಾದ್ (21) ಹಾಗೂ ನವೀನ್ ಕುಮಾರ್ (23) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ವ್ಯಾಗ್ನಾರ್ ಕಾರಿನ ಭರತ್ ಕುಮಾರ್, ಸಾಂಬಶಿವ, ಗೂಡ್ಸ್ ಆಟೋ ಚಾಲಕ ಶಿವರಾಜ್ ಹಾಗೂ ಇನ್ನೋವಾ ಕಾರಿನಲ್ಲಿದ್ದ ರಾಮರಾಜ್, ಅವರ ಪತ್ನಿ ಸರಸ್ವತಮ್ಮ, ಪುತ್ರ ಸುರೇಶ್, ಸೊಸೆ ವಾಣಿ ಹಾಗೂ ಕಾರಿನ ಚಾಲಕ ಸೋಮಸುಂದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಭವ್ಯಶ್ರೀ, ಪ್ರಸಾದ್ ಹಾಗೂ ಗಾಯಗೊಂಡ ಭರತ್ ಒಂದೇ ಕಂಪನಿಯಲ್ಲಿ ಕೆಲಸದಲ್ಲಿದ್ದರು.
ಮೊದಲು ಕೈಕೊಟ್ಟಿದ್ದು ವ್ಯಾಗ್ನಾರ್: ಮೈಸೂರಿನಲ್ಲಿ ಸ್ನೇಹಿತನ ಮದುವೆ ಮುಗಿಸಿಕೊಂಡು ಜಾಲಹಳ್ಳಿಗೆ ವಾಪಸಾಗುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕ ಭರತ್ ಎಸ್ ಕುಮಾರ್ ನಿಯಂತ್ರಣ ತಪ್ಪಿದ ವ್ಯಾಗ್ನಾರ್ ಕಾರು ಸುಮನಹಳ್ಳಿ ಫ್ಲೈಓವರ್ನ ರಸ್ತೆ ವಿಭಜಕ್ಕೆ (Sumanahalli Outer Ring Road) ಅಪ್ಪಳಿಸಿ, ಮತ್ತೂಂದು ಬದಿ ರಸ್ತೆಗೆ ನುಗ್ಗಿದೆ. (ಸರಕು ವಾಹನ ಪಲ್ಟಿ: 22 ಮಂದಿ ಸಾವು)
ಆಗ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ಆಟೋ ಮತ್ತು ಇನ್ನೋವಾ ಕಾರಿಗೆ ವ್ಯಾಗ್ನಾರ್ ಡಿಕ್ಕಿ ಹೊಡೆದಿದೆ. ವ್ಯಾಗ್ನರ್ ಕಾರಿನಲ್ಲಿದ್ದ ಭವ್ಯ ಮತ್ತು ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತಲೆಗೆ ಪೆಟ್ಟು ಬಿದ್ದಿದ್ದ ನವೀನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇನ್ನು, ಗೂಡ್ಸ್ ಆಟೋ ಚಾಲಕ ಶಿವರಾಜು ಬಲಗಾಲು ತುಂಡಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.