ಬೆಂಗ್ಳೂರಲ್ಲಿ ಸಿಕ್ತು ಮಣಿಪುರ ಉಗ್ರನ 1 ಕೋಟಿ ಹಣ
ಬೆಂಗಳೂರು, ನ.5 : ಮಣಿಪುರದ ನಿಷೇಧಿತ ಉಗ್ರಗಾಮಿ ಸಂಘಟನೆಯೊಂದು ಬೆಂಗಳೂರಿನಲ್ಲಿ ಸ್ಥಳೀಯ ಉದ್ಯಮಿಯೊಬ್ಬರ ಜತೆಗೂಡಿ ಭೂ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ ಉದ್ಯಮಿಯಿಂದ 1.14 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಗುಹಹಟಿ ವಿಭಾಗದ ಎನ್ಐಎ ತಂಡ ಭಾನುವಾರ ಬೆಂಗಳೂರಿನಲ್ಲಿ, ಮಣಿಪುರದ ನಿಷೇಧಿತ ಕಾಂಗ್ಲಿಪಾಕ್ ಜನ ಕ್ರಾಂತಿ ಪಕ್ಷ (ಪ್ರಿಪಾಕ್)- ಕಾಂಗ್ಲಿಪಾಕ್ ಜನ ಸಂಯುಕ್ತ ಪಕ್ಷ (ಯುಪಿಪಿಕೆ) ಸಂಘಟನೆ ಪ್ರಧಾನ ಕಾರ್ಯದರ್ಶಿ ಎನ್.ಶಾಂತಿ ಮೀಟಿ ಎಂಬುವರಿಗೆ ಸೇರಿದ ಹಣವನ್ನು ವಶಪಡಿಸಿಕೊಂಡಿದೆ.

ಆದರೆ, ಮಣಿಪುರಿ ಉಗ್ರನ ಹಣ ಹೊಂದಿದ್ದ ಬೆಂಗಳೂರಿನ ಉದ್ಯಮಿ ಹೆಸರು ಹಾಗೂ ಆತನ ಹಿನ್ನೆಲೆ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಎನ್ಐಎ ಅಧಿಕಾರಿಗಳು ನಿರಾಕರಿಸಿದ್ದಾರೆ. ದಾಳಿ ನಡೆಸಿದ ವೇಳೆ ಶಾಂತಿ ಮೀಟಿಯಿಂದ ಹಣ ಸ್ವೀಕರಿಸಿರುವ ಬಗ್ಗೆ ಉದ್ಯಮಿ ತಪ್ಪೊಪ್ಪಿಕೊಂಡಿದ್ದಾರೆ. ಶಾಂತಿ ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂ-ಮಣಿಪುರದ ಉಗ್ರಗಾಮಿ ಸಂಘಟನೆ ಪ್ರಮುಖರು, ದೇಶದ ವಿವಿಧ ರಾಜ್ಯಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಅನ್ವಯ ಎನ್ಐಎ ತನಿಖೆ ನಡೆಸುತ್ತಿತ್ತು. ತನಿಖೆ ವೇಳೆ ಬೆಂಗಳೂರು ರಿಯಲ್ ಎಸ್ಟೇಟ್ ವ್ಯವಹಾರದ ಕುರಿತು ಮಾಹಿತಿ ಸಂಗ್ರಹಿದಾಗ, ಶಾಂತಿ ಮೀಟಿ ಮತ್ತು ಸ್ಥಳೀಯ ಉದ್ಯಮಿ ಸಹಭಾಗಿತ್ವದ ಭೂ ವ್ಯವಹಾರ ಬೆಳಕಿಗೆ ಬಂದಿದೆ.
ಪೊಲೀಸ್ ಆಗಿದ್ದರು : ನಿಷೇಧಿತ ಉಗ್ರಗಾಮಿ ಸಂಘಟನೆಯ ಶಾಂತಿ ಮೀಟಿ ಮೊದಲು ಅಸ್ಸಾಂ ರಾಜ್ಯದ ಪೊಲೀಸ್ ಇಲಾಖೆಯ ವೈರ್ಲೆಸ್ ವಿಭಾಗದಲ್ಲಿ ನೌಕರರಾಗಿದ್ದರು. ನಂತರ ಸ್ಥಳೀಯ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿಕೊಂಡು, ಸರ್ಕಾರಿ ಉದ್ಯೋಗ ತೊರೆದಿದ್ದರು ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications