ರಕ್ತದಾನಿ ಸಬ್ ಇನ್ಸ್ ಪೆಕ್ಟರ್ ಕೃಷ್ಣ ಸಿಂಗ್ ಇನ್ನಿಲ್ಲ

ಅಂದರೆ ರಕ್ತ ಎಷ್ಟೊಂದು ಅಮೂಲ್ಯ ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದ ಕೃಷ್ಣ ಸಿಂಗ್ ಅವರು ತಾವೂ ರಕ್ತದಾನ ಮಾಡಿ, ಸುಮಾರು 5,000 ಮಂದಿಯಿಂದ ರಕ್ತದಾನ ಮಾಡಿಸಿ, ಮಾನವೀಯತೆ ಮೆರೆದಿದ್ದವರು.
1979ರಲ್ಲಿ ಪೇದೆಯಾಗಿ ಪೊಲೀಸ್ ಇಲಾಖೆಗೆ ಸೇರಿದ್ದ ಕೃಷ್ಣ ಸಿಂಗ್ ಅವರು ಕಳೆದ ವರ್ಷ ಜುಲೈನಲ್ಲಿ ASI ಆಗಿ ನಿವೃತ್ತಿ ಹೊಂದಿದ್ದರು. ಈ ಸೇವಾವಧಿಯಲ್ಲಿ ಅವರು ಅನನ್ಯ ಮತ್ತು ಅಪರೂಪದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುತ್ತಿದ್ದ ವಾಹನ ಸವಾರರನ್ನು ರಕ್ತದಾನಕ್ಕೆ ಪ್ರೇರೇಪಿಸುತ್ತಿದ್ದರು.
ಅವರ ಹೆಸರು, ವಿಳಾಸ, ಮೊಬೈಲ್ ನಂಬರ್ ಪಡೆದು ತುರ್ತು ಕರೆ ಬಂದರೆ ಬಂದು ರಕ್ತ ಕೊಟ್ಟು ಹೋಗಬೇಕು ಎಂದು ಒತ್ತಾಯ ಪೂರ್ವಕವಾಗಿ ಹೇಳಿಕಳುಹಿಸುತ್ತಿದ್ದರು. ಹಾಗೆ, ಅವರ ಮಾತಿಗೆ ಬೆಲೆ ಕೊಟ್ಟು 4990 ಮಂದಿ ರಕ್ತದಾನ ಮಾಡಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.
'Blood' Singh: ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ASI ಆಗಿ ನಿವೃತ್ತಿ ಹೊಂದಿದ್ದ ಕೃಷ್ಣ ಸಿಂಗ್ ಅವರು ಚಾಮರಾಜಪೇಟೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಐದು ದಿನಗಳ ಹಿಂದೆ ಶ್ವಾಸಕೋಶದ ತೊಂದರೆ ಉಂಟಾಗಿದ್ದರಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾದರು.
ಕೃಷ್ಣ ಸಿಂಗ್ ಅವರ ನಿಧನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಬಂಧುಮಿತ್ರರರು ಕಂಬನಿ ಮಿಡಿದಿದ್ದಾರೆ. ಅವರ ಪುತ್ರ ನವೀಮ್ ಕುಮಾರ್ ಸಿಂಗ್ ಅವರು ತಮ್ಮ ತಂದೆಯ ಸಮಾಜಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
'Blood' Singh ಹಿಂದಿನ ಕಥೆ-ವ್ಯಥೆ:
ಅದು 1985ರ ದಿನಗಳು... ಕೃಷ್ಣ ಸಿಂಗ್ ಅವರ ಮೂವರು ಪುತ್ರಿಯರ ಪೈಕಿ ಕೊನೆಯವಳು ಅಕಾಲಿಕ ಸಾವು ಕಂಡಿದ್ದಳು. ನಿಮೋನಿಯಾದಿಂದ ಬಳಲುತ್ತಿದ್ದ ಶೈಲಜಾಗೆ ಸಕಾಲದಲ್ಲಿ ರಕ್ತ ಲಭ್ಯವಾಗದೆ ಮೃತಪಟ್ಟಿದ್ದರು. ಅಂತಹ ಸಾವು ಯಾರಿಗೂ ಬರಬಾರದೆಂದು ಅಂದೇ ನಿಶ್ಚಯಿಸಿದ ಕೃಷ್ಣ ಸಿಂಗ್, ಜನರಿಂದ (ಹೆಚ್ಚಾಗಿ ತಪ್ಪಿತಸ್ಥ ವಾಹನ ಸವಾರರಿಂದ) ರಕ್ತ ಸಂಗ್ರಹಕ್ಕೆ ಮುಂದಾಗಿದ್ದರು.












Click it and Unblock the Notifications