58ನೇ ಬೆಂಗಳೂರು ಗಣೇಶೋತ್ಸವಕ್ಕೆ ಸೆಪ್ಟೆಂಬರ್ 01 ತೆರೆ
ಬೆಂಗಳೂರು, ಆಗಸ್ಟ್ 31: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ-ಶ್ರೀ ವಿದ್ಯಾರಣ್ಯ ಯುವಕ ಸಂಘ ವತಿಯಿಂದ ಆಯೋಜಿಸಿರುವ 58ನೇ ಬೆಂಗಳೂರು ಗಣೇಶೋತ್ಸವಕ್ಕೆ ನಾಳೆ(ಸೆಪ್ಟೆಂಬರ್ 01) ತೆರೆ ಬೀಳಲಿದೆ.
Recommended Video
ಸೆಪ್ಟೆಂಬರ್ 1, 2020ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಸಂಜೆ 5 ಗಂಟೆಯಿಂದ ಶ್ರೀ ಗಣೇಶ ವಿಸರ್ಜನೆ ಕಾರ್ಯಕ್ರಮ ನೆರವೇರಲಿದೆ.
ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿರುವ ಗಣೇಶ ಮಂಟಪದಲ್ಲಿ ವಿನಾಯಕ ಮೂರ್ತಿಯನ್ನು ಆಗಸ್ಟ್ 22 ರಂದು ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ನಿರಂತರವಾಗಿ ಪ್ರತಿ ದಿನ ಪೂಜೆ ನಡೆದರೆ, ದೈನಂದಿನ ಪೂಜೆಯನ್ನು ಕೂಡ ವರ್ಚುವಲ್ ಆಗಿ ತೋರಿಸಲಾಗಿತ್ತು.ಪ್ರತಿ ದಿನ ಸಂಜೆ ಉತ್ಸವಕ್ಕಾಗಿ ವೇದಿಕೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಒಟ್ಟು 10 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನೇರಪ್ರಸಾರವಾಗಿದ್ದು , ಆನ್ ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದ ಸಂಗೀತ ಪ್ರಿಯರು ಸಂಭ್ರಮ ಪಟ್ಟಿದ್ದರು. ಉತ್ಸವದ 10ನೇ ದಿನದಂದು ಖ್ಯಾತ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತಮಯ ಸಂಜೆ ಕಾರ್ಯಕ್ರಮ ಜರುಗಿತು.
ಬೆಂಗಳೂರು ಗಣೇಶ ಉತ್ಸವದ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು, 11 ದಿನಗಳ ಉತ್ಸವದ 58 ನೇ ಆವೃತ್ತಿಯನ್ನು ಈ ವರ್ಷ ವರ್ಚುವಲ್ ಆಗಿ ನಡೆಸಲಾಗಿತ್ತು. ವೇದಿಕೆ ಮುಖಾಂತರ ಕಲೆ ಮತ್ತು ಸಂಗೀತ ಪ್ರಿಯರ ಮನಗೆಲ್ಲುವಂತ ಕಾರ್ಯಕ್ರಮ ನೀಡಲಾಗಿತ್ತು. ಕಾರ್ಯಕ್ರಮಗಳನ್ನು ಎಫ್ಬಿ, ಯೂಟ್ಯೂಬ್ ಮತ್ತು ಇನ್ಸ್ಟಾ ಗ್ರಾಂನಲ್ಲಿ ನೇರಪ್ರಸಾರ ಮೂಲಕ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ನಾಳೆ ಸೆ.1 ರಂದು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ತೆರೆ ಬೀಳಲಿದೆ.












Click it and Unblock the Notifications