ಸಿಬಿಐಗೆ ವರವಾದ ಫೇಸ್ ಬುಕ್: ಭಾರಿ ವಂಚಕನ ಸೆರೆ
ಪ್ರಕರಣವನ್ನು ಬೇಧಿಸುವಲ್ಲಿ ಬೆಂಗಳೂರು ಸಿಬಿಐ ಪೊಲೀಸರು ಸ್ವಲ್ಪ ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. 24 ವರ್ಷಗಳ ಹಿಂದೆಯೇ 67 ಲಕ್ಷ ರೂ ವಂಚಿಸಿ, ಕಣ್ಮರೆಯಾಗಿದ್ದ ಮುಂಬೈ ಮೂಲದ ಭಲೆ ವಂಚಕನನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ!
ಆದರೆ ಬರೋಬ್ಬರಿ 24 ವರ್ಷಗಳಿಂದ ಭೂಗತನಾಗಿದ್ದವನನ್ನು ಹೊರಗೆಳೆಯಲು ಕೊನೆಗೆ ಫೇಸ್ ಬುಕ್ ಸಾಧನವೇ ಬರಬೇಕಾಯ್ತು. 24 ವರ್ಷಗಳ ಹಿಂದೆ ಫೇಸ್ ಬುಕ್ ಹಾಗಿರಿಲಿ, ಪೊಲೀಸರ ಬಳಿ ಕಂಪ್ಯೂಟರೂ ಇರಲಿಲ್ಲ, ಮೊಬೈಲೂ ಇರಲಿಲ್ಲ. ಆದರೆ ಇದೀಗ thanks to facebook ಅನ್ನುವಂತೆ ಮುಂಬೈನ ದೀಪಕ್ ಪೋದ್ದಾರ್ ಎಂಬ ಮಹಾವಂಚಕನನ್ನು ಸಿಬಿಐನವರು ಬಂಧಿಸಿದ್ದಾರೆ.
ಅದು 1985 ರಿಂದ 1989ರ ಅವಧಿಯಲ್ಲಿ ನಡೆದಿರುವ ಕರ್ಮಕಾಂಡವಿದು. ಈ ಅವಧಿಯಲ್ಲಿ ಹಡಗುಗಳ ಮೂಲಕ ವಿದೇಶಿ ಸರಕು ವಿನಿಮಯದಲ್ಲಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಒಟ್ಟು 67.15 ಲಕ್ಷ ರೂ ವಂಚಿಸಿದ್ದ. ತನಿಖೆಯಿಂದ ಈ ವಂಚನೆ ಬೆಳಕಿಗೆ ಬಂದಿತ್ತು. ಹಾಗಾಗಿ 1996ರ ಡಿ. 30ರಂದು ಪೋದ್ದಾರ್ ವಿರುದ್ಧ ಫೋರ್ಜರಿ, ವಂಚನೆ ಮತ್ತು ಪಿತೂರಿ ಆರೋಪದಡಿ ಸಿಬಿಐ ಅಧಿಕಾರಿಗಳು ಕೋರ್ಟಿಗೆ ಚಾರ್ಜ್ ಷೀಟ್ ಸಲ್ಲಿಸಿದ್ದರು.
ತನ್ನನ್ನು ಬಂಧಿಸುವ ಸುಳಿವು ಸಿಗುತ್ತಿದ್ದಂತೆ ಆರೋಪಿ ಪೋದ್ದಾರ್ ಭೂಗತನಾಗಿದ್ದ. ಅವನ ಬಗ್ಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆದರೆ 24 ವರ್ಷಗಳ ನಂತರ ಬಂತಲ್ಲಾ ಫೇಸ್ ಬುಕ್ ಪೊಲೀಸರ ಕೈಹಿಡಿಯಿತು. ಇದನ್ನು ಸಾಕಾರಗೊಳಿಸಿದವರು ಸಿಬಿಐ ಇನ್ಸ್ ಪೆಕ್ಟರ್ ರೂಪೇಶ್ ಶ್ರೀವಾತ್ಸವ್ ಎಂಬ ದಕ್ಷ ಅಧಿಕಾರಿ. ಸೋ ಆಲ್ ಕ್ರೆಡಿಟ್ಸ್ ಗೋಸ್ ಟು ಶ್ರೀವಾತ್ಸವ್!
ಫೇಸ್ ಬುಕ್ ಜಾಲಾಡುತ್ತಿದ್ದ ಇನ್ಸ್ ಪೆಕ್ಟರ್ ಶ್ರೀವಾತ್ಸವ್ ಅವರ ಕಣ್ಣಿಗೆ ಪೋದ್ದಾರನ ಮಕ್ಕಳನ್ನು ಹೋಲುವಂತಹ ವ್ಯಕ್ತಿಗಳ ಪ್ರೊಫೈಲ್ ಗಳು ಬಿದ್ದಿವೆ. ತಕ್ಷಣ ಅವರಲ್ಲಿದ್ದ ಪೊಲೀಸ್ ಬುದ್ಧಿ ಜಾಗೃತವಾಗಿದೆ. ತಡಮಾಡದೆ ವಿಚಾರಣೆಗಿಳಿದ್ದಾರೆ. ಮಕ್ಕಳನ್ನು ವಿಚಾರಿಸಲಾಗಿ ದೀಪಕ್ ಪೋದ್ದಾರಾ ? ಅವರು ಯಾಋಓ ನಮಗೆ ಗೊತ್ತಿಲ್ಲ ಎಂದು ಪೊಲೀಸರ ಹಾದಿ ತಪ್ಪಿಸಿದ್ದಾರೆ.
ಪಟ್ಟು ಬಿಡದ ಇನ್ಸ್ ಪೆಕ್ಟರ್ ಶ್ರೀವಾತ್ಸವ್, ಅದೇ ಫೇಸ್ ಬುಕ್ ಪ್ರೊಫೈಲ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿದ್ದ ಎಲ್ಲಾ ಕಾಂಟ್ಯಾಕ್ಟುಗಳನ್ನು ಜಾಲಾಡಿದ್ದಾರೆ. ( Heights of creativity: ಈತನ ಕಾರ್ ಖಯಾಲಿ ನೋಡ್ರೀ )
ಕೊನೆಗೆ ಆರೋಪಿ ದೀಪಕ್ ಪೋದ್ದಾರ್, ಬೆಂಗಳೂರಿನ ತನ್ನ ಸೋದರನ ಮನೆಯಲ್ಲಿ ಆರಾಮವಾಗಿರುವುದು ಸಿಬಿ'ಐ' ಕಣ್ಣಿಗೆ ಬಿದ್ದಿದೆ. ಕೂಡಲೆ ಎಲ್ಲ ವ್ಯವಸ್ಥೆ ಮಾಡಿಕೊಂಡ ಇನ್ಸ್ ಪೆಕ್ಟರ್ ಶ್ರೀವಾತ್ಸವ್ ಅವರು ಪೋದ್ದಾರನ ಸೋದರನ ಮನೆಯ ಮೇಲೆ ಮೊನ್ನೆ ಶನಿವಾರ ದಾಳಿ ಮಾಡಿಯೇ ಬಿಟ್ರು. ನಯವಂಚಕ ಆರೋಪಿ ದೀಪಕ್ ಪೋದ್ದಾರ್ ಸಿಕ್ಕಿಯೇ ಬಿಟ್ಟಿದ್ದಾನೆ.
ಇಂದು ಸೋಮವಾರ ಆರೋಪಿಯನ್ನು ದಿಲ್ಲಿಗೆ ಕರೆದುಕೊಂಡು ಹೋಗಿ, ಕೋರ್ಟ್ ವಶಕ್ಕೆ ಒಪ್ಪಿಸಲಿದ್ದಾರೆ. ಪ್ರಕರಣದಲ್ಲಿ 24 ವರುಷಗಳ ನಂತರ ಪೊಲೀಸರ ಮೊಗದಲ್ಲಿ ಹರುಷ ಕಂಡಿದೆ. hats off to ಇನ್ಸ್ ಪೆಕ್ಟರ್ ಶ್ರೀವಾತ್ಸವ್!