ಆನೇಕಲ್ಲಿನಲ್ಲು ನಡೆದಿದೆ ಅಮಾನುಷ ರೇಪ್ ಹತ್ಯೆ
ಹೊಸೂರು ರಸ್ತೆಯಲ್ಲಿರುವ ಚಂದಾಪುರ ಗ್ರಾಮದಲ್ಲಿ ಶನಿವಾರ ಈ ಕುಕೃತ್ಯ ನಡೆದಿದೆ. 9 ವರ್ಷದ ಬಾಲಕಿಗೆ ಮಾವಿನ ಹಣ್ಣಿನ ಆಸೆ ತೋರಿಸಿದ ದುರುಳ, ಆ ಮಗುವನ್ನು ಬಿಎಂಟಿಸಿ ಬಸ್ ಡಿಪೋ ಹಿಂಭಾಗಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ, ಕೊಲೆ ಮಾಡಿ, ಪೊದೆಯಲ್ಲಿ ಶವ ಬಿಸಾಕಿ ಪರಾರಿಯಾಗಿದ್ದಾನೆ.
ಇತ್ತ ಮಗಳು ಕಾಣೆಯಾಗಿದ್ದಾಳೆಂದು ಪರಿತಪಿಸುತ್ತಿದ್ದ ತಂದೆ-ತಾಯಿಗೆ ಭಾನುವಾರ ಬೆಳಗ್ಗೆ ದುರ್ಘಟನೆ ಅರಿವಿಗೆ ಬಂದಿದೆ. ಬಾಲಕಿಯ ಪೋಷಕರು ಯುವಕನೊಬ್ಬನ ಮೇಲೆ ಅನುಮಾನ ವ್ಯಕ್ತಪಡಿಸಿದಾಗ ಹೆಬ್ಬಗೋಡಿ ಪೊಲೀಸರು ತ್ರಿಶೂಲ್ ಎಂಬ 18 ವರ್ಷದ ಯುವಕನನ್ನು ತಕ್ಷಣ ಬಂಧಿಸಿದ್ದಾರೆ.
ಘಟನೆಯ ವೃತ್ತಾಂತ: ನೆರೆಮನೆಯ ಹುಡುಗ ತ್ರಿಶೂಲ್ ಶನಿವಾರ ಮಧ್ಯಾಹ್ನ ಬಾಲಕಿಯ ಮನೆಗೆ ಬಂದಿದ್ದಾನೆ. ಆ ವೇಳೆ ದುರ್ದೈವಿ ಬಾಲಕಿ ಮತ್ತು ಆಕೆಯ ಮೂರು ವರ್ಷದ ತಂಗಿ ಮನೆಯಲ್ಲಿ ಆಟವಾಡಿಕೊಂಡಿದ್ದರು. ಆದ ತ್ರಿಶೂಲ್ ಬಾಲಕಿಗೆ ಮಾವಿನ ಹಣ್ಣು ಕೊಡುವುದಾಗಿ ಪುಸಲಾಯಿಸಿ ಮನೆಯಿಂದ ಹೊರಗೆ ಕರೆದುಕಂಡುಹೋಗಿದ್ದಾನೆ. ಆ ವೇಳೆ, ಚಿಕ್ಕವಳು ತಾನೂ ಬರುವುದಾಗಿ ಹಠ ಹಿಡಿದಿದ್ದಾಳೆ. ಆದರೆ ತ್ರಿಶೂಲ್ ಉಪಾಯವಾಗಿ ಅವಳನ್ನು ಮನೆಯಲ್ಲೇ ಬಿಟ್ಟು, ಅಕ್ಕನ್ನು ಕರೆದೊಯ್ದು ಕುಕೃತ್ಯವೆಸಗಿದ್ದಾನೆ.
ನಾಲ್ಕು ಗಂಟೆಯ ವೇಳೆಗೆ ದೊಡ್ಡ ಮಗಳು ಮನೆಯಲ್ಲಿ ಇಲ್ಲದಿರುವುದು ಆಕೆಯ ತಾಯಿಯ ಅರಿವಿಗೆ ಬಂದಿದೆ. ಸುತ್ತಮುತ್ತ ಹುಡುಕಾಟ ನಡೆಸಿದ ತಾಯಿ ಮತ್ತು ನೆರೆಹೊರೆಯವರು ಮಗಳು ಕಾಣದಿದ್ದಾಗ ಬಾಲಕಿಯ ತಂದೆಯನ್ನು ಮನೆಗೆ ಕರೆಯಿಸಿಕೊಂಡಿದ್ದಾರೆ. ಮತ್ತಷ್ಟು ಹುಡುಕಾಟ ನಡೆಸಿದರೂ ಮಗಳು ಪತ್ತೆಯಾಗಿಲ್ಲ. ಈ ಮಧ್ಯೆ, ಚಿಕ್ಕವಳು ತ್ರಿಶೂಲ್ ಮನೆಗೆ ಬಂದಿದ್ದನ್ನು ಹೇಳಿದ್ದಾಳೆ.
ತಕ್ಷಣ ತ್ರಿಶೂಲನ ಮನೆಗೆ ಎಲ್ಲರೂ ಓಡಿದ್ದಾರೆ. ತ್ರಿಶೂಲ್, ಮತ್ತು ಅವನ ಮನೆಯವರು ಮನೆಯಲ್ಲೇ ಇದ್ದರು. ವಿಚಾರಿಸಿದಾಗ ನಮ್ಮ ಹುಡುಗ ಅಂಥವನಲ್ಲ. ಅವನಿಗೇನೂ ಗೊತ್ತಿಲ್ಲ ಎಂದು ಮನೆಯವರು ಸಾಗಹಾಕಿದ್ದಾರೆ. ಆದರೆ ಅನುಮಾನ ಹೆಚ್ಚಾಗಿ ಬಾಲಕಿಯ ಪೋಷಕರು ಸೀದಾ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ.
ತಡಮಾಡದೆ, ಪೊಲೀಸರು ತ್ರಿಶೂಲನ ಮನೆಗೆ ಬಂದು ಅವನನ್ನು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ನಡೆಸಿದಾಗ ಬಾಲಕಿಯ ರೇಪ್ ಅಂಡ್ ಮರ್ಡರ್ ಬಗ್ಗೆ ಪಾಪಿ ಆರೋಪಿ ತ್ರಿಶೂಲ ಬಾಯ್ಬಿಟ್ಟಿದ್ದಾನೆ. ಅವನನ್ನೇ ಅನುಸರಿಸಿ ಹೊರಟ ಪೊಲೀಸರಿಗೆ ಸಮೀಪದ ಬಿಎಂಟಿಸಿ ಬಸ್ ಡಿಪೋ ಹಿಂಭಾಗ ಬಾಲಕಿಯ ಮೃತ ದೇಹ ಪತ್ತೆಯಾಗಿದೆ.
ಇದನ್ನು ಕಂಡು ಪೊಷಕರಿಗೆ ಆಕಾಶವೇ ಕಳಚಿಬಿದ್ದಂತಾಗಿದೆ. ಮಗಳನ್ನು ಕಳೆದುಕೊಂಡ ಅಪ್ಪ-ಅಮ್ಮನ ಆಕ್ರಂದನ ಮುಗಿಲುಮುಟ್ಟಿದೆ.
8 ವರ್ಷಗಳ ಹಿಂದೆ ಚಂದಾಪುರಕ್ಕೆ ಬಂದು ನೆಲೆಸಿದ ತ್ರಿಶೂಲನ ಮನೆಯವರು ಮೂಲತಃ ಚಿತ್ರದುರ್ಗದವರು. ತ್ರಿಶೂಲ ಈ ಹಿಂದೆಯೂ ಕಳ್ಳತದಂತಹ ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ದುರ್ದೈವಿ ಬಾಲಕಿಯ ಅಪ್ಪ ಚೌಹಾಣ್ ಮತ್ತು ಅವರ ಪತ್ನಿ ಲಲಿತಾ ಯಾದಗಿರಿಯ ಸುರಪುರದವರು. ಚೌಹಾಣ್, ಬಿಎಂಟಿಸಿ ಸ್ಂಸ್ಥೆಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚೌಹಾಣ್ ಅವರು ಹಳೆ ಚಂದಾಪುರದ ಪಿಳ್ಳಪ್ಪ ರೆಡ್ಡಿ ಬಿಲ್ಡಿಂಗಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತಿಯ ವೇತನದಲ್ಲಿ ಬೆಂಗಳೂರಿನಲ್ಲಿ ಸಂಸಾರ ನಡೆಸುವುದು ಕಷ್ಟವೆಂದು ಪತ್ನಿ ಲಲಿತಾ ಅವರು ಇಬ್ಬರು ಪುತ್ರಿಯ ಜತೆ ಸುರಪುರದಲ್ಲೇ ವಾಸವಾಗಿದ್ದರು. ಶಾಲೆಗೆ ರಜೆಯಿದ್ದ ಕಾರಣ ಲಲಿತಾ ಅವರು ಮಕ್ಕಳನ್ನು ಕರೆದುಕೊಂಡು ಪತಿಯನ್ನು ನೋಡಲು ಬಂದಿದ್ದರು.