ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು
ಬೆಂಗಳೂರು, ನವೆಂಬರ್ 9 : ಕೇಂದ್ರ ಸರ್ಕಾರ ಒಂದು ಸಾವಿರ ರು ನೋಟನ್ನು ಬ್ಯಾನ್ ಮಾಡಿ 500, 2000 ರು ವನ್ನು ಹೊಸದಾಗಿ ಪರಿಚಯಿಸಿದ್ದು, ರಾಜ್ಯದ ಜನತೆಯಲ್ಲಿ ಗೊಂದಲವನ್ನುಂಟು ಮಾಡಿದೆ.
ಅಂಗಡಿ ಮಳಿಗೆಗಳು, ಹೋಟೆಲ್ ಗಳು, ಆಸ್ಪತ್ರೆಗಳು, ಮೆಡಿಕಲ್ ಗಳು, ಪೆಟ್ರೋಲ್ ಬಂಕ್, ಹಾಲು ಮಾರುವವನು, ತರಕಾರಿ, ಹೂವು ಮಾರಾಟಗಾರರು ನಿತ್ಯ ವ್ಯವಹಾರ ನಡೆಸುವ ಎಲ್ಲ ಅಂಗಡಿಗಳಲ್ಲಿ ಹೀಗೆ ಎಲ್ಲಡೆಯೂ ನೋಟಿನದ್ದೇ ಮಾತು. ಮನೆಯ ಬೀರುಗಳಲ್ಲಿ, ಜೀರಿಗೆ ಮೆಣಸು ಡಬ್ಬಗಳಲ್ಲಿ ಕಾಲು ಮುರಿದುಕೊಂಡು ಕುಳಿತ್ತಿದ್ದ ಲಕ್ಷಿ ಇದ್ದಕ್ಕಿದ್ದಂತೆ ಎದ್ದು ಸಂಚರಿಸಲು ಮುಂದು ಮಾಡಿದ್ದಾಳೆ.
ಮನೆಯಲ್ಲಿ ಎಲ್ಲಿಲ್ಲದ ಸಾವಿರ, ಐನೂರು ನೋಟುಗಳನ್ನು ಇಟ್ಟುಕೊಂಡಿರುವ ಸಾಮಾನ್ಯ ಜನರು ಎನು ಮಾಡುವುದು ಎಂದು ಪರದಾಡುತ್ತಿದ್ದಾರೆ. ತಮಗೆ ತಿಳಿದ ಎಲ್ಲ ಬುದ್ಧಿಯನ್ನು ಉಪಯೋಗಿಸಿ ತಮಗೆ ಗೊತ್ತಿರುವ ಎಲ್ಲ ಅಂಗಡಿ- ಮುಂಗಟ್ಟುಗಳಲ್ಲಿ ನೋಟುಗಳನ್ನು ಕಳಿಸಿ ಬಿಡಲು ಪ್ರಯತ್ನಿಸುತ್ತಿದ್ದಾರೆ.[ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

ಹೋಟೆಲ್ ಗಳಲ್ಲಿ ಗರಿಗರಿ ನೋಟು
ಹೋಟೆಲ್ ಗಳಲ್ಲಿ ಇಡ್ಲಿ ದೋಸೆಯನ್ನು ತಿಂದು ಸರ್ ತಗೋಳಿ ಎಂದು 500 ರೂ ಕೊಟ್ಟರೆ ಕ್ಯಾಶಿಯರ್ ಮುಖ ನೋಡಿ ಚಿಲ್ರೆ ಕೊಡ್ರಿ ತಿನ್ನೊ 50 ರೂ ಗೆ 500 ರೂ ಕೊಡ್ತೀರಾ ಎಂದು ಗ್ರಾಹಕರ ಮೇಲೆ ಸಿಟ್ಟಿನಿಂದ ಗದರುತ್ತಾರೆ. ಚಿಲ್ಲರೆಯನ್ನು ಪಡೆಯುವವರೆಗೂ ಗ್ರಾಹಕರು ಕಾಯುವುದು ಸಾಮಾನ್ಯವಾಗಿದೆ. ಅಂತೂ ಇಂತು ನಮ್ಮ ನೋಟು ಹೋಯಿತಲ್ಲಾ ಎಂದು ಖುಷಿಗೊಳ್ಳುತ್ತಿದ್ದಾರೆ.[ತರಕಾರಿ ಕೊಳ್ಳುವ ಮುನ್ನ ಚಿಲ್ರೆ ಇದೆಯಾ ನೋಡ್ಕೊಳ್ಳಿ!]

ಚಿಲ್ಲರೆ ಇದ್ದರೆ ಮಾತ್ರ ಆಟೋ ಭಾಗ್ಯ
ಆಟೋ ಹತ್ತುವಾಗಲೇ ಚಿಲ್ಲರೆ ಇದ್ದರೆ ಮಾತ್ರ ನಿಮ್ಮನು ನೀವು ಹೇಳಿದ ಸ್ಥಳಕ್ಕೆ ಬಿಡುತ್ತೇವೆ ಐನೂರು, ಸಾವಿರ ನೋಟು ತೋರುವಂತಿಲ್ಲ ಎಂದು ಆಟೋದವರು ತಕರಾರು ತೆಗೆಯುತ್ತಿದ್ದಾರೆ. ಇನ್ನು ಕೆಲ ಆಟೋದವರು ಹತ್ತಿದ್ದ ಪ್ರಯಾಣಿಕರನ್ನು ಇಳಿಸಿದ್ದು ನಡೆದಿದೆ. ಇನ್ನು ಐನೂರು ರೂಗೆ ಮರುಮಾತಾನಡಿದರೆ ದಿನ ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಚಿಲ್ಲರೆ ಇದ್ದಷ್ಟು ಕೊಟ್ಟು ಮುಖ ಸಪ್ಪಗೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆಟೋದವರಿಗೆ ಇವತ್ತು ವ್ಯಾಪಾರವೇ ನಡೆಯದ ದಿನವಾಗಿ ಪರಿಣಮಿಸಿದೆ.

ಚಿಲ್ಲರೆಗೆ ಪರದಾಟ ಪೆಟ್ರೋಲ್ ಬಂಕಿನಲ್ಲಿ ಕಿತ್ತಾಟ
ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸುವವರು ಗರಿ ಗರಿ ನೋಟುಗಳನ್ನೇನೋ ನೀಡುತ್ತಿದ್ದಾರೆ ಆದರೆ ಅದನ್ನು ಪಡೆದು ಹಿಂತಿರುಗಿ ಚಿಲ್ಲರೆ ನೀಡಲು ಎಲ್ಲಿದೆ ಚಿಲ್ಲರೆ ಎಂದು ಕ್ಯಾಶಿಯರ್ ತನ್ನ ಕ್ಯಾಶ್ ಬ್ಯಾಗನ್ನು ತೋರಿಸುತ್ತಿದ್ಧಾನೆ. ಮೈಸೂರು ರಸ್ತೆಯ ಭಾರತ್ ಪೆಟ್ರೋಲ್ ಬಂಕಿನಲ್ಲಿ ಚಿಲ್ಲರೆ ವಿಷಯಕ್ಕೆ ಜಗಳವಾಗಿದೆ. ಅಲ್ಲದೆ ಪೆಟ್ರೋಲ್ ಬಂಕಿನ ಜನರ ದಟ್ಟಣೆಯಿಂದಾಗಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿದೆ.

ಬ್ಯಾಂಕ್, ಎಟಿಎಂಗಳು ಬಂದ್ ಅಚರಣೆ
ಬ್ಯಾಂಕ್ ಗಳು ಮತ್ತು ಎಟಿಎಂಗಳು ನೂತನ ನೋಟು ಗಳಿಗೆ ಸಂಬಂಧಿಸಿದಂತೆ ಇಂದು ಸಾಮೂಹಿಕ ರಜಾ ಮಾಡಿದ್ದು ಯಾವುದೇ ಎಟಿಎಂಗಳು ಕಾರ್ಯ ನಿರ್ವಹಿಸಿಲ್ಲ.

ಪೊಲೀಸರ ಶುಲ್ಕಕ್ಕೆ ಐನೂರು ನೋಟೇ ಗಟ್ಟಿ
ಗಾಡಿಗಳನ್ನು ತಡಯುವ ಪೊಲೀಸರಿಗೆ ಚಾಲಕರು ಐನೂರು - ಸಾವಿರದ ಗರಿಗರಿ ನೋಟು ತೋರಿಸುತ್ತಿದ್ದಾರೆ. ಅಲ್ಲದೆ ಚಿಲ್ಲರೆ ಇದ್ದಷ್ಟು ಕೊಟ್ಟು ಮಿಕ್ಕವರನ್ನು ಹಾಗೇ ಕಳುಹಿಸುತ್ತಿದ್ದಾರೆ. ಕೆಲವರು ಬೇಕು- ಬೇಕು ಎಂತಲೇ ನೋಟು ನೀಡುತ್ತಿದ್ದಾರೆ ಎಂದು ಟ್ರಾಫಿಕ್ ಪೊಲೀಸ್ ರೊಬ್ಬರು ತಿಳಿಸಿದ್ದಾರೆ. ಹಳೆಯ ಬಾಕಿ ಎಂದು ಐನೂರನ್ನು ನೀಡಿದವರು ಇದ್ದಾರೆ.

ಕಾರ್ಡ್ಇದ್ದರೆ ಮಾತ್ರ ಮೆಡಿಸಿನ್
ಆಸ್ಪತ್ರೆಗಳಲ್ಲಿ ಮೆಡಿಸಿನ್ ಗಳಿಗೆ ಐನೂರು- ಸಾವಿರ ರು ನೋಟುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರೆ ಅಲ್ಲಿಯೂ ಚಿಲ್ಲರೆಗೆ ಪರದಾಟವಾಗಿದೆ. ಕೆಲವೆಡೆ ನಮಗೆ ನೀವು ಎಟಿಎಂ, ಕ್ರೆಡಿಟ್ ಕಾರ್ಡ್ ಇದ್ದರೆ ನೀಡಿ ಅದರಿಂದಲೇ ಔಷಧಿಯನ್ನು ಪಡೆಯಬಹುದಲ್ಲಾ? ಎಂದು ನೈಸಾಗಿ ಗ್ರಾಹಕರ ನೋಟನ್ನು ವಾಪಸ್ ಮಾಡಿದ್ದಾರೆ.

ಹೂವು-ತರಕಾರಿ ಅಂಗಡಿಯಲ್ಲಿ ಚಿಲ್ಲರೆ ಗಮ್ಮತ್ತು
ಚಿಲ್ಲರೆ ಇಲ್ಲದೆ ಅಂಗಡಿಯವನು ತರಕಾರಿಯನ್ನು ನೀಡುತ್ತಿಲ್ಲ. ಚಿಲ್ಲರೆಯನ್ನು ನೋಡುತ್ತಾ ಕುಳಿತರೆ ತರಕಾರಿ ವ್ಯಾಪಾರವಾಗದು ಈ ಸ್ಥಿತಿಯಲ್ಲಿ ಹಿಂದಿನ ದಿನ ಎಲ್ಲ ಹಣವನ್ನು ಕೊಟ್ಟು ತರಕಾರಿಯನ್ನು ತಂದಿದ್ದೇನೆ ಈಗ ಎನು ಮಾಡಬೇಕು ಎಂದು ಜಯನಗರದ ತರಕಾರಿ ಅಂಗಡಿಯ ರಾಜು ಬೇಜಾರಾಗಿದ್ದಾರೆ. ಹೂವಿನವರು ಚಿಲ್ಲರೆ ಇಲ್ಲದೆ ಹೂವನ್ನು ನೀಡಿಯೇ ಇಲ್ಲ ಎಂದಿದ್ದಾರೆ.

ಕಂಡೆಕ್ಟರ್ ಗಳು ಐನೂರು ರು ನೋಡಿಲ್ವಾ?
ಬಸ್ಸಿನಲ್ಲಿ ಪ್ರಯಾಣಿಸುವವರು ಕಂಡೆಕ್ಟರ್ ಗಳಿಗೆ ಐನೂರು ರು ನೀಡಿದ್ದು, ನಾವೂ ಐನೂರು ರೂ ನೋಡಿದ್ವೀವಿ ಚಿಲ್ಲರೆ ಕೊಡಿ ಎಂದಿದ್ದಾರೆ. ಅಲ್ಲದೆ ಬಸ್ಗಳಲ್ಲಿ ಬುಧವಾರದ ಮಟ್ಟಕ್ಕೆ ಮಾತ್ರ ಐನೂರು, ಸಾವಿರ ನೋಟುಗಳನ್ನು ಪಡೆಯಬಹುಹು ಎಂದು ಮುನ್ನೂಚನೆ ನೀಡಿದ್ದಾರೆ ಎಂದು ಜಯನಗರ ಸಂಚಾರ ನಿಯಂತ್ರಕ ಎಸ್ ವಿಜಯಕುಮಾರ್ ತಿಳಿಸಿದ್ದಾರೆ.
ಎಲ್ಲಡೆಯೂ 500- 1000 ರು ರೂಪದಲ್ಲಿ ಓಡಾಡುತ್ತಿರುವ ಲಕ್ಷಮ್ಮ ಇನ್ನು ಎರಡೂ ಮೂರು ದಿನ ಜನರಲ್ಲಿ ಆತಂಕ, ಭಯ, ದಿಗಿಲು ಮೂಡಿಲಸಿದ್ದಾಳೆ.












Click it and Unblock the Notifications