ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಹಾಲು, ಮೊಸರು ನೀಡುತ್ತಿದೆ ಬಮುಲ್
ಬೆಂಗಳೂರು, ಅಕ್ಟೋಬರ್ 23 : ಸಾವು ಬದುಕಿನ ನಡುವೆ ಹೋರಡುತ್ತಾ ಆಸ್ಪತ್ರೆಯಲ್ಲಿ ದಿನ ಕಳೆಯುತ್ತಿರುವ ಮಕ್ಕಳಿಗೆ ಬಮುಲ್ ಉಚಿತವಾಗಿ ಹಾಲು, ಮೊಸರು ಮತ್ತು ಮಜ್ಜಿಗೆ ವಿತರಣೆ ಮಾಡುತ್ತದೆ. ಹೌದು, ಬಮುಲ್ ಇಂತಹ ಮಾನವೀಯತೆಯ ಕಾರ್ಯವನ್ನು ಆರಂಭಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮುಲ್) ಇಂತಹ ಕಾರ್ಯ ಮಾಡುತ್ತಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಮಕ್ಕಳು ಮತ್ತು ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಹಾಲು, ಮೊಸರು ಮತ್ತು ಮಜ್ಜಿಗೆ ವಿತರಣೆ ಮಾಡುತ್ತಿದೆ.
ಬೆಳಗ್ಗೆ 6.30 ಮತ್ತು 10.30ಕ್ಕೆ ಹಾಲನ್ನು ಆಸ್ಪತ್ರೆಯ ಕ್ಯಾಂಟೀನ್ಗೆ ನೀಡಲಾಗುತ್ತದೆ. ಕ್ಯಾಂಟೀನ್ ಅವರು ಅದನ್ನು ಕಾಯಿಸಿ ಮಕ್ಕಳಿಗೆ ಮತ್ತು ರೋಗಿಗಳಿಗೆ ಹಂಚುತ್ತಾರೆ. ಒಂದು ವರ್ಷದ ತನಕ ಉಚಿತವಾಗಿ ಹೀಗೆ ವಿತರಣೆ ಮಾಡಲಾಗುತ್ತದೆ. ಬಳಿಕ ಮುಂದಿನ ನಿರ್ಧಾರವನ್ನು ಬಮುಲ್ ಕೈಗೊಳ್ಳಲಿದೆ.

1 ಲೀಟರ್ನ 180 ಪ್ಯಾಕ್ ಹಾಲು, 10 ಕೆಜಿ ಮೊಸರಿನ ಪ್ಯಾಕ್, 200 ಗ್ರಾಂ ಮೊಸರಿನ 750 ಪ್ಯಾಕ್ಗಳನ್ನು ಬಮುಲ್ ಆಸ್ಪತ್ರೆಗೆ ಉಚಿತವಾಗಿ ವಿತರಣೆ ಮಾಡುತ್ತಿದೆ. ವಾರ್ಷಿಕ ಇದಕ್ಕಾಗಿ 25 ಲಕ್ಷ ಹಣ ಖರ್ಚಾಗಲಿದೆ.
'ಬಡರೋಗಿಗಳಿಗೆ ಉಪಯೋಗವಾಗಲಿ ಎಂದು ಈ ಯೋಜನೆ ಆರಂಭಿಸಿದೆವು. ಮುಖ್ಯವಾಗಿ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ಸಂಸ್ಥೆಗೆ ಯಾವ ನಷ್ಟವೂ ಆಗುವುದಿಲ್ಲ. ರೈತರಿಗೂ ನಷ್ಟವಾಗುವುದಿಲ್ಲ' ಎಂದು ಸಂಸ್ಥೆಯ ವ್ಯವಸ್ಥಾಪಕ ಸುರೇಶ್ ಹೇಳಿದ್ದಾರೆ.
ಡೈರಿಯವರು ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಬಿಸಿ ಮಾಡಿದ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ನೀಡುತ್ತಿದ್ದೇವೆ. ಕಡು ಬಡತನದಿಂದ ಬಂದ ಕುಟುಂಬದವರಿಗೆ, ಮಕ್ಕಳಿಗೆ ಇದರಿಂದ ತುಂಬಾ ಉಪಯೋಗವಾಗುತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ.












Click it and Unblock the Notifications