Namma Metro; ಅ. 2ರಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ಸಂಚಾರ?
ಬೆಂಗಳೂರು, ಸೆಪ್ಟೆಂಬರ್ 28; ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ನಮ್ಮ ಮೆಟ್ರೋದ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಅಕ್ಟೋಬರ್ 2ರಿಂದಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
DIPR Karnataka ಟ್ವೀಟ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಲಾಗಿದೆ. ' ನಮ್ಮ ಮೆಟ್ರೋ ರೈಲು ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2 ಕಿ.ಮೀ. ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ನಡೆಸಿದ್ದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ' ಎಂದು ಟ್ವೀಟ್ ಹೇಳಿದೆ.

'ಅತಿ ಶೀಘ್ರದಲ್ಲೇ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ಈಗಿನ ಪ್ರಕಾರ ಅಕ್ಟೋಬರ್ 2ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಗೊಳ್ಳುವ ಸಾಧ್ಯತೆಗಳಿವೆ' ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ರೈಲು ಸಂಚಾರಕ್ಕೆ ಅಂತಿಮ ಒಪ್ಪಿಗೆ ಪಡೆದಿರುವ ಬಿಎಂಆರ್ಸಿಎಲ್ ರಾಜ್ಯ ಸರ್ಕಾರದ ಅನುಮತಿ ಪಡೆದುಕೊಂಡು ಮೆಟ್ರೋ ರೈಲು ರೈಲಿನ ವಾಣಿಜ್ಯ ಸಂಚಾರಕ್ಕೆ ದಿನಾಂಕ ಘೋಷಣೆ ಮಾಡಲಿದೆ.
ನಮ್ಮ ಮೆಟ್ರೋ ರೈಲು ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2 ಕಿ.ಮೀ. ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿದ್ದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ಅತಿ ಶೀಘ್ರದಲ್ಲೇ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ.#nammametro #KRPuram #BaiyappanahalliMetro pic.twitter.com/FOyzEMeM7C
— DIPR Karnataka (@KarnatakaVarthe) September 27, 2023
ಬಿಎಂಆರ್ಸಿಎಲ್ ಆಗಸ್ಟ್ನಲ್ಲಿಯೇ ಬೈಯಪ್ಪನಹಳ್ಳಿ-ಕೆಆರ್ ಪುರ (ನೇರಳೆ) ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಬಳಿಕ ಮೆಟ್ರೋ ರೈಲ್ವೆ ಸುರಕ್ಷತಾ ಆಯಕ್ತರು ಪರಿಶೀಲನೆ ನಡೆಸಿದ್ದರು.
2 ಕಿ. ಮೀ. ರೈಲು ಸಂಚಾರ; ಈ ವರ್ಷದ ಮಾರ್ಚ್ 25ರಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ವೈಟ್ಫೀಲ್ಡ್-ಕೆಆರ್ ಪುರ (13.7) ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ ಬೈಯಪ್ಪನಹಳ್ಳಿ-ಕೆಆರ್ ಪುರ ನಡುವಿನ 2 ಕಿ. ಮೀ. ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ಇರಲಿಲ್ಲ. ಈಗ ಆ ಮಾರ್ಗವೂ ಸಂಚಾರಕ್ಕೆ ಮುಕ್ತವಾಗುತ್ತಿದೆ.
ಬೆಂಗಳೂರು ನಗರದ ಪ್ರಯಾಣಿಕರು ಇನ್ನು ಮುಂದೆ ವೈಟ್ಫೀಲ್ಡ್ನಿಂದ ಬೆನ್ನಿಗಾನಹಳ್ಳಿ ತನಕ ಮೆಟ್ರೋದಲ್ಲಿ ತಡೆ ರಹಿತವಾಗಿ ಸಂಚಾರ ನಡೆಸಲು ಅವಕಾಶ ಸಿಗಲಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿಎಂಆರ್ಸಿಎಲ್ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರು ಕೆಆರ್ ಪುರದಲ್ಲಿ ಮೆಟ್ರೋದಿಂದ ಇಳಿದು, ಪುನಃ ಮೆಟ್ರೋ ಹತ್ತಿ ಸಾಗುವುದು ತಪ್ಪಲಿದೆ. ವೈಟ್ಫೀಲ್ಡ್ನಿಂದ ನೇರವಾಗಿ ಬೈಯಪ್ಪನಹಳ್ಳಿ ತನಕ ಸಂಚಾರ ನಡೆಸಬಹುದು.
ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚೆಲ್ಲಘಟ್ಟ ಮಾರ್ಗದ ಸಂಚಾರ ಬಾಕಿ ಇದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಸೆಪ್ಟೆಂಬರ್ 29ರಂದು ಕೆಂಗೇರಿ-ಚೆಲ್ಲಘಟ್ಟ ಮಾರ್ಗದಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಬಿಎಂಆರ್ಸಿಎಲ್ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚೆಲ್ಲಘಟ್ಟ ಎರಡೂ ಮಾರ್ಗವನ್ನು ಒಟ್ಟಿಗೆ ಉದ್ಘಾಟಿಸಲಿದೆ ಎಂಬ ಸುದ್ದಿಗಳು ಇವೆ. ಆದರೆ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ಹೆಚ್ಚಿನ ಜನರು ಸಂಚಾರ ನಡೆಸುವುದರಿಂದ ಅಕ್ಟೋಬರ್ 2ರಂದು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
ಕೆಂಗೇರಿ-ಚೆಲ್ಲಘಟ್ಟ ನಡುವೆಯೂ ಮೆಟ್ರೋ ಸಂಚಾರ ಆರಂಭವಾದರೆ ಮೈಸೂರು ರಸ್ತೆಯಿಂದ ಜನರು ನಮ್ಮ ಮೆಟ್ರೋ ರೈಲಿನಲ್ಲಿ ಕೆ. ಆರ್. ಪುರ, ವೈಟ್ಫೀಲ್ಡ್ ತನಕ ಸಂಚಾರ ನಡೆಸಬಹುದು. ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮದ ನಡುವೆ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೇ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಪೂರ್ಣ ರೈಲು ಸಂಚಾರ ನಡೆಸಲಿದೆ.












Click it and Unblock the Notifications