ಬಿಜೆಪಿ ಬಿಕ್ಕಟ್ಟಿಗೆ ಸಂತೋಷ್ ಜೀ ಮೇಲೆ ಗೂಬೆ ಕೂರಿಸಿದ ಯಡಿಯೂರಪ್ಪ
ಈಶ್ವರಪ್ಪ ಅತೃಪ್ತರ ಸಭೆ ಕರೆಯುವ ಮೂಲಕ ಹಿರಿಯರ ನಾಯಕತ್ವವನ್ನೇ ಕಡೆಗಣಿಸಿದ್ದಾರೆ. ಈ ಬಂಡಾಯದ ಹಿಂದಿನ ಮಾಸ್ಟರ್ ಮೈಂಡ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ - ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 27: ರಾಜ್ಯ ಬಿಜೆಪಿಯಲ್ಲಿ ಸಂತೋಷ್ ಜೀ-ಯಡಿಯೂರಪ್ಪ ಕಾದಾಟ ಮತ್ತೆ ಮರು ಕಳುಹಿಸಿದಂತೆ ಕಾಣಿಸುತ್ತಿದೆ. ಬಿಜೆಪಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಬಿಎಲ್ ಸಂತೋಷ್ ನೇರ ಕಾರಣ ಎಂದು ಬಿಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಜತೆಗೆ ಈಶ್ವರಪ್ಪ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, "ಈಶ್ವರಪ್ಪ ಅತೃಪ್ತರ ಸಭೆ ಕರೆಯುವ ಮೂಲಕ ಹಿರಿಯರ ನಾಯಕತ್ವವನ್ನೇ ಕಡೆಗಣಿಸಿದ್ದಾರೆ. ಈ ಬಂಡಾಯದ ಹಿಂದಿನ ಮಾಸ್ಟರ್ ಮೈಂಡ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್," ಎಂದು ಹೇಳಿದ್ದಾರೆ. ಈ ಮೂಲಕ ಆರ್.ಎಸ್.ಎಸ್ ಮೂಲದ ಸಂತೋಷ್ ಮೇಲೆ ಯಡಿಯೂರಪ್ಪ ಮೊದಲ ಬಾರಿಗೆ ಬಾಯ್ಬಿಟ್ಟು ವಾಗ್ದಾಳಿ ನಡೆಸಿದ್ದಾರೆ.[ಬಿಜೆಪಿಯಲ್ಲಿ ಒಳಜಗಳ ಎಲ್ಲಿದೆ, ಬಿಎಸ್ ವೈ ಮುಖ್ಯಮಂತ್ರಿ ಕ್ಯಾಂಡಿಡೇಟು: ಈಶ್ವರಪ್ಪ]

ಸಂತೋಷ್ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜತೆ ಉತ್ತಮ ಸಂಬಂಧ ಹೊಂದಿದ್ದು ಬಿಕ್ಕಟ್ಟು ತೀವ್ರವಾಗುವ ಲಕ್ಷಣಗಳಿವೆ.
"ಎಲ್ಲಾ ಬೆಳವಣಿಗೆಗಳನ್ನು ಹಿರಿಯ ನಾಯಕರು, ಜತೆಗೆ ಜನರು ನೋಡುತ್ತಿದ್ದಾರೆ. ಬಂಡಾಯ ನಾಯಕರಿಗೆ ಸರಿಯಾದ ಉತ್ತರ ನೀಡಲಾಗುತ್ತದೆ. ಈಶ್ವರಪ್ಪ ಕೂತು ತಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದರೆ ಪಕ್ಷ ಇವತ್ತು ಈ ಪರಿಸ್ಥಿತಿ ಎದುರಿಸುವಂತಾಗುತ್ತಿರಲಿಲ್ಲ," ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.[ಈಶ್ವರಪ್ಪ ಆ್ಯಂಡ್ ಟೀಮ್ ಉಚ್ಛಾಟಿಸಿ- ಗುಡುಗಿದ ಬಿಜೆಪಿ ನಾಯಕರು]
ಈ ಮೂಲಕ ಪಕ್ಷದಲ್ಲಿ ಈಶ್ವರಪ್ಪ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿದ್ದಾರೆ.[ಅತೃಪ್ತರ ಸಮಾವೇಶದಲ್ಲಿ ಈಶ್ವರಪ್ಪ-ಬಿಎಸ್ವೈ ಬೆಂಬಲಿಗರ ಮಾರಾಮಾರಿ]

ಇಂದು ಬೆಂಗಳೂರಿನಲ್ಲಿ ಅತೃಪ್ತ ಬಿಜೆಪಿ ನಾಯಕರು ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿದ ಬೆನ್ನಿಗೆ ಯಡಿಯೂರಪ್ಪ ಈ ಮಾತುಗಳನ್ನು ಹೊರ ಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಯಡಿಯೂರಪ್ಪ-ಈಶ್ವರಪ್ಪ ನಡುವಿನ ಬಿಕ್ಕಟ್ಟು ಮತ್ತಷ್ಟು ತಾರಕ್ಕೇರುವ ಸಾಧ್ಯತೆ ಇದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications