ಬೆಂಗಳೂರು ಪಿಂಚಣಿದಾರರ ಸ್ವರ್ಗ ಅಲ್ಲ, ನರಕ!
ಬೆಂಗಳೂರು, ಜೂನ್ 14: ರಾಜ್ಯದ ರಾಜಧಾನಿ ಅನೇಕ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಪಿಂಚಣಿದಾರರ ಸ್ವರ್ಗ ಎಂಬ ಅನ್ವರ್ಥನಾಮಕ್ಕೆ ಧಕ್ಕೆಯೊದಗಿದೆ. ಅದೇ ರಾಷ್ಟ್ರದ ರಾಜಧಾನಿ ದಿಲ್ಲಿಗೆ ಈಗ ಈ ಸ್ಥಾನಮಾನ ಪ್ರಾಪ್ತಿಯಾಗಿದೆ. ಬೆಂಗಳೂರು ಪಿಂಚಣಿದಾರರಿಗೆ ಈಗ ನರಕಸದೃಶವಾಗಿದೆ. ಅದೇ ದೆಹಲಿ ಪಿಂಚಣಿದಾರರಿಗೆ ಸ್ವರ್ಗ ಸಮವಾಗಿದೆ.
ಏಷ್ಯಾದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಇದೀಗ ನಾಡಿನ ಹಿರಿಯ ಚೇತನಗಳಿಗೆ ಅತ್ಯಂತ ಕೆಟ್ಟ ಸ್ಥಳವಾಗಿ ಪರಿಣಮಿಸಿದೆ. ಸರಕಾರೇತರ Help Age India ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಯಲಾಗಿದೆ. ಬೆಂಗಳೂರಿನಲ್ಲಿ ವಯಸ್ಸಾದವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ದೌರ್ಭಾಗ್ಯವೆಂದರೆ ಇಂತಹ ದೌರ್ಜನ್ಯವೆಸಗುತ್ತಿರುವವರು ಬೇರೆ ಯಾರೋ ಅಲ್ಲ. ಸ್ವಂತ ಮಕ್ಕಳು ಮತ್ತು ಸೊಸೆಯಂದಿರು.
Help Age India survey ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕೊತಾ, ಚೆನ್ನೈ, ಹೈದರಾಬಾದ್ ಮೆಟ್ರೋ ನಗರಗಳಲ್ಲಿ ಕೈಗೊಳ್ಳಲಾಗಿತ್ತು. ಸಮೀಕ್ಷೆಗಾಗಿ ಸುಮಾರು 1,200 ಹಿರಿಯರನ್ನು ಸಂಪರ್ಕಿಸಲಾಗಿದೆ. (ಊರು ಹೋಗು, ಕಾಡು ಬಾ ಅಂತಿದೆ)

ಬೆಂಗಳೂರಿನಲ್ಲಿ ಸಮೀಕ್ಷೆಗೆ ಉತ್ತರಿಸಿದವರ ಪೈಕಿ ಶೇ. 75ರಷ್ಟು ವೃದ್ಧರು, 'ಸ್ವಂತ ಮಕ್ಕಳು ಮತ್ತು ಸೊಸೆಯಂದಿರೇ ತಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ. ಅದೇ ದಿಲ್ಲಿಯಲ್ಲಿ ಶೇ. 22ರಷ್ಟು ಮಂದಿ ಮಕ್ಕಳು, ಸೊಸೆಯಂದಿರಿಂದ ಕಷ್ಟ ಅನುಭವಿಸುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ ಶೇ. 59ರಷ್ಟು ಮಂದಿ ಮಕ್ಕಳು ಮತ್ತು ಶೇ. 61ರಷ್ಟು ಮಂದಿ ಸೊಸೊಯಂದಿರು ಹಿರಿಯ ಪುರುಷರು ಮತ್ತು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ.
ಶೇ. 41ರಷ್ಟಿ ಮಂದಿ ವೃದ್ಧರು ಬೈಗುಳ ತಿಂದರೆ ಶೇ. 33 ಮಂದಿಯನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಇನ್ನು, ಶೇ. 29ರಷ್ಟು ಮಂದಿ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಆತಂಕದ ವಿಷಯವೆಂದರೆ ಶೇ. 41ರಷ್ಟು ಮಂದಿ ತಮ್ಮ ಮನೆತನದ ಗೌರವ ಹಾಳಾಗುವುದು ಬೇಡವೆಂದು ತಮಗಾಗುತ್ತಿರುವ ನೋವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದು, ಅದನ್ನು ಹೊಸಲಿನಾಚೆಗೆ ಹೋಗಲು ಬಿಟ್ಟಿಲ್ಲ. ಆದರೆ ಆಪ್ತರ ಮುಂದೆ ತಮ್ಮ ದುಃಖ ತೋಡಿಕೊಂಡು ಸಹಿಸಿಕೊಳ್ಳುತ್ತಾರೆ.
ಇನ್ನು, ಶೇ. 41ರಷ್ಟು ಮಂದಿ ತಮಗಾಗಿ ಸಹಾಯವಾಣಿಗಳು ಇವೆ ಎಂಬುದನ್ನು ಅರಿತಿದ್ದಾರೆ. ಆದರೆ ಕೇವಲ ಶೇ. 12ರಷ್ಟು ಮಂದಿ ಮಾತ್ರ ಅದರ ನೆರವನ್ನು ಪಡೆದಿದ್ದಾರೆ. ಬೆಂಗಳೂರಿನ ಐದೂ ಪೊಲೀಸ್ ಉಪ ವಲಯಗಳಲ್ಲಿ ಕಷ್ಟದಲ್ಲಿರುವ ಹಿರಿಯ ಚೇತನಗಳಿಗೆ ನೆರವಾಗಲು ಸಹಾಯವಾಣಿಗಳನ್ನು ತೆರೆಯುವ ಬಗ್ಗೆ ನಗರ ಪೊಲೀಸರು ಆಲೋಚಿಸುತ್ತಿದ್ದಾರೆ.













Click it and Unblock the Notifications