ಎಟಿಎಂ ಹಂತಕ ಆಂಧ್ರದಲ್ಲಿಲ್ಲ, ಪೊಲೀಸ್ ವಾಪಸ್
ಬೆಂಗಳೂರು, ಡಿ.14 : ನ.19 ರಂದು ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಕಾರ್ಪೊರೇಶನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಯ ಸುಳಿವು ಆಂಧ್ರಪ್ರದೇಶದಲ್ಲಿ ಪತ್ತೆಯಾಗಿಲ್ಲ. ಆಂಧ್ರಪ್ರದೇಶದಲ್ಲಿ ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರ ವಿಶೇಷ ತಂಡಗಳು ಬರಿಗೈಯಲ್ಲಿ ವಾಪಸ್ಸಾಗಿವೆ.
ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪಿ ಅವರ ಮೊಬೈಲ್ ಅನ್ನು ಆಂದ್ರ ಪ್ರದೇಶದ ಹಿಂದೂಪುರದಲ್ಲಿ ಮಾರಾಟ ಮಾಡಿದ್ದ. ಈ ಜಾಡು ಹಿಡಿದ ಪ್ರಕರಣ ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ, ಆಂಧ್ರಪ್ರದೇಶಕ್ಕೆ ಕಳುಹಿಸಿದ್ದರು. (ಆರೋಪಿ ಮೂಲ ಆಂಧ್ರಪ್ರದೇಶ)

ಆಂಧ್ರಪ್ರದೇಶ ಪೊಲೀಸರ ಸಹಕಾರದಲ್ಲಿ ಆರೋಪಿ ಪತ್ತೆಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು. ಇಬ್ಬರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಸದ್ಯ ಆರೋಪಿ ಸುಳಿವು ಪತ್ತೆಯಾಗಿಲ್ಲ. ಆದ್ದರಿಂದ ತನಿಖೆಗೆ ತೆರಳಿದ್ದ ಪೊಲೀಸರು ಬೆಂಗಳೂರಿಗೆ ಮರಳಿದ್ದಾರೆ. (ಕೇವಲ 500 ರೂ.ಗೆ ಮೊಬೈಲ್ ಮಾರಾಟ)
ದುಷ್ಕರ್ಮಿ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳು ಆಂಧ್ರಪ್ರದೇಶದ ವಿವಿಧ ಪಟ್ಟಣಗಳ ಲಾಡ್ಜ್ಗಳಲ್ಲಿ ಉಳಿದುಕೊಂಡು ಹಗಲು ರಾತ್ರಿ ಎನ್ನದೇ ಪೊಲೀಸರು ಹುಡುಕಾಟ ನಡೆಸಿದ್ದರು. ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದು ಸುಮಾರು ಒಂದು ತಿಂಗಳು ಕಳೆಯುತ್ತಾ ಬಂದಿದ್ದು, ಆರೋಪಿ ಮಾತ್ರ ತಲೆಮರಿಸಿಕೊಂಡಿದ್ದಾನೆ.(ತುಮಕೂರಿನಲ್ಲಿ ಶಂಕಿತನ ಬಂಧನ)
ಮೊದಲು ಆರೋಪಿ ಆಂಧ್ರಪ್ರದೇಶದಲ್ಲಿಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಆದರೆ, ಹೊರರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅನಂತಪುರ ಜಿಲ್ಲೆಯಲ್ಲಿ ವಿವಿಧೆಡೆ ಮನೆ ಮನೆಗಳಿಗೆ ತೆರಳಿ ಹುಡುಕಾಟ ನಡೆಸಿದರೂ ಆರೋಪಿ ಬಗ್ಗೆ ಸುಳಿವು ದೊರೆತಿಲ್ಲ.
ಕಾರ್ಯತಂತ್ರ ಬದಲು : ಸದ್ಯ ಪೊಲೀಸರು ಹೊಸ ಕಾರ್ಯತಂತ್ರವನ್ನು ಉಪಯೋಗಿಸಿ ದುಷ್ಕರ್ಮಿಯ ಹುಡುಕಾಟ ನಡೆಸಲು ಚಿಂತನೆ ನಡೆಸಿದ್ದಾರೆ. ಬೆಂಗಳೂರು ಮತ್ತು ಆಂಧ್ರಪ್ರದೇಶದಲ್ಲಿ ಆರೋಪಿ ತಲೆಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಸುಮಾರು ಮೂವರು ವಕ್ತಿಗಳು ಶಂಕಿತ ಆರೋಪಿ ಎಂದು ಪೊಲೀಸರಿಗೆ ಕರೆಗಳು ಬಂದಿದ್ದವು, ಅವರನ್ನು ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.












Click it and Unblock the Notifications