ಎಚ್ಡಿಕೆ vs ಡಿಕೆಶಿ ನಡುವಿನ ಡಿಶುಂಡಿಶುಂಗೆ ಸದನ 'ಬಲಿ'
ಬೆಂಗಳೂರು, ಜು. 21: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಹೈಡ್ರಾಮಾಕ್ಕೆ ನಾಂದಿ ಹಾಡಿತು. ಸೌರನೀತಿ, ಗಣಿಗಾರಿಕೆ, ಫ್ಯಾಮಿಲಿ, ಮಂಕುತಿಮ್ಮನ ಕಗ್ಗ, ಆದಿಚುಂಚನಗಿರಿ ಪೀಠ, ಹಸಿರು ಪೀಠ, ಹೊಟ್ಟೆ ಉರಿ ಎಲ್ಲವೂ ಎಚ್ ಡಿ ಕುಮಾರಸ್ವಾಮಿ vs ಡಿಕೆ ಶಿವಕುಮಾರ್ ವಾಕ್ಸಮರದ ಮುಖ್ಯಾಂಶವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ನೂತನ ಸೌರ ನೀತಿ, ಇಡೀ ದೇಶಕ್ಕೆ ಮಾದರಿ ಎಂದು ಕೇಂದ್ರ ಸರ್ಕಾರವೇ ದೆಹಲಿಗೆ ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪತ್ರ ನೀಡಿದೆ ನೋಡಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸದನದ ಮುಂದೆ ಪತ್ರ ಹಿಡಿದು ನಿಂತರು. [ಇಬ್ಬರ ನಡುವಿನ ವಾಕ್ಸಮರ ಬಗ್ಗೆ ಇಲ್ಲಿ ಓದಿ]
ಮಿಕ್ಕಂತೆ ಸದನದಲ್ಲಿ ಡಿಕೆಶಿ ಅವರು ಉದುರಿಸಿದ ಆಣಿಮುತ್ತುಗಳ ಆಯ್ದ ಸ್ಯಾಂಪಲ್ಸ್ ಇಲ್ಲಿದೆ. ಸ್ಯಾಂಪಲ್ ಗಳನ್ನು ಹೆಕ್ಕಿ ಸುಂದರವಾದ ಕಥೆ ಹೆಣೆದು ಇತ್ತೀಚಿನ ಜನಪ್ರಿಯ ಚಿತ್ರ 'ಬಾಹುಬಲಿ' ಮಾದರಿಯಲ್ಲಿ ಟಿವಿ9 ಕನ್ನಡ ವಾಹಿನಿ ಸದನ 'ಬಲಿ' ಎಂಬ ಕಾರ್ಯಕ್ರಮ ಮಾಡಿದೆ. ನೀವು ಹೇಳಿದ್ದು.. ನಾವು ಕೇಳಿದ್ದು ಜನಪ್ರಿಯ ಕಾರ್ಯಕ್ರಮದಡಿಯಲ್ಲಿ ಸದನದ ಸ್ವಾರಸ್ಯವನ್ನು ಉಣಬಡಿಸಲಾಗಿದೆ. ವಿಡಿಯೋ ಲೇಖನದ ಕೊನೆಯಲ್ಲಿ ನೋಡಿ..

ಸದ್ಯಕ್ಕೆ ಡಿಕೆಶಿ ಮತ್ತು ಎಚ್ಡಿಕೆ ಡೈಲಾಗ್ಸ್ ಫಾರ್ ಯೂ...
* ಎಚ್ಡಿಕೆ: ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ಸೌರನೀತಿ ಜಾರಿಗೆ ತರಲಾಗುತ್ತಿದೆ. 7 ನಿಮಿಷಗಳಲ್ಲಿ 15 ಕಾಲಂ ಅರ್ಜಿ ಆನ್ ಲೈನ್ ನಲ್ಲಿ ಭರ್ತಿ ಮಾಡಿ ಎಂದು ರೈತರಿಗೆ ಸರ್ಕಾರ ಕೇಳುತ್ತಿದೆ.
* ಡಿಕೆಶಿ: ನಾವೇನು ಅಪರಾಧ ಮಾಡಿಲ್ಲ. ಎಲ್ಲಾ ಕಡೆ ಇದೇ ವ್ಯವಸ್ಥೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳು ಒಪ್ಪಿಕೊಂಡು ಜಾರಿಗೆ ತರುತ್ತಿವೆ. ಕೇಂದ್ರ ಸರ್ಕಾರ ಇದಕ್ಕಾಗಿ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ರಾಜ್ಯಕ್ಕೆ 600 ಮೆಗಾವ್ಯಾಟ್ ವಿದ್ಯುತ್ ನೀಡಿದೆ. ಸೌರ ನೀತಿ ಮೆಚ್ಚಿ, ನರೇಂದ್ರಮೋದಿ ರಾಜ್ಯ ಸರಕಾರಕ್ಕೆ ಪ್ರಶಸ್ತಿಯನ್ನು ನೀಡಿದ್ದಾರೆ.
* ಎಚ್ಡಿಕೆ: ನಿಮಗೆ ಪ್ರಶಸ್ತಿಯನ್ನು ನೀಡಿದವರು ಈಗ ರಾಜ್ಯಕ್ಕೆ ಬಂದು ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಇನ್ಯಾವ ಪ್ರಶಸ್ತಿಯನ್ನು ನೀಡುತ್ತಾರೋ ಕಾದು ನೋಡಬೇಕು.
ಡಿಕೆಶಿ: ನಿಮ್ಮ ಸ್ಥಿತಿ ಹೇಗಿದೆ ಗೊತ್ತಾ: ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಜಗವನುದ್ಧರಿಪೆ ಎನ್ನುತಿಹೆ ಓ ಸಖನೇ ನಿನ್ನ ಉದ್ಧಾರ ಎಷ್ಟಾಯ್ತೋ ಮಂಕುತಿಮ್ಮ
ಡಿಕೆಶಿ ಡಿವಿಜಿ ಅವರ ಕಗ್ಗ ಉದಾಹರಿಸಿದ್ದು ಕಂಡು ಅಚ್ಚರಿಪಟ್ಟ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಯಾವ ಮೇಷ್ಟ್ರು ಹೇಳಿಕೊಡ್ರು ಎಂದು ಕೇಳಿದರು. ಸದನದಲ್ಲಿ ನಗೆಕಡಲು ಅಲೆ ಅಲೆಯಾಗಿ ತೇಲಿ ಬಂತು.
ಇಲ್ಲಿಂದ ಮುಂದೆ ಪತ್ನಿ ಹೆಸರೆತ್ತಿ ಗಣಿಗಾರಿಕೆ ಕೇಸ್ ಗಳ ಬಗ್ಗೆ , ಬಾಲಗಂಗಾಧರ ನಾಥ ಸ್ವಾಮೀಜಿ ಕಾವಿ ಕಳಚಿ ಖಾದಿ ತೊಡುವ ಸ್ಥಿತಿಗೆ ತಂದಿದ್ದರ ಬಗ್ಗೆ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿ ಕಡೆ ತಿರುಗಿ ನಿಮ್ಮ ಅವಿಶ್ವಾಸ ನಿರ್ಣಯ ಒಳ್ಳೆ ಫಿಲಂ ಸ್ಟೋರಿ ಥರಾ ಇದೆ ಎಂದು ಬಿಟ್ಟರು. ಮಿಕ್ಕ ಕಥೆ ವಿಡಿಯೋದಲ್ಲಿ ನೋಡಿ ಆನಂದಿಸಿ.. ಮಿಮಿಕ್ರಿ ಮಾಡಿರುವ ಕಲಾವಿದರಿಗೆ ಪ್ರೋತ್ಸಾಹಿಸಿ...












Click it and Unblock the Notifications