ವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿ
Recommended Video
ಬೆಂಗಳೂರು, ಸೆಪ್ಟೆಂಬರ್ 23 : ಮಿನಿ ಟ್ರಕ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಸಂಚಾರಿ ಠಾಣೆ ಮುಖ್ಯಪೇದೆ ಮಹಾಸ್ವಾಮಿಗೆ ಮತ್ತೆ ತರಬೇತಿ ನೀಡಲಾಗುತ್ತದೆ. ಹಲಸೂರು ಗೇಟ್ ಸಂಚಾರಿ ಠಾಣೆಯಿಂದ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಟೌನ್ ಹಾಲ್ ಸಮೀಪ ಹಲಸೂರು ಗೇಟ್ ಸಂಚಾರಿ ಠಾಣೆ ಮುಖ್ಯಪೇದೆ ಮಹಾಸ್ವಾಮಿ ಟ್ರಕ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿದ್ದರು, ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಟ್ರಕ್ ಚಾಲಕ ಸುನೀಲ್ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಮಹಾಸ್ವಾಮಿಯನ್ನು ಹಲಸೂರು ಗೇಟ್ ಠಾಣೆಯಿಂದ ತರಬೇತಿ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿದ್ದು, ಘಟನೆ ಬಗ್ಗೆ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
"ವರ್ಗಾವಣೆ ಮಾಡಲಾದ ಮುಖ್ಯಪೇದೆಗೆ ಸೂಕ್ಷ್ಮ ಕೌಶಲಗಳ ತರಬೇತಿ ಅಗತ್ಯವಿದೆ. ಹೀಗಾಗಿ ಅವರನ್ನು 10 ದಿನಗಳ ತರಬೇತಿಗೆ ನಿಯೋಜನೆ ಮಾಡಲಾಗಿದೆ" ಎಂದು ಸಂಚಾರಿ ವಿಭಾಗದ ಜಂಟಿ ಆಯುಕ್ತ ಬಿ. ಆರ್. ರವಿಕಾಂತೇಗೌಡ ಹೇಳಿದ್ದಾರೆ.

ಕರ್ತವ್ಯ ಲೋಪ ಎಸಗಿದ್ದಾರೆ
ಮಿನಿ ಟ್ರಕ್ ಚಾಲಕ ಸುನೀಲ್ ಮೇಲೆ ಮುಖ್ಯ ಪೇದೆ ಮಹಾಸ್ವಾಮಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಸಿ. ಜೆ. ರಂಗಸ್ವಾಮಿ ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾರೆ. ಮುಖ್ಯ ಪೇದೆ ಮಹಾಸ್ವಾಮಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದ್ದು, ವರದಿ ಅನ್ವಯ ಮಹಾಸ್ವಾಮಿ ವರ್ಗಾವಣೆ ಮಾಡಲಾಗಿದೆ.

ಇಲಾಖಾ ತನಿಖೆಗೆ ಆದೇಶ
ಮಹಾಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ. ಡಿವೈಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ವಿಚಾರಣೆ ನಡೆಸಲಿದ್ದು, ಮಹಾಸ್ವಾಮಿ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ವಿಚಾರಣೆ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತದೆ.

ಕೌಶಲ ತರಬೇತಿ
ಸಂಚಾರಿ ವಿಭಾಗದ ಜಂಟಿ ಆಯುಕ್ತ ಬಿ. ಆರ್. ರವಿಕಾಂತೇಗೌಡ ಈ ಕುರಿತು ಹೇಳಿಕೆ ನೀಡಿದ್ದು, "ಮುಖ್ಯ ಪೇದೆಗೆ ಕೌಶಲ ತರಬೇತಿ ನೀಡಲಾಗುತ್ತದೆ. ಆದ್ದರಿಂದ 10 ದಿನಗಳ ತರಬೇತಿಗೆ ನಿಯೋಜಿಸಲಾಗಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂದರೆ ಏನು?, ಸಾರ್ವಜನಿಕರ ಜೊತೆ ಹೇಗೆ ನಡೆದುಕೊಳ್ಳಬೇಕು. ಎಂಬುದನ್ನು ತರಬೇತಿಯಲ್ಲಿ ಕಲಿಸಲಾಗುತ್ತದೆ" ಎಂದು ಹೇಳಿದರು.

ಸುನೀಲ್ ನಾಪತ್ತೆ
ಮಿನಿ ಟ್ರಕ್ ಚಾಲಕ ಸುನೀಲ್ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ತಾಯಿಗೆ ಕರೆ ಮಾಡಿದ್ದ ಆತ ಘಟನೆ ಬಗ್ಗೆ ವಿವರಣೆ ನೀಡಿದ್ದ. ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಮನೆಗೂ ಬಂದಿಲ್ಲ. ಶನಿವಾರ ರಾತ್ರಿ ನಾಲ್ವರು ಅಪರಿಚಿತರು ಸುನೀಲ್ ಮನೆಗೆ ತೆರಳಿ ಆತನ ಬಗ್ಗೆ ವಿಚಾರಿಸಿ ತಾಯಿಗೂ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications