ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಿ; ಆಸ್ಪತ್ರೆಗಳಿಗೆ ಡಿಸಿಎಂ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 23: ನಗರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಅಥವಾ ಕೊರೊನೇತರ ಕಾರಣದಿಂದ ಯಾರೇ ಮೃತಪಟ್ಟರೂ ಕೂಡಲೇ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಸುವ ಕೆಲಸ ತ್ವರಿತವಾಗಿ ಆಗಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಂದು ವೇಳೆ ಮೃತದೇಹಗಳನ್ನು ನೀಡುವುದು ತಡ ಮಾಡಿದರೆ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಎಚ್ಚರಿಕೆ ನೀಡಿದರು. ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್ ನಿರ್ವಹಣೆ ಸಂಬಂಧ ಸಭೆ ನಡೆಸಿದ ಡಿಸಿಎಂ, ಆಸ್ಪತ್ರೆಗಳಿಂದ ಮೃತದೇಹಗಳನ್ನು ಸಂಬಂಧಿಕರಿಗೆ ತಡವಾಗಿ ನೀಡುತ್ತಿರುವುದರಿಂದ ಚಿತಾಗಾರಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಒಮ್ಮೆಗೇ ಮೃತದೇಹಗಳನ್ನು ತರುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಆಗುತ್ತಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಸೂಚಿಸಿದರು. ಮುಂದೆ ಓದಿ...

ಗ್ಯಾಸ್ ಚಿತಾಗಾರ ತೆರೆಯುವ ಆಲೋಚನೆ
ನಗರದ 13 ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವ ಕಾರಣ ಶವಸಂಸ್ಕಾರ ತಡ ಆಗುತ್ತಿದೆ. ಹೀಗಾಗಿ ಪ್ರಾಯೋಗಿಕವಾಗಿ ಸುಮನಹಳ್ಳಿ ಮತ್ತು ಗಿಡ್ಡ ಹಳ್ಳಿಯಲ್ಲಿ ಗ್ಯಾಸ್ ಚಿತಾಗಾರಗಳನ್ನು ತುರ್ತಾಗಿ ತೆರೆಯಲು ಉದ್ದೇಶಿಸಲಾಗಿದೆ. ಇದು ಯಶಸ್ವಿಯಾದರೆ ಇತರೆ ಕಡೆಯೂ ಆ ವ್ಯವಸ್ಥೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಪ್ರತಿ ಚಿತಾಗಾರಕ್ಕೂ 15 ಸ್ಟ್ರೆಚರ್ಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಚಿತಾಗಾರಕ್ಕೂ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಗಳಿದ್ದರೆ ಬಗೆಹರಿಸಬೇಕು ಎಂದು ಸೂಚಿಸಿದರು.

ಪ್ರತಿ ಆರೋಗ್ಯ ಸೇವಾ ಕೇಂದ್ರಕ್ಕೂ ಅನುದಾನ
ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರಿಗೆ, ಅದರಲ್ಲೂ ಮನೆಯಲ್ಲೇ ಕ್ವಾರೆಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಲಾಗುವ ಮೆಡಿಕಲ್ ಕಿಟ್ ಕೊರತೆ ಉಂಟಾಗಿದೆ. ಕೂಡಲೇ ಈ ಕಿಟ್ಗಳನ್ನು ಖರೀದಿ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತಲಾ 2 ಲಕ್ಷ ರೂ. ನೀಡಲಾಗಿದೆ. ಇದು ಸಾಕಾಗುವುದಿಲ್ಲ. ಹೀಗಾಗಿ ವಿಧಾನಸಭಾ ಕ್ಷೇತ್ರವಾರು, ಬಿಬಿಎಂಪಿ ವಿಭಾಗವಾರು ಇನ್ನೂ ಹೆಚ್ವಿನ ಅನುದಾನ ಅಗತ್ಯ ಇದೆ. ತಕ್ಷಣ ಒದಗಿಸಬೇಕು ಎಂದು ಗೌರವ ಗುಪ್ತ ಅವರಿಗೆ ಸೂಚಿಸಿದರು.

ಸಹಾಯವಾಣಿ ಕರೆ ಸ್ವೀಕರಿಸಲು ಸಿಬ್ಬಂದಿ ನಿಯೋಜನೆ
ಎಲ್ಲಿಯೂ ಕೊರೊನಾ ಪೀಡಿತ ಜನರಿಗೆ ರೆಮ್ಡೆಸಿವಿರ್ ಸೇರಿದಂಗೆ ಯಾವುದೇ ಔಷಧ ಅಥವಾ ಕಿಟ್ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಕರೆಗಳು ಹೆಚ್ಚಾಗಿವೆ. ಸಹಾಯವಾಣಿ ಕೇಂದ್ರದಲ್ಲಿ ಸದ್ಯಕ್ಕೆ ಕರೆ ಸ್ವೀಕರಿಸಲು 30 ಜನರಿದ್ದು, ಇನ್ನೂ 30 ಜನರನ್ನು ನಿಯೋಜಿಸುವಂತೆ ಸೂಚಿಸಿದ್ದೇನೆ. ಕರೆ ಮಾಡುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ರಾಜ್ಯದಲ್ಲಿ ಏಳು ಕಡೆ ಕೋವಿಡ್ ಲಸಿಕೆ ವಿತರಣೆ
ರಾಜ್ಯದಲ್ಲಿ 7 ಕಡೆ ಕೋವಿಡ್ ಲಸಿಕೆ ವಿತರಿಸಲಾಗುತ್ತಿದೆ. ಅಲ್ಲಿಂದ ಲಸಿಕೆ ಬಂದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು. ದೆಹಲಿಯಲ್ಲಿ ಆದಂತೆ ಯಾವುದೇ ರೀತಿಯಲ್ಲೂ ವ್ಯತ್ಯಯ ಆಗಬಾರದು. ರಾಜ್ಯದಲ್ಲಿ 280 ಆಸ್ಪತ್ರೆಗಳಿಂದ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಬಂದಿದೆ. ಆ ಬೇಡಿಕೆ ಅನುಸಾರ ಒದಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಭೆಯಲ್ಲಿ ಗೌರವ ಗುಪ್ತ ಜತೆ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಔಷಧ ನಿಯಂತ್ರಣ ಇಲಾಖೆಯ ಉಪ ನಿರ್ದೇಶಕ ಸುರೇಶ್ ಮುಂತಾದವರು ಇದ್ದರು.












Click it and Unblock the Notifications