ರಾಮಲಿಂಗ ರೆಡ್ಡಿ ಮತ್ತು ಪುತ್ರಿಗೆ ಬಿಜೆಪಿ ನೀಡಿದ ಭರ್ಜರಿ ಆಫರ್?
Recommended Video
ಬೆಂಗಳೂರು, ಜುಲೈ 8: ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಮೇಲೆ ನಿಯತ್ತು ಹೊಂದಿದ್ದ ವ್ಯಕ್ತಿ, ಸಮ್ಮಿಶ್ರ ಸರಕಾರದ ಅಳಿವು ಉಳಿವಿನ ನಿರ್ಣಾಯಕ ಕಾಲಘಟ್ಟದಲ್ಲಿ ರಾಜೀನಾಮೆ ನೀಡುವುದೆಂದರೆ? ಹೌದು, ಶನಿವಾರದ (ಜು 6) ದಿಢೀರ್ ರಾಜಕೀಯ ವಿದ್ಯಮಾನದಲ್ಲಿ ರಾಜೀನಾಮೆ ನೀಡಿದ ಶಾಸಕರಲ್ಲಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದು, ರಾಮಲಿಂಗ ರೆಡ್ಡಿಯವರ ರಾಜೀನಾಮೆ.
ಸಾರಿಗೆ, ಗೃಹಸಚಿವರಾಗಿ ರಾಮಲಿಂಗ ರೆಡ್ಡಿಯವರ ಸುದೀರ್ಘ ರಾಜಕೀಯ ಅನುಭವವನ್ನು ಕಾಂಗ್ರೆಸ್ ಅಸಡ್ಡೆ ಮಾಡಿದ್ದಕ್ಕೆ, ಅದರ ಫಲವನ್ನು ಕಾಂಗ್ರೆಸ್ ಈಗ ಅನುಭವಿಸುತ್ತಿದೆ. ಯಾವ ಕಾರಣಕ್ಕೂ ನನ್ನ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎನ್ನುವ ಖಡಕ್ ನಿರ್ಧಾರಕ್ಕೆ ರೆಡ್ಡಿ ಬಂದಿದ್ದಾರೆ. ಇವರಿಗಿರುವ ಕೋಪ ಮೂವರ ಮೇಲೆ , ಅದರಲ್ಲಿ ಕುಮಾರಸ್ವಾಮಿ ಇಲ್ಲ.
ಮಿತಭಾಷಿ, ಪಕ್ಷಾತೀತವಾಗಿ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ರಾಮಲಿಂಗ ರೆಡ್ಡಿ, ಇಂತಹ ಡೈನಾಮಿಕ್ ಹೆಜ್ಜೆಯಿಡಲು ಕಾರಣ, ಸಚಿವ ಸ್ಥಾನಕ್ಕಿಂತ ಹೆಚ್ಚಾಗಿ, ತಮ್ಮದೇ ಪಕ್ಷದ ಮೂವರು ಅವರನ್ನು ನಡೆಸಿಕೊಂಡ ಮತ್ತು ಕುಹುಕವಾಡಿದ ರೀತಿ ಎನ್ನುವುದು ರೆಡ್ಡಿ ಆಪ್ತವಲಯದಲ್ಲಿ ಕೇಳಿಬರುತ್ತಿರುವ ಮಾತು.

ಅದೇನೇ ಇರಲಿ, ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿಯಾಗಿದೆ. ವೇಣುಗೋಪಾಲ್ ಬರ್ತಾ ಇದ್ದಾರೆ, ಚರ್ಚಿಸೋಣ ಎನ್ನುವ ಸಿದ್ದರಾಮಯ್ಯ ಆಫರ್ ಗೆ ರಾಮಲಿಂಗ ರೆಡ್ಡಿ ಕ್ಯಾರೇ ಅನ್ನಲಿಲ್ಲ. ನಾನು ರಾಜೀನಾಮೆ ನೀಡಿರುವುದು ಶಾಸಕ ಸ್ಥಾನಕ್ಕೆಯೇ ಹೊರತು, ಕಾಂಗ್ರೆಸ್ಸಿಗೆ ಅಲ್ಲ ಎಂದು ರೆಡ್ಡಿ ಹೇಳಿದ್ದರೂ, ಬಿಜೆಪಿ ಅವರಿಗೆ ಭರ್ಜರಿ ಆಫರ್ ನೀಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ, ಮತ್ತೆ ಚುನಾವಣೆ ಗೆದ್ದು ಬರುವ ಅವಶ್ಯಕತೆಯಿದೆ. ಬೆಂಗಳೂರು ಬಿಟಿಎಂ ಲೇಔಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಮಲಿಂಗ ರೆಡ್ಡಿಗೆ ಇವರಿಗಿರುವ ಕಠಿಣ ಸ್ಪರ್ಧೆಯೆಂದರೆ ಅದು ಬಿಜೆಪಿ. ಹಾಗಾಗಿ, ಬಿಜೆಪಿ ಟಿಕೆಟ್, ಅದಿಲ್ಲದಿದ್ದರೇ ರಾಜ್ಯಸಭೆಯ ಸದಸ್ಯತ್ವವನ್ನು ನೀಡುವ ಆಫರ್ ಅನ್ನು ಅವರಿಗೆ ನೀಡಲಾಗಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.
ಮೊದಲು, ಉಪಮುಖ್ಯಮಂತ್ರಿ ಹುದ್ದೆ, ಅದಕ್ಕೆ ವಿರೋಧ ವ್ಯಕ್ತವಾದರೆ ಅಥವಾ ತಾಂತ್ರಿಕವಾಗಿ ಏನಾದರೂ ತೊಂದರೆಯಾದಲ್ಲಿ ರಾಜ್ಯಸಭಾ ಸ್ಥಾನದ ಆಮಿಷವೊಡ್ಡಲಾಗಿದೆ. ಪುತ್ರಿ ಸೌಮ್ಯ ರೆಡ್ಡಿಗೆ ಸಚಿವ ಸ್ಥಾನ ನೀಡುವ ಆಫರ್ ಕೂಡಾ ಬಿಜೆಪಿ ನೀಡಿದೆ ಎಂದು ಹೇಳಲಾಗುತ್ತಿದೆ.
ಸೌಮ್ಯ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಬಿಟಿಎಂ ಲೇಔಟ್ ನಿಂದ ಸೌಮ್ಯ, ಅವರು ಈಗ ಪ್ರತಿನಿಧಿಸುತ್ತಿರುವ ಜಯನಗರ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧಿಸುವ ಮಾತೂ ಹರಿದಾಡುತ್ತಿದೆ.












Click it and Unblock the Notifications