ಅರ್ಚನಾರೆಡ್ಡಿ ಕೊಲೆ ಪ್ರಕರಣ: ಆಸ್ತಿಗಾಗಿ ಸ್ಕೆಚ್ ಹಾಕಿ ಹತ್ಯೆ ಮಾಡಿದ ಹಂತಕ ಪತಿ!
ಬೆಂಗಳೂರು, ಡಿ. 29: ಎಲೆಕ್ರಾನಿಕ್ ಸಿಟಿ ಬಳಿ ಮಹಿಳೆಯನ್ನು ಕೊಂದ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಮೊದಲ ಗಂಡನಿಗೆ ಡೈವೋರ್ಸ್ ನೀಡಿ ಐದು ವರ್ಷದ ಹಿಂದೆ ಮದುವೆಯಾಗಿದ್ದ ಎರಡನೇ ಗಂಡನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ. ಕೊಲೆಯಾದ ಅರ್ಚನಾ ರೆಡ್ಡಿಯ ಪುತ್ರಿ ದೀಪಿಕಾ ರೆಡ್ಡಿ ಜತೆ ಎರಡನೇ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದೇ ವಿಚಾರವಾಗಿ ಉಂಟಾದ ಜಗಳ ಅರ್ಚನಾ ರೆಡ್ಡಿಯನ್ನು ಬಲಿ ಪಡೆದಿರುವ ಸ್ಫೋಟಕ ಸಂಗತಿ ಹೊರ ಬಿದ್ದಿದೆ.
ಅರ್ಚನಾ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ವಿಚಾರಣೆ ನಡೆಸಿದ್ದಲ್ಲಿ, ಬಹುಶಃ ಆಕೆ ನಡು ರಸ್ತೆಯಲ್ಲಿ ದುಷ್ಕರ್ಮಿಗಳ ಮಚ್ಚಿನ ಏಟುಗಳಿಗೆ ಬಲಿಯಾಗುತ್ತಿರಲಿಲ್ಲ. ಆದರೆ ಎಲ್ಲವೂ ಮುಗಿದ ಮೇಲೆ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಮಹಿಳೆಯೊಬ್ಬಳ ಜೀವ ಹೋಗಿಬಿಟ್ಟಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅರ್ಚನಾ ರೆಡ್ಡಿ ಕೊಲೆ ಪ್ರಕರಣದ ಸ್ಫೋಟಕ ಸಂಗತಿಗಳು ಹೊರ ಬಿದ್ದಿದೆ.
ಅರ್ಚನಾ ರೆಡ್ಡಿ ಮೊದಲ ಗಂಡನಿಗೆ ವಿಚ್ಛೇಧನ ಕೊಟ್ಟು ವೃತ್ತಿಯಲ್ಲಿ ಜಿಮ್ ಟ್ರೈನರ್ ಅಗಿದ್ದ ನವೀನ್ನನ್ನು ಮದುವೆಯಾಗಿದ್ದಳು. ಒಬ್ಬ ಪುತ್ರ ಹಾಗೂ ಪುತ್ರಿ ಹೊಂದಿದ್ದ ಅರ್ಚನಾಳನ್ನು ನವೀನ್ ಎರಡು ವರ್ಷ ಚೆನ್ನಾಗಿ ನೋಡಿಕೊಂಡಿದ್ದಾನೆ. ಅದಾದ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ನಡೆಯುತ್ತಿತ್ತು. ಚನ್ನಪಟ್ಟಣದಲ್ಲಿ 12 ಎಕರೆ ಆಸ್ತಿ, ಎಚ್ಎಸ್ಆರ್ ಬಡಾವಣೆಯಲ್ಲಿ ಬಂಗಲೆ ಸೇರಿದಂತೆ ಅರ್ಚನಾ ರೆಡ್ಡಿ ಹೆಸರಿನಲ್ಲಿ ಸುಮಾರು 40 ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಆಸ್ತಿ ಮೇಲೆ ಕಣ್ಣು ಹಾಕಿದ್ದ ನವೀನ್ ಪತ್ನಿ ಜತೆಗೆ ಆಕೆಯ ಮಗಳು ದೀಪಿಕಾ ರೆಡ್ಡಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಇದು ಇಬ್ಬರ ನಡುವೆ ಹೆಚ್ಚು ಮನಸ್ತಾಪ ಉಂಟಾಗಲು ಕಾರಣವಾಗಿತ್ತು.
ಜಿಗಣಿ ಠಾಣೆಗೆ ತಿಂಗಳ ಹಿಂದೆ ದೂರು:
ನವೀನ್ ಕಿರುಕುಳ ತಾಳಲಾರದೇ ಅರ್ಚನಾ ರೆಡ್ಡಿ ಜಿಗಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನವೀನ್ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಳು. ಅರ್ಚನಾ ರೆಡ್ಡಿ ನೀಡಿದ ದೂರಿನ ಮೇರೆಗೆ ಜಿಗಣಿ ಪೊಲೀಸರು ನವೀನ್ ನನ್ನು ಸಮರ್ಥವಾಗಿ ವಿಚಾರಣೆ ನಡೆಸಿದ್ದರೇ ಬಹುಶಃ ಅರ್ಚನಾ ರೆಡ್ಡಿಯ ಜೀವ ಬೀದಿಯಲ್ಲಿ ಹೋಗುತ್ತಿರಲಿಲ್ಲವೇನೋ ?
ದೂರು ಕೊಟ್ಟ ನಂತರ ಆಗಿದ್ದು ಬೇರೆ :
ನವೀನ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ. ಈ ನಡುವೆ ಗಂಡನ ಕಿರುಕುಳದಿಂದ ಮುಕ್ತಿ ಪಡೆಯಲು ಅರ್ಚನಾ ರೆಡ್ಡಿ ನ್ಯಾಯ ಕೋರಿ ರೌಡಿ ಮೊರೆ ಹೋಗಿದ್ದಾಳೆ. ಆಕೆಯ ಆಸ್ತಿ ಹಿನ್ನೆಲೆ ನೋಡಿ ರೌಡಿ ಕೂಡ ಅರ್ಚನಾ ರೆಡ್ಡಿಯ ಮಾತಿಗೆ ಮರುಳಾಗಿದ್ದಾನೆ. ಅರ್ಚನಾ ರೆಡ್ಡಿ ರೌಡಿ ಶೀಟರ್ ಸಂಪರ್ಕಿಸಿರುವ ವಿಚಾರ ತಿಳಿದ ನವೀನ್ 'ನನಗೆ ಉಳಿಗಾಲವಿಲ್ಲ' ಎಂದು ಭಾವಿಸಿ ಅರ್ಚನಾ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದಾನೆ.
ಅಂದು ಕೊಂಡಂತೆ ಹತ್ಯೆ:
ಕೆಲಸದ ನಿಮಿತ್ತ ಜಿಗಣಿಗೆ ಹೊಗಿದ್ದ ಅರ್ಚನಾ ರೆಡ್ಡಿ ಕಾರಿನಲ್ಲಿ ಎಚ್ಎಸ್ಆರ್ ಲೇಔಟ್ಗೆ ಹೋಗುತ್ತಿದ್ದರು. ನವೀನ್ ರೂಪಿಸಿದ್ದ ಪ್ಲಾನ್ನಂತೆ ದ್ವಿಚಕ್ರ ವಾಹನ ಕಾರಿಗೆ ತಾಗಿಸಿ ಬೀಳಿಸಿದ್ದಾರೆ. ಕಾರು ನಿಲ್ಲಿಸಿದ ಕೂಡಲೇ ಅರ್ಚನಾ ರೆಡ್ಡಿಯನ್ನು ಹೊರಗೆ ಎಳೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೇಗೂರು ಮೂಲದ ಅನೂಪ್ ಮತ್ತ ಬೊಮ್ಮಸಂದ್ರದ ಸಂತೋಷ್ ಜತೆಗೂಡಿ ನವೀನ್ ತನ್ನ ಪತ್ನಿ ಅರ್ಚನಾ ರೆಡ್ಡಿಯನ್ನು ಕೊಲೆ ಮಾಡಿಸಿದ್ದಾನೆ.
ಅರ್ಚನಾ ರೆಡ್ಡಿ ಮಗಳ ಜತೆ ನವೀನ್ ಸಂಬಂಧ:
ಇನ್ನು ತಾಯಿ ಅರ್ಚನಾ ರೆಡ್ಡಿಯನ್ನು ಮದುವೆಯಾಗಿದ್ದ ನವೀನ್ ಆಕೆಯ ಮಗಳು ದೀಪಿಕಾ ರೆಡ್ಡಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ಅರ್ಚನಾ ದೂರ ಆಗುತ್ತಿದ್ದಂತೆ ಆಕೆಯ ಮಗಳ ಜತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಇದರಿಂದ ನೊಂದ ಅರ್ಚನಾ ರೆಡ್ಡಿ ತನ್ನ ಮಗ ತ್ರಿವೇದ್ ನಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಳು. ತನ್ನ ಸಹೋದರಿ ಜತೆ ನವೀನ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಅರೋಪಿಸಿ ತ್ರಿವೇದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದ. ತನ್ನ ಮಗಳ ಜತೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ನವೀನ್ ನನ್ನು ಅರ್ಜನಾ ರೆಡ್ಡಿ ಪ್ರಶ್ನೆ ಮಾಡಿದ್ದಳು. ಹೀಗಾಗಿ ಇಬ್ಬರ ನಡುವೆ ವೈಷಮ್ಯ ತಾರಕಕ್ಕೇರಿತ್ತು.
ಅರ್ಚನಾ
ರೆಡ್ಡಿ
ಕೊಲೆ
ಬಗ್ಗೆ
ಮಗಳಿಗೆ
ಗೊತ್ತಿತ್ತು:
ಇನ್ನು ಅರ್ಚನಾ ರೆಡ್ಡಿ ಕೊಲೆಯಾಗುವ ಬಗ್ಗೆ ಮಗಳು ದೀಪಿಕಾ ರೆಡ್ಡಿಗೆ ಮೊದಲೇ ಗೊತ್ತಿತ್ತು ಎಂಬುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಅರ್ಚನಾ ರೆಡ್ಡಿಗೆ ಕರೆ ಮಾಡಿದ್ದ ದೀಪಿಕಾರೆಡ್ಡಿ ತನ್ನ ತಾಯಿ ಹೋಗುತ್ತಿರುವ ವಿಚಾರವನ್ನು ನವೀನ್ಗೆ ತಿಳಿಸಿದ್ದಳು. ತಾಯಿ ಹತ್ಯೆ ಬಗ್ಗೆ ಸಂಚು ರೂಪಿಸಿದ್ದ ನವೀನ್ ಕೃತ್ಯದ ಬಗ್ಗೆ ದೀಪಿಕಾ ರೆಡ್ಡಿಗೆ ಮೊದಲೇ ಗೊತ್ತಿತ್ತು ಎನ್ನಲಾಗುತ್ತಿದೆ. ತಾಯಿ ಹತ್ಯೆ ಬಳಿಕವೂ ದೀಪಿಕಾ ರೆಡ್ಡಿ ನವೀನ್ ಮನೆಯಲ್ಲಿದ್ದಳು. ಹೀಗಾಗಿ ಆಕೆಯ ಮೇಲೆ ಪೊಲೀಸರು ಅನುಮಾನಗೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ನಿರ್ಲಕ್ಷ್ಯ:
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆಸ್ತಿಗಾಗಿ ಅರ್ಚನಾ ಮಗಳನ್ನೇ ಬಳಸಿಕೊಂಡು ನವೀನ ಕೊಲೆಮಾಡಿರುವ ಮಾಹಿತಿ ಇದೀಗ ಹೊರ ಬಿದ್ದಿದೆ. ನನ್ನ ಗಂಡನಿಂದ ಜೀವ ಬೆದರಿಕೆಯಿದೆ ಎಂದು ಒಂದು ತಿಂಗಳ ಹಿಂದೆ ದೂರು ಕೊಟ್ಟಿದ್ದಳು. ಆ ದೂರನ್ನು ಆಧರಿಸಿ ಪೊಲೀಸರು ಕ್ರಮ ಜರುಗಿಸಿದ್ದಲ್ಲಿ ಅರ್ಚನಾ ರೆಡ್ಡಿ ಎಂಬ ಮಹಿಳೆ ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗುತ್ತಿದ್ದಳೇ ? ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದನ್ನು ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಸಾರಿ ಸಾರಿ ಹೇಳುತ್ತಿವೆ. ಅದೇ ಸಾಲಿಗೆ ಇದೀಗ ಅರ್ಚನಾ ರೆಡ್ಡಿ ಹತ್ಯೆ ಪ್ರಕರಣ ಕೂಡ ಸೇರ್ಪಡೆಯಾಗಿದೆ.