2013-14ನೇ ಸಾಲಿನ APP ನೇಮಕ ಅಕ್ರಮ: 36 ಅಭಿಯೋಜಕರಿಗೆ ಕುತ್ತು
ಬೆಂಗಳೂರು, ಫೆಬ್ರವರಿ 24: 2013-14ನೇ ಸಾಲಿನಲ್ಲಿ ನಡೆದಿದ್ದ ಸುಮಾರು 180 ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಹುದ್ದೆಗಳ ನೇಮಕ ಅಕ್ರಮ ಎಸಗಿದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ 36 ಮಂದಿ ಅಭಿಯೋಜಕರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಹಾಗಾಗಿ ಆ 36 ಮಂದಿಗೆ ಕುತ್ತು ಎದುರಾಗಿದ್ದು, ಅವರು ಲೋಕಾಯುಕ್ತ ವಿಚಾರಣೆಯನ್ನು ಎದುರಿಸಬೇಕಾಗಿದೆ. ಕಲಬುರಗಿಯ ಚಾಯದೇವಿ ಸೇರಿದಂತೆ ವಿವಿಧ ಜಿಲ್ಲೆಗಳ ಕೋರ್ಟ್ಗಳಲ್ಲಿ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಸದ್ಯ ಅಮಾನತ್ತಿನಲ್ಲಿರುವ 36 ಎಪಿಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠ ಪ್ರಕಟಿಸಿದೆ.

ಇದರಿಂದ 36 ಆರೋಪಿಗಳ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಸಿರು ಶಾನೆ ದೊರೆತಂತಾಗಿದೆ.
ಲೋಕಾಯುಕ್ತ ಕೋರ್ಟ್ ಪ್ರಕರಣ ಸಂಬಂಧ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ದೋಷಪೂರಿತವಾಗಿದೆ ಹಾಗೂ ತಮ್ಮ ವಿರುದ್ಧದ ಆರೋಪಗಳಿಗೆ ಪೂರಕ ಸಾಕ್ಷ್ಯಗಳಿಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಲೋಕಾಯುಕ್ತ ಪರ ವಿಶೇಷ ಅಭಿಯೋಜಕರು, ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಅರ್ಜಿದಾರರ ಉತ್ತರ ಪತ್ರಿಕೆ ಹಾಗೂ ಅಂಕಗಳನ್ನು ತಿದ್ದಲಾಗಿದೆ. ಇದರ ಪರಿಣಾಮ ಅವರು ಎಪಿಪಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿಯಬೇಕಿದೆ. ಅರ್ಜಿದಾರರು ಅಕ್ರಮ ಎಸಗಿದ್ದಾರೆಯೋ ಅಥವಾ ಇಲ್ಲವೋ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿಯೇ ತೀರ್ಮಾನವಾಗಬೇಕಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ ಏನು?
2013-14ನೇ ಸಾಲಿನಲ್ಲಿ ಸುಮಾರು 180 ಎಪಿಪಿ ಹುದ್ದೆಗಳ ನೇಮಕಾತಿ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಉದ್ಯೋಗ ವಂಚಿತ ಅಭ್ಯರ್ಥಿ ರವಿ ಎಂಬಾತ ಖಾಸಗಿ ದುರು ದಾಖಲಿಸಿದ್ದರು. ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2016ರಲ್ಲಿ ಸುಮಾರು 62 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಇಬ್ಬರು ರಾಜ್ಯ ಅಭಿಯೋಜನಾ ಇಲಾಖೆ ಅಧಿಕಾರಿಗಳಾಗಿದ್ದರೆ, 60 ಮಂದಿ ಅಭ್ಯರ್ಥಿಗಳಾಗಿದ್ದರು.
ಮೌಲ್ಯಮಾಪನದ ನಂತರ ಅರ್ಜಿದಾರ ಆರೋಪಿಗಳ ಉತ್ತರ ಪತ್ರಿಕೆಗಳನ್ನು ತಿರುಚಲಾಗಿದೆ. ಮೌಲ್ಯಮಾಪನ ಮಾಡಿದ್ದ ಜಿಲ್ಲಾ ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿ, ಹೆಚ್ಚು ಅಂಕ ನೀಡಲಾಗಿದೆ. ಇದರ ಪರಿಣಾಮ ಅವರೆಲ್ಲರೂ ಎಪಿಪಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿತ್ತು. ಅದನ್ನು ಆಧರಿಸಿ ಎಲ್ಲಾ ಆರೋಪಿಗಳನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಆದೇಶಿಸಿದೆ.ತಮ್ಮ ವಿರುದ್ಧದ ಪ್ರಕರಣ ಮತ್ತು ಲೋಕಾಯುಕ್ತ ಕೋರ್ಟ್ ವಿಚಾರಣೆ ರದ್ದುಪಡಿಸಬೇಕು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications