ಬೆಂಗಳೂರು ಹೊರ ವಲಯದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷ್ಯ!
ಬೆಂಗಳೂರು, ನವೆಂಬರ್ 2: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆ ಬಳಿಯ ಬೆಂಗಳೂರು ಹೊರವಲಯದಲ್ಲಿ ರಾತ್ರಿ ವೇಳೆ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಕೂಡ್ಲೂ ಗೇಟ್ ಬಳಿ ನಿನ್ನೆ ಚಿರತೆಯನ್ನು ಹಿಡಿಯಲಾಗಿತ್ತು. ಈಗ ಬೆಂಗಳೂರಿಗೆ ಸಮೀಪವಿರುವ ದಾಬಸ್ಪೇಟೆ ಬಳಿ ಮತ್ತೆ ಚಿರತೆಯೊಂದು ಪ್ರತ್ಯಕ್ಷ್ಯವಾಗಿದೆ. ಒಂದು ವಾರದೊಳಗೆ ಚಿರತೆ ವಸತಿ ಆವರಣಕ್ಕೆ ಪ್ರವೇಶಿಸಿದ ಎರಡನೇ ಘಟನೆಯಾಗಿದೆ. ದಾಬಸ್ಪೇಟೆ ಸಮೀಪದ ಮಾರುತಿನಗರದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯಗಳು ಆ ಪ್ರದೇಶದಲ್ಲಿನ ಗೋದಾಮಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಜಿಲ್ಲೆಯ ಕೆರೆಕಟ್ಟಿಗನೂರು, ಇಂದಿರಾನಗರ, ಮಾರುತಿನಗರ ಗ್ರಾಮಗಳ ಬಳಿ ಚಿರತೆ ಕಾಣಿಸಿಕೊಂಡಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೊಮ್ಮನಹಳ್ಳಿ ಪ್ರದೇಶದಲ್ಲಿ ಚಿರತೆ ಪಶುವೈದ್ಯರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.
ಬೊಮ್ಮನಹಳ್ಳಿ ಬಳಿ ಬೀಡು ಬಿಟ್ಟಿದ್ದ ಚಿರತೆ ಪಶು ವೈದ್ಯರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ. ಬೊಮ್ಮನಹಳ್ಳಿ ಸಮೀಪದ ಕೃಷ್ಣಾ ರೆಡ್ಡಿ ಬಡಾವಣೆಯ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಸೆರೆ ಹಿಡಿಯಲು 30ಕ್ಕೂ ಹೆಚ್ಚು ತರಬೇತಿ ಪಡೆದ ಸಿಬ್ಬಂದಿಯನ್ನು ಕಳೆದ ಎರಡು ದಿನಗಳಿಂದ ಸ್ಥಳದಲ್ಲಿ ನಿಯೋಜಿಸಲಾಗಿದೆ. ಅರಣ್ಯಾಧಿಕಾರಿಗಳು ಡ್ರೋನ್ ಬಳಸಿ ಪ್ರಾಣಿಯನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.
ಫೆಬ್ರವರಿಯಿಂದ ಅರಣ್ಯ ಇಲಾಖೆಗೆ ಚಿರತೆ ಹಾವಳಿ ಕುರಿತು 500ಕ್ಕೂ ಹೆಚ್ಚು ದೂರುಗಳು ಬಂದಿವೆ. ಜನವರಿ 2023 ರಲ್ಲಿ ಕರ್ನಾಟಕ ಅರಣ್ಯ ಇಲಾಖೆಯಿಂದ ರಚಿಸಲಾದ ಚಿರತೆ ಕಾರ್ಯಪಡೆ (ಎಲ್ಟಿಎಫ್) ಫೆಬ್ರವರಿಯಿಂದ ಚಿರತೆ ಹಾವಳಿಗೆ ಸಂಬಂಧಿಸಿದಂತೆ 500 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನ ಟಿ ನರಸೀಪುರ ಪ್ರದೇಶದಲ್ಲಿ ಚಿರತೆ ದಾಳಿಗೆ ನಾಲ್ವರು ಬಲಿಯಾದ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆಯನ್ನು ರಚಿಸಲು ಅರಣ್ಯ ಇಲಾಖೆಗೆ ಸರ್ಕಾರ ಆದೇಶ ನೀಡಿತ್ತು.
ವರದಿಗಳ ಪ್ರಕಾರ, ಅರಣ್ಯ ಇಲಾಖೆಯು 48 ಜನರೊಂದಿಗೆ ಚಿರತೆ ಕಾರ್ಯಪಡೆಯನ್ನು ರಚಿಸಿತು. ಇದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಚಿರತೆಗಳನ್ನು ಹಿಡಿಯಲು ತರಬೇತಿ ಪಡೆದ ಗುತ್ತಿಗೆ ಸಿಬ್ಬಂದಿ ಸೇರಿದ್ದಾರೆ. ಪಡೆ ರಚನೆಯಾದ ನಂತರ ಎಲ್ಟಿಎಫ್ 46 ಚಿರತೆಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಿದೆ.











Click it and Unblock the Notifications