ದರ್ಶನ್ಗೆ ಬಡವರ ಮಕ್ಕಳೇ ಬೇಕಾಗಿತ್ತಾ..?: ಆರೋಪಿ ಅನು ತಾಯಿ ಗೋಳಾಟ
ಬೆಂಗಳೂರು, ಜೂನ್ 14: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಈಗಾಗಲೇ ಹದಿನೈದಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಚಿತ್ರದುರ್ಗ ಮೂಲದ ಅನಿಲ್ ಕುಮಾರ್ (ಅನು) ಎನ್ನುವಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಅನಿಲ್ ಕುಮಾರ್ ತಾಯಿ ಮಾತನಾಡಿದ್ದು, ದರ್ಶನ್ಗೆ ಇಂತಹ ಕೆಲಸಕ್ಕೆ ಬಡವರ ಮಕ್ಕಳೇ ಬೇಕಾಗಿತ್ತಾ..? ಎಂದು ಗೋಳಾಡಿದ್ದಾರೆ. ಖಾಸಗಿ ಚಾನೆಲ್ನಲ್ಲಿ ಮಾತನಾಡಿರುವ ಅನು ತಾಯಿ, ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಸರ್.. ಗೊತ್ತಿಲ್ಲ ವಿಚಾರವನ್ನು ನಾವು ಏನು ಹೇಳುವುದು. ನಾನು ಮನೆ ಕೆಲಸಕ್ಕೆ ಹೋಗಿದ್ದೆ. ನನಗೆ ಏನೂ ಗೊತ್ತಿಲ್ಲ. ಕಣ್ಣಾರೆ ಏನ್ನನ್ನೂ ಕಂಡಿಲ್ಲ. ನನ್ನ ಮಗ ಅಂತವನಲ್ಲ..ಅಕ್ಕ ಪಕ್ಕ ಕೇಳಿ ಬೇಕಾದರೆ. ಈ ಪ್ರಕರಣದ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದಿದ್ದಾರೆ.

ಲೋನ್ನಲ್ಲಿ ಆಟೋ ತೆಗೆದುಕೊಂಡು ಓಡಿಸುತ್ತಿದ್ದ. ಅವನು ಇದ್ದರೆ ನಮ್ಮ ಜೀವನ ನಡೆಯುತ್ತಿತ್ತು. ಈಗ ನಾನು ಮನೆ ಕೆಲಸಕ್ಕೆ ಹೋಗಬೇಕು. ಹೊಟ್ಟೆಪಾಡು ನಡೆಯಬೇಕು ಎನ್ನುವಂತಾಗಿದೆ. ಬಡವರು ನಾವು. ಇದ್ದವನು ಇಷ್ಟು ನೋವು ಕೊಡುವುದಾ..? ಬಡವರ ಮಕ್ಕಳೇ ಬೇಕಾಗಿತ್ತಾ..? ನಾವು ನೋಡಿದರೆ ಸೋರುವ ಮನೆಯಲ್ಲಿ ಇದ್ದೇವೆ. ಮನೆ ಕಟ್ಟಿಕೊಳ್ಳುವ ಪರಿಸ್ಥಿತಿಯಲ್ಲಿ ಸಹ ಇಲ್ಲ ನಾವು ಎಂದು ಕಣ್ಣೀರು ಹಾಕಿದ್ದಾರೆ.
ಬಾಡಿಗೆ ಅಂತಾ ಕರೆದಾಗ ನಮ್ಮ ಹೊಟ್ಟೆಪಾಡಿಗೆ ನಾವು ಹೋಗುತ್ತೇವೆ. ಹೀಗೆ ಮೋಸ ಮಾಡುತ್ತಾರಾ ಯಾರಾದರೂ. ಈ ಬಗ್ಗೆ ನನ್ನ ಮಗ ಯಾವತ್ತೂ ಚರ್ಚೆ ಮಾಡಿಲ್ಲ. ಧರ್ಮಸ್ಥಳಕ್ಕೆ ಹೋಗುತ್ತೇನೆ ಅಂತಾ ಹೋಗಿದ್ದಾನೆ. ನಾವು ಬರುತ್ತಾನೇ ಅಂತಾ ಕಾಯುತ್ತಿದ್ದೇವೆ. ಅದು ಇಷ್ಟೆಲ್ಲಾ ಆಗಿರುವುದು ನನಗೆ ಗೊತ್ತಿಲ್ಲ. ಅಕ್ಕಪಕ್ಕದವರು ಹೇಳಿ ಗೊತ್ತಾಯಿತು ಎಂದು ಆರೋಪಿ ಅನು ತಾಯಿ ಕಣ್ಣೀರು ಹಾಕಿದ್ದಾರೆ.
ಅನಿಲ್ ಕುಮಾರ್ ಬಂಧನ ಯಾಕೆ..?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಅನಿಲ್ ಕುಮಾರ್ ಎನ್ನುವಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತಹ ಸಂದರ್ಭದಲ್ಲಿ ಅವರನ್ನು ಆಟೋದಲ್ಲಿ ಪೆಟ್ರೋಲ್ ಬಂಕ್ ತನಕ ಬಿಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅನಿಲ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಆರೋಪಿ ಅನಿಲ್ ಕುಮಾರ್ (ಅನು) ಚಿತ್ರದುರ್ಗ ಮೂಲದವನಾಗಿದ್ದು, ಚಿತ್ರದುರ್ಗ ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿ ತಂದೆ ಹಾಗೂ ತಾಯಿ ಜೊತೆ ವಾಸವಿದ್ದಾನೆ. ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಮನೆಯ ಜವಾಬ್ದಾರಿಯನ್ನು ಹೊತ್ತಿರುವ ಅನು ಈ ಪ್ರಕರಣದಲ್ಲಿ ಯಾವ ಪಾತ್ರವಹಿಸಿದ್ದಾನೆ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ.












Click it and Unblock the Notifications