'ನಿಮ್ಮ ಮನೆ ನಾಯಿಗಿಂತಲೂ ಅಂಗನವಾಡಿ ಕಾರ್ಯಕರ್ತೆಯರು ಕೀಳಾ?'
ಬೆಂಗಳೂರು, ಜನವರಿ 17: ಕೇಂದ್ರ ಸರ್ಕಾರ ಭೇಟಿ ಬಚಾವೊ, ಭೇಟಿ ಪಡಾವೊ ಎನ್ನುತ್ತದೆ, ಆದರೆ ಆ ಎರಡೂ ಯೋಜನೆಯನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯತಯರು, ಬಿಸಿ ಊಟ ಕಾರ್ಯತರೆಯರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದ್ದಾರೆ.
ಐಸಿಡಿಎಸ್ ಯೋಜನೆಗೆ ಕೇಂದ್ರ ಅನುದಾನ ಅನುದಾನ ಕಡಿತಗೊಳಿಸಿರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕರ್ತೆಯರು ನಗರದ ಸೌತ್ ಎಂಡ್ ವೃತ್ತದಲ್ಲಿನ ರಸಗೊಬ್ಬರ ಖಾತೆ ಕೇಂದ್ರ ಸಚಿವ ಅನಂತ್ಕುಮಾರ್ ಅವರ ಕಚೇರಿ ಮುಂದೆ ಮಾಡಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅನುದಾನ ಕಡಿತ: ಕೇಂದ್ರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂ
ದೇಶದಲ್ಲಿ ಅಪೌಷ್ಠಿಕತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ, ಆದರೆ ಈಗ ಕೇಂದ್ರ ತರುತ್ತಿರುವ ಹೊಸ ಯೋಜನೆ ಪ್ರಕಾರ ಪೌಷ್ಠಿಕ ಆಹಾರದ ನೀಡುವ ಬದಲಿಗೆ ಮಗುವಿನ ಪೋಷಕರ ಖಾತೆಗೆ ಹಣ ಜಮಾವಣೆ ಮಾಡಲಾಗುತ್ತದೆ, ಹೀಗೆ ಪೋಷಕರ ಖಾತೆಗೆ ಜಮೆ ಆದ ಹಣವನ್ನು ಎಷ್ಟು ಜನ ಪೋಷಕರು ಮಕ್ಕಳ ಪೌಷ್ಠಿಕ ಆಹಾರಕ್ಕಾಗಿ ಬಳಸುತ್ತಾರೆ? ಹೀಗಾದರೆ ಮಕ್ಕಳು ಪೌಷ್ಠಿಕ ಆಹಾರದಿಂದ ವಂಚಿತರಾಗುವುದು ಖಚಿತ ಎಂದು ಅವರು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 10000 ಮಾಡಬೇಕೆಂದು ಒತ್ತಾಯಿಸಿ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸಿ ಕಳೆದ ವರ್ಷ ಅಹೋರಾತ್ರಿ ಧರಣಿ ನಡೆಸಿ ಯಶಸ್ವಿಯಾಗಿದ್ದ ವರಲಕ್ಷ್ಮಿ ಅವರು ಕೇಂದ್ರದ ಇಬ್ಬಗೆ ನೀತಿಗಳ ಬಗ್ಗೆ, ತಳ ಸಮುದಾಯವನ್ನು ಪ್ರತಿನಿಧಿಸುವ ಬಿಸಿ ಊಟ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಆಗುತ್ತಿರುವ ಅನ್ಯಾಯದ ವಿರುದ್ಧ ಬಿರುಸಿನಿಂದ ಮಾತನಾಡಿದರು.
ದೇಶದ ಮಕ್ಕಳನ್ನು, ತಾಯಂದಿರನ್ನು ನಾವು ಉಳಿಸುತ್ತಿದ್ದೇವೆ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸದಸ್ಯರು ಬಾಯಿ ಬಿಟ್ಟರೆ ದೇಶ ಪ್ರೇಮದ ಮಾತನಾಡುತ್ತಾರೆ, ಅವರದ್ದಲ್ಲ ದೇಶಪ್ರೇಮ ನಮ್ಮದು ನಿಜವಾದ ದೇಶಪ್ರೇಮ, ತಾಯಂದಿರ ಆರೈಕೆ ಮಾಡಿ, ಮಕ್ಕಳ ಆರೈಕೆ ಮಾಡಿ ಸಧೃಡ ಭಾರತ ನಿರ್ಮಾಣ ಮಾಡುತ್ತಿರುವುದು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ದೇಶ ಸೇವೆಯಲ್ಲಿ ನಿರತರಾಗುವ ನಮ್ಮನ್ನು ಸರ್ಕಾರ ಕೀಳಾಗಿ ನೋಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪಲ್ಸ್ ಪೋಲಿಯೊ, ಚುನಾವಣೆ ಎಲ್ಲದಕ್ಕೂ ನಾವೇ ಬೇಕು
ಸರ್ಕಾರದ ಬಹುತೇಕ ಕಾರ್ಯಕ್ರಮಗಳನ್ನು ಜಾರಿ ಮಾಡಲು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕರ್ತೆಯರು ಬೇಕು, ಪಲ್ಸ್ ಪೋಲಿಯೊ ಬರುತ್ತಿದೆ, ಲಾರ್ವಾ ಸರ್ವೆ ಬರುತ್ತಿದೆ, ಚುನಾವಣೆಗಳು ಹತ್ತಿರವಿವೆ ಈ ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಕೈ ಕೆಳಗೆ ದುಡಿಯಲು ನಾವು ಬೇಕು, ಆದರೆ ನಮಗೆ ಸಾಮಾನ್ಯ ನೌಕರರ ಸ್ಥಾನವನ್ನೂ ನೀವು ನೀಡಿಲ್ಲ, ಇದು ನ್ಯಾಯವೇ ಎಂದು ಆವೇಶದಿಂದ ಪ್ರಶ್ನಿಸಿದರು.
ಕನಿಷ್ಠ ಗೌರವ ನೀಡಿ
ಉಳ್ಳವರು ಒಂದು ಮಗುವನ್ನು ಸಾಕಲಾರದೆ ಆಯಾಗಳನ್ನು ನೇಮಿಸಿಕೊಳ್ಳುತ್ತಾರೆ, ಆದರೆ ನಾವು ಅಂಗನವಾಡಿ ಕಾರ್ಯಕರ್ತೆಯರು ಒಟ್ಟಿಗೆ 20-30 ಮಕ್ಕಳ ಆರೈಕೆ ಮಾಡುತ್ತಾರೆ, ಅವರ ಮಲ-ಮೂತ್ರ ಸ್ವಚ್ಛಗೊಳಿಸುತ್ತೇವೆ, ಬಾಣಂತಿಯರು, ಗರ್ಭಿಣಿಯರ ಮನೆ ಬಾಗಿಲಿಗೆ ಬಿಸಿಲಲ್ಲಿ ಅಲೆದು ಅವರ ಆರೋಗ್ಯ ಕಾಪಾಡುತ್ತೇವೆ. ಸಚಿವರ ಮನೆ ನಾಯಿಯ ತಿಂಗಳ ಖರ್ಚಿಗಿಂತಲೂ ಕಡಿಮೆ ಸಂಬಳವನ್ನು ಸರ್ಕಾರ ನಮಗೆ ಕೊಡುತ್ತದೆ. ನಿಮ್ಮ ಮನೆ ನಾಯಿಗಿಂತಲೂ ಕೀಳಾ ನಾವು? ಎಂದು ಅವರು ದಯನೀಯತೆಯಿಂದ ಕೇಳಿದರು.
ಶ್ರೀಮಂತರ ವಿಕಾಸವಷ್ಟೇನಾ?
ಕೇಂದ್ರ ಸರ್ಕಾರ 'ಸಬ್ ಕಾ ಸಾತ್, ಸಬ್ ಕಾ ವಿಕಾಸ್' ಆದರೆ ಆ ವಿಕಾಸದಲ್ಲಿ ನಾವಿಲ್ಲವಾ, ಅಂಗನವಾಡಿಗೆ ಬಡವರ ಮಕ್ಕಳು ಬರುತ್ತಾರೆ, ಶ್ರೀಮಂತರ ಮಕ್ಕಳಲ್ಲ, ಕಾರ್ಯಕರ್ತೆಯರಾಗಿ ದುಡಿಯುವುದು ಬಡ ಹೆಣ್ಣು ಮಕ್ಕಳು ಆದರೆ ಕೇಂದ್ರದ ನಿರ್ಣಯದಿಂದ ಬಡವರು ಇನ್ನಷ್ಟು ಬಡವರು, ಆರೋಗ್ಯ ಹೀನರಾಗುತ್ತಿದ್ದಾರೆ, ಕೇಂದ್ರ ಹೇಳುತ್ತಿರುವ ವಿಕಾಸ ಕೇವಲ ಶ್ರೀಮಂತರಿಗೆ ಮಾತ್ರ ಎನಿಸುತ್ತಿದೆ ಎಂದು ಅವರು ಬೇಸರದಿಂದ ನುಡಿದರು.
ಮೇನಕಾ ಗಾಂಧಿ ಸುಳ್ಳು ಹೇಳುತ್ತಿದ್ದಾರೆ
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಸಂಸತ್ನಲ್ಲಿ ನೀಡಿದ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಸ್. ವರಲಕ್ಷ್ಮಿ ಅವರು, ಮೇನಕಾ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರನ್ನು 'ಅವರು ಕೇವಲ ನೌಕರರಷ್ಟೆ' ಎಂದಿದ್ದಾರೆ, ಅವರ ಸಂಬಳ ಹೆಚ್ಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ, ಅದು ಅಪ್ಪಟ ಸುಳ್ಳು, ಹಲವು ಸಮಿತಿಗಳು ಕೆಳ ದರ್ಜೆ ನೌಕರರ ಸಂಬಳ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ ಎಂದು ಅವರು ಹೇಳಿದರು.