ಚುನಾವಣೆ ಮುಗಿಯುವುದಕ್ಕೆ ಕಾಯುತ್ತಿರುವ ಅನಂತಮೂರ್ತಿ
ಬೆಂಗಳೂರು, ಮಾರ್ಚ್ 22-ಒಟ್ಟಿನಲ್ಲಿ ಚುನಾವಣೆ ಯಾರುಯಾರಿಗೆ ಏನೆಲ್ಲಾ ಸಂಕಷ್ಟ ತಂದೊಡ್ಡುತ್ತದೆ ನೋಡಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಅವರು ಪ್ರಸಕ್ತ ಲೋಕಸಭಾ ಚುನಾವಣೆ ಮುಗಿಯಲಿ ಎಂದು ಕೈಮುಗಿದು ಕುಳಿತಿದ್ದಾರೆ. ಯಾಕಪ್ಪಾ ಹೀಗೆ ಎಂದು ಪರಾಮರ್ಶಿಸಿದಾಗ...
ಇತ್ತೀಚೆಗೆ ಅನಾರೋಗ್ಯಪೀಡಿತರಾಗಿದ್ದ ಹಿರಿಯ ಸಾಹಿತಿ ಯುಆರ್ ಅನಂತಮೂರ್ತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಕ್ಕಾಗಿ ಸುಮಾರು 11 ಲಕ್ಷ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಅಷ್ಟೊಂದು ದೊಡ್ಡ ಮೊತ್ತವನ್ನು ತಾವು ಭರ್ತಿ ಮಾಡಲು ಅಸಾಧ್ಯವೆಂದು ಹೇಳಿ, ಸರಕಾರದ ವತಿಯಿಂದ ಬಿಲ್ ಪಾವತಿ ಮಾಡುವಂತೆ ಅನಂತಮೂರ್ತಿ ಕುಟುಂಬವು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಅಂದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಇಷ್ಟೊಂದು ಭಾರಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಅನಂತಮೂರ್ತಿ ಅವರ ಕುಟುಂಬವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮೊರೆಯಿಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರಂತೂ ತಕ್ಷಣ ಬಿಲ್ ಪಾಸ್ ಮಾಡಲು ಮುಂದಾಗಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತೆ ಅವರ ಕೈಕಟ್ಟಿಹಾಕಿದೆ. ಇದು ಚುನಾವಣೆ ಕಾಲ. ಹಾಗೆಲ್ಲಾ ಹಣ ಬಿಡುಗಡೆ ಮಾಡುವಂತಿಲ್ಲ ಎಂದು ಅಧಿಕಾರಿಗಳು ಸಿದ್ದರಾಮಯ್ಯನವರಿಗೆ ತಿಳಿಯ ಹೇಳಿದ್ದಾರೆ.
ಅಸಹಾಯಕರಾದ ಸಿದ್ದರಾಮಯ್ಯ ಅವರು ಹಿರಿಯ ಸಾಹಿತಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲೇಬೇಕೆಂದು ತಕ್ಷಣವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ತುರ್ತಾಗಿ/ ವಿಶೇಷ ಸಂದರ್ಭವೆಂದು ಪರಿಗಣಿಸಿ ಹಣ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ಪತ್ರ ಬರೆದಿದ್ದಾರೆ. ಆ ಕಡೆಯಿಂದ ಇನ್ನಷ್ಟೇ ಉತ್ತರ ಬರಬೇಕಿದೆ.
ಸಾಮಾನ್ಯವಾಗಿ ಬಿಪಿಎಲ್/ ಅಂತ್ಯೋದಯ ಕಾರ್ಡುದಾರರು ಮುಂತಾದ ಬಡವರಿಗೆ ಆದ್ಯತೆಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆಂದು ಹಣ ಬಿಡುಗಡೆ ಮಾಡಲಾಗುತ್ತದೆ. ಇಂತಹ ಯೋಜನೆಯ ಪ್ರಯೋಜನ ಪಡೆಯಲು ಮುಖ್ಯಮಂತ್ರಿಗಳ ಕಚೇರಿಗೆ ದಿನಂಪ್ರತಿ ನೂರಾರು ಅರ್ಜಿಗಳು ಬರುತ್ತವೆ. ಆದರೆ ಮಾರ್ಚ್ 5ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಅರ್ಹರಿಗೂ ಚೆಕ್ ವಿತರಿಸಲು ಸಿಎಂ ಕಚೇರಿಗೆ ಸಾಧ್ಯವಾಗುತ್ತಿಲ್ಲ.
'ಆದರೆ ಸಾಹಿತಿ ಯುಆರ್ ಅನಂತಮೂರ್ತಿ ಅವರ ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆ ಮತ್ತು ತರ್ತು ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ನಾವು ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದೇವೆ. ಅನಂತಮೂರ್ತಿಗಳು ಈ ನಾಡಿನ ದೊಡ್ಡ ಸಾಹಿತಿ/ ಆಸ್ತಿ' ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications