"ಬೆಂಗಳೂರಿಗೆ ಮುಂಬೈ ರೀತಿ ಸಬ್ ಅರ್ಬನ್ ರೈಲು ಬೇಕು"
ಬೆಂಗಳೂರು, ಜೂ.20: ಬೆಂಗಳೂರು ನಗರದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯಿದೆ. ಮೆಟ್ರೋ ರೈಲು ಸಂಚಾರದ ಒಂದು ಮತ್ತು 2ನೇ ಹಂತದ ಕಾಮಗಾರಿಗಳು ಮುಗಿದಿವೆ. ಆದರೆ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕಾಗಿ ಮುಂಬೈ ಮಾದರಿಯಲ್ಲಿ ಸ್ಥಳೀಯ ರೈಲುಗಳ ಅಗತ್ಯವಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಸಂಚಾರ ವ್ಯವಸ್ಥೆ ಸಮಸ್ಯೆ ನಿವಾರಣೆಗೆ ಸ್ಥಳೀಯ ರೈಲು ಸಂಚಾರ ವ್ಯವಸ್ಥೆಗೆ ಕೇಂದ್ರ ಸರ್ಕಾರ ಸ್ಪಂದಿಸಿ ಸಹಕರಿಸಬೇಕು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಒತ್ತಾಯಿಸಿದರು.
ಬೆಂಗಳೂರು ನಗರದ ನೂತನ ರೈಲ್ವೆ ಸ್ಟೇಷನ್ ಕಟ್ಟಡದ ಮತ್ತೊಂದು ಪ್ರವೇಶ ವಿಭಾಗ, ಕೆ.ಆರ್.ಪುರಂ ರೈಲು ನಿಲ್ದಾಣ ನೂತನ ಕಟ್ಟಡ, ಹುಬ್ಬಳ್ಳಿಯಲ್ಲಿ ಸಿಬ್ಬಂದಿಯ ವಸತಿ ಗೃಹ ಹಾಗೂ ಕೊಪ್ಪಳ, ಆಲಮಟ್ಟಿ , ಆಳ್ನಾವರ ಪಾದಚಾರಿ ಮೇಲ್ಸೇತುವೆಗಳ ಉದ್ಘಾಟನಾ ಸಮಾರಂಭದಲ್ಲಿ ಅನಂತ್ ಕುಮಾರ್ ಮಾತನಾಡಿದರು.
ಸಬ್ ಅರ್ಬನ್ ಯೋಜನೆಗೆ 1759 ಕೋಟಿ ರೂ.ಗಳ ಅಗತ್ಯವಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜ್ಯದ ಪಾಲು ಶೇ.50ರಷ್ಟನ್ನು ಮಂಜೂರು ಮಾಡಿದ್ದಾರೆ. ಕೇಂದ್ರದ ನೆರವು ಸಿಕ್ಕರೆ ಬೆಂಗಳೂರಿನಲ್ಲಿ ಮೆಟ್ರೋ ಜೊತೆಗೆ ಲೋಕಲ್ ಟ್ರೈನ್ ಕೂಡಾ ಸಂಚರಿಸಬಹುದು ಎಂದರು.
ಲೋಕಲ್ ಟ್ರೈನ್ : ಇದಕ್ಕಾಗಿ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ರೈಲುಗಳ ಘೋಷಣೆ ಇಲ್ಲದೆ ಹಳೆ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಶಕಗಳ ಬೇಡಿಕೆಯಾಗಿರುವ ಬೆಂಗಳೂರು ಲೋಕಲ್ ಟ್ರೈನ್ ವ್ಯವಸ್ಥೆಯನ್ನು ಮಂಜೂರು ಮಾಡಬೇಕು ಎಂದರು.












Click it and Unblock the Notifications