ವಿಜಯದ ಸಂಕೇತ ತೋರಿಸಿದ ಅಮೂಲ್ಯ ಲಿಯೋನಾ
ಬೆಂಗಳೂರು, ಫೆಬ್ರವರಿ 21: ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಅಮೂಲ್ಯ ಲಿಯೋನಾ ಜೈಲಿಗೆ ಕರೆದೊಯ್ಯುವ ವೇಳೆ ವಿಜಯದ ಸಂಕೇತ ತೋರಿಸಿದ್ದಾಳೆ.
ಅಮೂಲ್ಯ ವಿರುದ್ಧ ಉಪ್ಪಾರಪೇಟೆ ಠಾಣೆ ಪೊಲೀಸರು ಆಕೆಯ ಹೇಳಿಕೆಯ ವಿಡಿಯೋ ಆಧಾರದಲ್ಲಿ ಸ್ವಯಂ ಪ್ರೇರಿತರಾಗಿ ಎಫ್ಐಆರ್ ದಾಖಲಿಸಿದ್ದರು. ಆಕೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ಐದನೇ ಎಸಿಎಂಎಂ ನ್ಯಾಯಾಲಯ ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯಾಯಾಂಗ ಬಂಧನಕ್ಕೆ ಒಳಗಾದ ಅಮೂಲ್ಯಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ವೇಳೆ ವಿಜಯದ ಸಂಕೇತವನ್ನು ತೋರಿಸಿದ್ದಾಳೆ. ಅಮೂಲ್ಯಳನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾಳೆ ಎಂದೆನಿಸುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಹೇಳಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯ ಕಾರ್ಯಕ್ರಮ ಆಯೋಜಿಸಿದ್ದ ಹಾಗೂ ಅಮೂಲ್ಯ ಲಿಯೋನಾಗೆ ಭಾಷಣ ಮಾಡಲು ಅವಕಾಶ ಕಲ್ಪಿಸಿದ್ದಕ್ಕೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಅನೇಕರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಅಮೂಲ್ಯ ಅವರು ಏಕೆ ಈ ರೀತಿ ಮಾತನಾಡಿದ್ದಾರೆಂದು ಗೊತ್ತಾಗುತ್ತಿಲ್ಲ. ಒಳ್ಳೆ ರೀತಿಯಲ್ಲಿ ಶಾಂತಿಯುತವಾಗಿ ಸಾವಿರಾರು ಸಂಖ್ಯೆಯ ಜನರಿಂದ ಪ್ರತಿಭಟನೆ ನಡೆಯುತ್ತಿತ್ತು. ಯಾವುದೇ ಕಾನೂನನ್ನು ಉಲ್ಲಂಘನೆ ಮಾಡದೆ, ಸಿಎಎ ಮತ್ತು ಎನ್ಆರ್ಸಿ ಹೇಗೆ ಸಂವಿಧಾನ ವಿರೋಧಿಗಳಾಗಿವೆ ಎಂದು ಹೋರಾಟ ಮಾಡುತ್ತಿದ್ದೆವು. ನಾನಂತೂ ಅಮೂಲ್ಯಗೆ ಆಹ್ವಾನ ನೀಡಿಲ್ಲ. ಆಕೆ ಮಾತಿಗೆ ನಿಂತಿದ್ದು ನನಗೇ ತಿಳಿದಿರಲಿಲ್ಲ. ಆಕೆ ಪರಿಚಯವಿರುವ ಯುವತಿ. ಈ ಘಟನೆ ಬಗ್ಗೆ ನಾನೇ ದೂರು ನೀಡಿದ್ದೇನೆ. ಇದರ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಅಥವಾ ಆಕೆಯೇ ಹೀಗೆ ಮಾಡಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಇಮ್ರಾನ್ ಪಾಷಾ ತಿಳಿಸಿದ್ದಾರೆ.












Click it and Unblock the Notifications