ಪೊಲೀಸ್ ವಿರೋಧಿಯಾದ KSP (DP) ನಿಯಮ ತಿದ್ದುಪಡಿ: ಹಕ್ಕುಗಳಿಗೆ ಕಡಿವಾಣ!
ಬೆಂಗಳೂರು, ಸೆಪ್ಟೆಂಬರ್ 19: ಪೊಲೀಸ್ ಇಲಾಖೆಯಲ್ಲಿ ಸರ್ವಾಧಿಕಾರಿ ಧೋರಣೆ ತರಲು ಇಲಾಖೆ ಮುಂದಾಗಿದೆ. ಇದೇ 07-09-2022 ರಂದು ಗೃಹ ಇಲಾಖೆ ಅಧೀನ ಕಾರ್ಯದರ್ಶಿಗಳು KSP (DP) ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ KSP(DP)Ammendment Rules 2022 draft ರೂಲ್ಸ್ ಅನ್ನು ಕರ್ನಾಟಕ ರಾಜ್ಯಪತ್ರ ದಲ್ಲಿ ಪ್ರಕಟಿಸಿದೆ. ಇದಕ್ಕೆ ಕೇವಲ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.
ರಾತ್ರಿ-ಹಗಲು, ಬಿಸಿಲು-ಮಳೆ ಅಂತ ನೋಡದೆ ಮನೆ ಮಠ ಬಿಟ್ಟು ಕೆಲಸ ಮಾಡುವ ಇಲಾಖೆ ಅಂದರೆ ಅದು ಪೊಲೀಸ್ ಇಲಾಖೆ. ಸರ್ಕಾರ ಪೊಲೀಸ್ ಇಲಾಖೆಯನ್ನ ಅದೆಷ್ಟು ನಿಕೃಷ್ಟವಾಗಿ ನಡೆಸಿಕೊಂಡಿದೆ ಅಂದರೆ ಅದನ್ನ ಹೇಳ ತೀರದು. ಔರಾದ್ಕರ್ ವರದಿ ಜಾರಿ ಮಾಡುವಲ್ಲಿ ಸರ್ಕಾರಗಳು ಅವರಿಗೆ ಮಾಡಿದ ವಂಚನೆಯನ್ನು ಪೊಲೀಸರು ಇನ್ನು ಮರೆತಿಲ್ಲ. ಕ್ವಾಟರ್ಸ್ ವಿಚಾರದಲ್ಲೂ ಮಾಡುತ್ತಿರುವ ತಾರತಮ್ಯ ಇನ್ನು ತಪ್ಪಿಲ್ಲ. ಈ ಮದ್ಯೆ ಇಲಾಖೆಯಲ್ಲಿ ಕಾನ್ಸ್ಟೇಬಲ್ ನಿಂದ ಹಿಡಿದು ಎಸಿಪಿವರೆಗೂ ಪೊಲೀಸರ ಧನಿಯನ್ನ ದಮನ ಮಾಡುವತ್ತ ಇಲಾಖೆ ಕುರುಡು ಹೆಜ್ಜೆ ಇರಿಸಿದೆ.
ಇಷ್ಟಕ್ಕೂ ಈ ತಿದ್ದುಪಡಿ ಏನೂ ಅಂತ ನೋಡುವುದಾದರೆ. ಸಂಪೂರ್ಣವಾಗಿ ಪೊಲೀಸರ ಧ್ವನಿ ಅಡಗಿಸೋದು ಅಂದರೆ ತಪ್ಪಾಗಲ್ಲ. ಯಾಕೆಂದರೆ ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಹಿರಿಯ ಅಧಿಕಾರಿಗಳು ಕಿರಿಯ ಪೊಲೀಸರ ಮೇಲೆ ರೂಲ್ 7 ಅಥವಾ ಇನ್ನಿತರ ಶಿಸ್ತುಕ್ರಮಕ್ಕೆ ಮುಂದಾದರೆ ಅದನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಈ ಹಿಂದೆ ಯಾವುದೇ ಶಿಸ್ತು ಕ್ರಮಗಳನ್ನು ಪ್ರಶ್ನಿಸಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅಥವಾ ಕೋರ್ಟ್ ಮೊರೆಹೋಗಬಹುದಿತ್ತು. ಆದರೆ ಹೊಸ ತಿದ್ದು ಪಡಿಯಲ್ಲಿ ಅದಕ್ಕೆ ಕೊಕ್ಕೆ ಹಾಕಲಾಗಿದೆ.
ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ದ
ಪೊಲೀಸ್ ಇಲಾಖೆಯಲ್ಲಿ ತನ್ನ ಅಧಿಕಾರಿಗಳು, ಸಿಬ್ಬಂದಿ ತಮ್ಮ ಇನ್ಕ್ರಿಮೆಂಟ್ ಮತ್ತು ಪ್ರಮೋಷನ್ ತಡೆ ಹಿಡಿದರೂ ಸಹ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇದು ನೈಸರ್ಗಿಕ ನ್ಯಾಯ ತತ್ವದ ನಿಯಮಗಳಿಗೆ ವಿರುದ್ಧವಾದ ಕ್ರೂರ ಮತ್ತು ಕಠಿಣ ಕ್ರಮವಾಗಿದ್ದು ವ್ಯಕ್ತಿಯ ಮೂಲಭೂತ ಹಕ್ಕನ್ನೆ ಕಸಿದುಕೊಂಡಂತಾಗುತ್ತದೆ.
ನ್ಯಾಯಾಲಯಕ್ಕೂ ಹೋಗದಂತ ತಿದ್ದುಪಡಿ
ಪೊಲೀಸ್ ಅಧಿಕಾರಿಗಳು ಕಿರಿಯ ಅಧಿಕಾರಿಗಳ ವಿರುದ್ದ ಪೂರ್ವಗ್ರಹ ಪೀಡಿತರಾಗಿ ಯಾರದೋ ಮಾತನ್ನು ಕೇಳಿ, ಹಳೆಯ ದ್ವೇಷದಿಂದ ಅಥವಾ ಮನಸಿಗೆ ಬಂದ ಹಾಗೆ ದಂಡನೆಗಳನ್ನ ವಿಧಿಸುವ ಪ್ರಮೇಯ ಉಂಟಾಗಬಹುದು. ಅಲ್ಲದೇ ಅಂತಹ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ಸಹ ಆಪಾಧಿತರಿಗೆ ಅವಕಾಶ ನೀಡದೇ ಇರುವುದು ಶೋಚನೀಯ ಸಂಗತಿಯಾಗಿದೆ .
ನ್ಯಾಯಕ್ಕೆ ಮೇಲಾಧಿಕಾರಿಗಳ ಬಳಿ ಹೋಗುವಂತಿಲ್ಲ
ಶಿಸ್ತು ಪ್ರಾಧಿಕಾರಗಳು ಕೆಲವೊಮ್ಮೆ ತಮ್ಮ ಅಧಿಕಾರ ಚಲಾವಣೆ ಮಾಡುವಾಗ ತಮ್ಮ ವಿವೇಚನೆ ಬಳಸದೇ ಅನಿಯಂತ್ರಿತ ಮತ್ತು ನಿರಂಕುಶ ಆದೇಶಗಳನ್ನು ಮಾಡುತ್ತಿದೆ. ಆದೇಶದ ಮೇಲೆ ತೊಂದರೆಗೀಡಾದ ಅಧಿಕಾರಿ ಸಿಬ್ಬಂದಿ ಇಲಾಖಾ ಮೇಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ತಮ್ಮ ಕುಂದು ಕೊರತೆ ಮತ್ತು ತಮ್ಮ ಪರವಾದ ವಾದವನ್ನು ಮಂಡಿಸಲು ಅವಕಾಶವಿತ್ತು. ಈ ತಿದ್ದು ಪಡಿಯಲ್ಲಿ ಈ ನಿಯಮ ಇಲ್ಲದಿರುವುದು ಪೊಲೀಸರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ.
ಗೃಹಸಚಿವರು ತಡೆಯುತ್ತಾರಾ ತಿದ್ದುಪಡಿ ಕಾಯ್ದೆ?
ಇನ್ನು ಸರ್ಕಾರ ಯಾವೂದೇ ಪತ್ರವ್ಯವಹಾರವನ್ನ ಕನ್ನಡದಲ್ಲೇ ಹೊರಡಿಸಬೇಕು ಅನ್ನೋ ನಿಯಮವಿದ್ದರು. ಸರ್ಕಾರ ಮಾತ್ರ ಇಂಗ್ಲೀಷ್ ನಲ್ಲಿ ಹೊಸ ನಿಯಮದ ಆದೇಶವನ್ನ ಹೊರಡಿಸಿದೆ. ಸದ್ಯ ಪೊಲೀಸರ ಪರಾಗಿರೋ ಗೃಹಮಂತ್ರಿಗಳು ಈ ತಿದ್ದುಪಡಿ ಕುರಿತು ಕುಲಂಕಷವಾಗಿ ಪರಿಶೀಲಿಸಬೇಕು ಲಕ್ಷಾಂತರ ಪೊಲೀಸರಿಗೆ ಮಾರಕವಾಗಿರೋ ಈ ತಿದ್ದುಪಡಿ ವಾಪಸ್ ಪಡೆಯಬೇಕು ಎನ್ನುವುದು ಪೊಲೀಸರ ಆಗ್ರಹವಾಗಿದೆ.