ಅಂಬೇಡ್ಕರ್ ಮೊಮ್ಮಗ- ಎಚ್ ಡಿಡಿ ಭೇಟಿ, ಬಿಜೆಪಿ ವಿರುದ್ಧ ವಾಗ್ದಾಳಿ
ಬೆಂಗಳೂರು, ನವೆಂಬರ್ 24: ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಧರ್ಮ ರಾಜಕಾರಣವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ದೇಶವು ಈಗ ಅಪಾಯದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಂಸದ ಹಾಗೂ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಯಶ್ವಂತ್ ಶುಕ್ರವಾರ ಅಭಿಪ್ರಾಯ ಪಟ್ಟರು.
ಇಲ್ಲಿನ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಶಾಸಕ ಮಧು ಬಂಗಾರಪ್ಪ ಕೂಡ ಇದ್ದರು. ಈ ಭೇಟಿಯ ನಂತರ ಸುದ್ದಿಗೋಷ್ಠಿ ನಡೆಯಿತು.
ದೇವೇಗೌಡರು ಮಾತನಾಡಿ, ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜನ್ಮದಿನದ ಕಾರ್ಯಕ್ರಮಕ್ಕಾಗಿ ಪ್ರಕಾಶ್ ಯಶ್ವಂತ್ ಅವರು ಬಂದಿದ್ದರು. ಇದೇ ವೇಳೆ ಕುಮಾರಸ್ವಾಮಿ ಅವರ ಆರೋಗ್ಯ ಕೂಡ ವಿಚಾರಿಸಿದರು. ನಮ್ಮ ಭೇಟಿಗೆ ರಾಜಕೀಯ ಉದ್ದೇಶಗಳಿರಲಿಲ್ಲ ಎಂದು ಅವರು ಹೇಳಿದರು.

ಪ್ರಕಾಶ್ ಯಶ್ವಂತ್ ಅಂಬೇಡ್ಕರ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಿಂತ ಕೆಟ್ಟ ಆಡಳಿತ ನೀಡುತ್ತಿದೆ ಎನ್ ಡಿಎ. ಮೂರು ವರ್ಷದ ಹಿಂದೆ ಆರ್ಥಿಕ ಸ್ಥಿತಿಗಿಂತ ಈಗಿನ ಪರಿಸ್ಥಿತಿ ಕೆಟ್ಟದಾಗಿದೆ. ಈಗ ಪ್ರಾದೇಶಿಕ ಪಕ್ಷಗಳಿಗಿಂತ ಕೆಟ್ಟ ಕೆಳ ಮಟ್ಟದಲ್ಲಿದೆ ಕಾಂಗ್ರೆಸ್ ನ ಸ್ಥಿತಿ. ರಾಷ್ಟ್ರೀಯ ಪಕ್ಷ ಅಂತ ಇರುವುದು ಬಿಜೆಪಿ ಮಾತ್ರ ಎಂದರು.
ಈ ಸಲ ಗುಜರಾತ್ ನ ವಿಧಾನಸಭಾ ಚುನಾವಣೆ ಬಿಜೆಪಿಗೆ ಸಲೀಸಲ್ಲ. ಅಲ್ಲಿನ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ಕೈಮರದಂತೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications