Alok Mohan: ಕರ್ನಾಟಕ ಡಿಜಿ ಐಜಿಪಿಯಾಗಿ ಅಲೋಕ್ ಮೋಹನ್ ನೇಮಕ
ಬೆಂಗಳೂರು, ಮೇ 20: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ (Dg IGP) ಡಾ. ಅಲೋಕ್ ಮೋಹನ್ ನೇಮಕಗೊಂಡಿದ್ದಾರೆ. ಪೊಲೀಸ್ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಿದ ಬಳಿಕ, ಸ್ಥಾನ ನೆರವಾಗಿತ್ತು. ಈಗ ಆ ಜಾಗಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿಯಾಗಿದ್ದ ಅಲೋಕ್ ಮೋಹನ್ ಅವರನ್ನು ನೇಮಿಸಲಾಗಿದೆ.

ಅಲೋಕ್ ಮೋಹನ್ 1987ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. 36 ವರ್ಷಗಳ ಕಾಲ ಇಲಾಖೆಯ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2025ರ ಏಪ್ರಿಲ್ನಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.ಸೇವೆಯ ಹಿರಿತನದ ಆಧಾರದ ಮೇಲೆ ಅವರು ಈ ಉನ್ನತ ಹುದ್ದೆಗೆ ಮೊದಲ ಆಯ್ಕೆಯಾಗಿದ್ದರು.
ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ
ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರಾಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಪ್ರವೀಣ್ ಸೂದ್ ಐಐಟಿ ದೆಹಲಿಯಲ್ಲಿ ಪದವಿ ಪಡೆದವರು, 1986ರಲ್ಲಿ ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಅವರು, . 1989 ರಲ್ಲಿ ಮೈಸೂರು ಪೊಲೀಸ್ ಅಧೀಕ್ಷಕರಾಗಿ ನೇಮಕವಾದರು. ನಂತರ ಬೆಂಗಳೂರು ನಗರಕ್ಕೆ ಕಾನೂನು ಮತ್ತು ಸುವ್ಯವಸ್ಥೆ, ಉಪ ಪೊಲೀಸ್ ಆಯುಕ್ತರಾಗಿ, ಬಳ್ಳಾರಿ ಮತ್ತು ರಾಯಚೂರು ಪೊಲೀಸ್ ಅಧೀಕ್ಷಕರಾಗಿ, ಮಾರಿಷಸ್ ಸರ್ಕಾರದ ಪೊಲೀಸ್ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಅಡ್ವೊಕೇಟ್ ಜನರಲ್ ಆಗಿ ಶಶಿಕಿರಣ ಶೆಟ್ಟಿ ನೇಮಕ
ಇನ್ನು ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ಹೈಕೋರ್ಟ್ ಹಿರಿಯ ವಕೀಲರಾದ ಶಶಿಕಿರಣ ಶೆಟ್ಟಿಯವರನ್ನು ಅವರನ್ನು ನೇಮಕ ಮಾಡಲಾಗಿದೆ. ಶಶಿಕಿರಣ ಶೆಟ್ಟಿ ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಪುತ್ರರಾಗಿದ್ದು, ಶಾಸಕರ ಅನರ್ಹತೆ ಸೇರಿದಂತೆ ಹಲವು ಪ್ರಕರಣಗಳನ್ನು ನಿರ್ವಹಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿ ಮುಗಿದ ನಂತರ ಅಡ್ವೊಕೇಟ್ ಜನರಲ್ ಆಗಿದ್ದ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಶಶಿಕಿರಣ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.












Click it and Unblock the Notifications