ಶುಕ್ರವಾರ ಬೆಂಗಳೂರಲ್ಲಿ ವಾಹನ ನಿಷೇಧ ಎಲ್ಲೆಲ್ಲಿ?
ಬೆಂಗಳೂರು, ಮೇ 15: ಲೋಕಸಭಾ ಮತ ಏಣಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೇ.16ರಂದು ನಿಷೇದಾಜ್ಞೆ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.
ಮತ ಎಣಿಕೆ ಹಿನ್ನಲೆಯಲ್ಲಿ ಮೇ 16 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 12ಗಂಟೆ ವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ವಿಜಯೋತ್ಸವ ಮೆರವಣಿಗೆ ನಿಷೇಧ ಹೇರಲಾಗಿದೆ.
ಮತ ಎಣಿಕೆಯನ್ನು ಶಾಂತಿಯುತವಾಗಿ, ಸುವ್ಯವಸ್ಥಿವಾಗಿ ಹಾಗೂ ಸುಗಮವಾಗಿ ನಡೆಸುವ ಸಲುವಾಗಿ ಅಬಕಾರಿ ಕಾಯಿದೆಯನ್ವಯ ಮೇ.15ರ ಮಧ್ಯರಾತ್ರಿ 12 ಗಂಟೆಯಿಂದ ಮೇ. 16 ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಲಾಗಿದೆ.[ಲೋಕಸಭಾ ಮತ ಎಣಿಕೆ: ಮದ್ಯ ಮಾರಾಟ ನಿಷೇಧ]
ಕೆ.ಆರ್. ವೃತ್ತದಲ್ಲಿರುವ ಹೋಂ ಸೈನ್ಸ್ ಕಾಲೇಜ್, ಬಸವೇಶ್ವರ ವೃತ್ತದಲ್ಲಿರುವ ಆರ್.ಸಿ. ಕಾಲೇಜ್ ಹಾಗೂ ಜಯನಗರದ ಎಸ್.ಎಸ್.ಎಂ.ಆರ್.ವಿ. ಕಾಲೇಜ್ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮತ ಕೇಂದ್ರದೊಳಗೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ ಎಂದು ತಿಳಿಸಿದರು.

ಮತ ಎಣಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ.
ಪ್ಯಾಲೇಸ್ ರಸ್ತೆ : ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣಾ ಜಂಕ್ಷನ್ನಿಂದ ಮಹಾರಾಣಿ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ರಾಜಭವನ ರಸ್ತೆ: ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಯಾವುದೇ ವಾಹನಗಳನ್ನು ನಿಲ್ಲಿಸಬಾರದು.
ಮಿಲ್ಲರ್ ರಸ್ತೆ : ಎಲ್ಆರ್ಡಿಇ ಜಂಕ್ಷನ್ನಿಂದ ಬಸವೇಶ್ವರ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ದೇವರಾಜ ಅರಸ್ ರಸ್ತೆ : ಬಸವೇಶ್ವರ ವೃತ್ತದಿಂದ ಎ.ಜಿ.ಎಸ್. ಜಂಕ್ಷನ್ವರೆಗೆ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ.
ರೇಸ್ಕೋರ್ಸ್ ರಸ್ತೆ : ಟ್ರಿಲೈಟ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆಯ ಉತ್ತರ ಭಾಗಕ್ಕೆ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಅಧಿಕಾರಿಗಳು ಇಲ್ಲಿ ವಾಹನ ನಿಲ್ಲಿಸಬಹುದು:
ಮತ ಎಣಿಕೆ ಕಾರ್ಯಕ್ಕೆ ಹಾಜರಾಗುವ ಅಧಿಕಾರಿ/ ಸಿಬ್ಬಂದಿಗಳ ವಾಹನಗಳ ನಿಲುಗಡೆಯನ್ನು ರೇಸ್ಕೋರ್ಸ್ ರಸ್ತೆಯಲ್ಲಿ ಖನಿಜ ಭವನ ಮುಂಭಾಗದಿಂದ ಮೌರ್ಯ ಜಂಕ್ಷನ್ವರೆಗೆ ರಸ್ತೆಯ ದಕ್ಷಿಣಕ್ಕೆ ನಿಲುಗಡೆ ಮಾಡಬಹುದು.ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ/ಸಿಬ್ಬಂದಿಗಳ ವಾಹನಗಳನ್ನು ಹೈಗ್ರೌಂಡ್ಸ್ ಸಂಚಾರ ಠಾಣೆ ಮುಂಭಾಗದಲ್ಲಿ ನಿಲುಗಡೆ ಮಾಡಬಹುದು.
ಸಾರ್ವಜನಿಕರು ಇಲ್ಲಿ ವಾಹನಗಳನ್ನು ನಿಲ್ಲಿಸಬಹುದು:
ಸಾರ್ವಜನಿಕರು/ಅಭ್ಯರ್ಥಿಗಳು/ಬೆಂಬಲಿಗರು ತಮ್ಮ ವಾಹನಗಳನ್ನು ಟಿ.ಚೌಡಯ್ಯ ರಸ್ತೆ, ಫ್ರೀಡಂಪಾರ್ಕ್, ಇಂದಿರಾಗಾಂಧಿ ಸಂಗೀತ ಕಾರಂಜಿ ಬಳಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಜಯನಗರದ ಎಸ್.ಎಸ್.ಎಂ.ಕೆ.ಆರ್.ವಿ ಕಾಲೇಜ್ನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಳ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕೆಲವೊಂದು ಮಾರ್ಪಾಡು ಮಾಡಲಾಗಿದೆ.
ಮತ ಎಣಿಕೆ ಕಾರ್ಯಕ್ಕೆ ಹಾಜರಾಗುವ ಅಧಿಕಾರಿ/ಸಿಬ್ಬಂದಿಗಳ ವಾಹನಗಳು ಹಾಗೂ ಅಭ್ಯರ್ಥಿ/ಏಜೆಂಟ್ಗಳ ವಾಹನಗಳು ಮತ್ತು ಪೊಲೀಸ್ ವಾಹನಗಳನ್ನು ಕಾಲೇಜ್ನ ಮುಂಭಾಗದ ಮೈದಾನದಲ್ಲಿ ನಿಲುಗಡೆ ಮಾಡಬಹುದು.
ಜಯನಗರ 4ನೇ ಟಿ ಬ್ಲಾಕ್ ಹತ್ತಿರ 22,23 ಮತ್ತು 26 ನೇ ಮುಖ್ಯ ರಸ್ತೆ ಹಾಗೂ 36,37 ಮತ್ತು 39 ನೇ ಅಡ್ಡ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications