ಬೆಂಗಳೂರು: ಜಾತ್ರೆಯಲ್ಲಿ ಎಲ್ಲ ಧರ್ಮಿಯರಿಗೂ ಅವಕಾಶ: ಗರುಡಾಚಾರ್
ಬೆಂಗಳೂರು, ನವೆಂಬರ್ 28: ಹಿಂದುಯೇತರ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ಅನುಮತಿ ನೀಡಬಾರದು ಎಂಬ ಆಗ್ರಹ ಸರಿಯಲ್ಲ. ಇದೇ ವಿಷಯ ಇಟ್ಟುಕೊಂಡು ಜಾತ್ರೆಯಲ್ಲಿ ಗಲಾಟೆಗೆ ಯತ್ನಿಸಿದ್ದು ಕಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಎಚ್ಚರಿಕೆ ನೀಡಿದ್ದಾರೆ.
ಜಾತ್ರೆಯ ಮುನ್ನ ದಿನ ಸೋಮವಾರ ವಿವಿ ಪುರಂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ಜಾತ್ರಾ ಪೂರ್ವ ಸಿದ್ಧತೆ ಪರಿಶೀಲಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಗಳವಾರ ಸುಬ್ರಹ್ಮಣ್ಯ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನೇ ಮುಂದುವರೆಸಲಾಗುವುದು. ಹಿಂದೂಗಳು ಅಲ್ಲದವರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎನ್ನುವುದು ಸರಿಯಲ್ಲ. ಜಾತ್ರೆಯಲ್ಲಿ ಎಲ್ಲ ಧರ್ಮೀಯರಿಗೂ ಅವಕಾಶ ನೀಡಲಾಗುವುದು ಎಂದರು.
BBMP: ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ತ್ಯಾಜ್ಯ ಸಂಗ್ರಹ ಸ್ಥಗಿತ
ಶಾಸಕರ ಮಾತಿನಂತೆ ಎಲ್ಲ ಧರ್ಮಿಯರು ವಿವಿ ಪುರಂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಭಾರಿಯು ವ್ಯಾಪಾರ ವಹಿವಾಟು ನಡೆಸಲಿದ್ದಾರೆ. ಆದರೆ ಹಿಂದೂಯೇತರ ವರ್ತಕರ ಬಹಿಷ್ಕಾರ ವಿಚಾರ ಇಟ್ಟುಕೊಂಡು ಜಾತ್ರೆಯಲ್ಲಿ ಗದ್ದಲ, ಗಲಾಟೆ ಎಬ್ಬಿಸುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಲ್ಲಾ ಧರ್ಮದ ವರ್ತಕರಿಗೆ ಅವಕಾಶ ಕೊಡಬೇಕು. ಚುನಾಯಿತ ಪ್ರತಿನಿಧಿಗಳು, ಎಲ್ಲರ ಮತ ಪಡೆದೇ ಆಯ್ಕೆಯಾಗಿರುತ್ತೇವೆ. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿ ಶಾಸಕ ಸ್ಥಾನ ಅಲಂಕರಿಸಿದ್ದೇವೆ. ಈ ಸ್ಥಾನದಲ್ಲಿದ್ದಾಗ ಜಾತಿ, ಧರ್ಮದ ಬೇಧ ಭಾವ ಮಾಡಲು ಸಾಧ್ಯವಿಲ್ಲ. ನಾವು ಎಲ್ಲರನ್ನು ಸಮಾನರಾಗೇ ನೋಡುತ್ತೇವೆ.
ಸಾಮರಸ್ಯ, ಸಹಬಾಳ್ವೆಗೆ ಶಾಸಕರ ಸಲಹೆ
ದರ್ಗಾ, ಮಸೀದಿ ಮುಂದೆ ಹಿಂದೂಗಳ ವ್ಯಾಪಾರಕ್ಕೆ ಅವಕಾಶ ನೀಡದೆ ಇರುವ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ನಾನು ಮನೆಯಲ್ಲಿ ಬ್ರಾಹ್ಮಣ, ಹೊರಗಡೆ ಬಂದಾಗ ವಿಶ್ವಮಾನವ. ಹಾಗೊಂದು ವೇಳೆ ಇಂತಹ ಘಟನೆ ನಡೆದಿದ್ದರೆ ಅದನ್ನು ಸರಿಪಡಿಸಲಾಗುತ್ತದೆ. ಸಾಮರಸ್ಯ ಸಹಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು.
ಮಂಗಳವಾರ ಬೆಂಗಳೂರಿನ ವಿವಿಪುರಂನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರೆಗೆ ಅನ್ಯ ಧರ್ಮೀಯ ವರ್ತಕರಿಗೆ ಅವಕಾಶ ನೀಡದಂತೆ ಹಿಂದೂಪರ ಸಂಘಟನೆಗಳು ಮನವಿ ಮಾಡಿದ್ದವು. ಈ ಸಂಬಂಧ ಭಜರಂಗದಳ ಸೇರಿದಂತೆ ಕೆಲವು ಹಿಂದುಪರ ಸಂಘಟನೆಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಇನ್ನು ಸೈಲೆಂಟ್ ಸುನೀಲ್ ಬಗ್ಗೆ ನನಗೆ ಗೊತ್ತಿಲ್ಲ. ಆತ ಆಯೋಜನೆ ಮಾಡಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದು ನಿಜ. ಆದರೆ ಆತ ರೌಡಿ ಹಿನ್ನೆಲೆ ಹೊಂದಿದ ಬಗ್ಗೆ ಮಾಹಿತಿ ಇರಲಿಲ್ಲ. ಕ್ಷೇತ್ರದ ಶಾಸಕನಾಗಿ ಒಳ್ಳೆಯ ಕೆಲಸಕ್ಕೆ ಕರೆದಾಗ ಇಲ್ಲ ಎನ್ನಲು ಸಾಧ್ಯವಿಲ್ಲ. ಸಾಮಾಜಿಕ ಕಳಕಳಿ ಕಾರ್ಯಕ್ರಮ ಎನ್ನುವ ಕಾರಣಕ್ಕಾಗಿ ರಕ್ತದಾನ ಶಿಬಿರಕ್ಕೆ ಹೋಗಿದ್ದೆ. ರೌಡಿ ಶೀಟರ್ ಎನ್ನುವುದು ಗೊತ್ತಿದ್ದರೆ, ಹೋಗುತ್ತಲೇ ಇರಲಿಲ್ಲ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.