ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸೇಠ್ ನೇಮಕ
ಬೆಂಗಳೂರು, ಜು.2: ನಮ್ಮ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸೇಠ್ ಸೋಮವಾರ ನೇಮಕಗೊಂಡಿದ್ದಾರೆ.
ಹೆಚ್ಚುವರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಅಜಯ್ ಸೇಠ್ ಅವರನ್ನು ಮೆಟ್ರೋ ನಿಗಮಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಮಹೇಂದ್ರ ಜೈನ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಅದಕ್ಕೂ ಮೊದಲು ಪ್ರದೀಪ್ ಸಿಂಗ್ ಖರೋಲಾ ಅವರು ನಿರ್ದೇಕರಾಗಿದ್ದರು.
ಪ್ರದೀಪ್ ಸಿಂಗ್ ಖರೋಲಾ 2013 ರಿಂದ 2017ರವರೆಗೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. 2017ರಲ್ಲಿ ಏರ್ ಇಂಡಿಯಾ ಮುಖ್ಯಸ್ಥರಾಗಿ ವರ್ಗಾವಣೆಗೊಂಡಿದ್ದರು.
ಭಾರತೀಯ ವಿಮಾನ ಪ್ರಾಧಿಕಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು, ಅದಾದ ಬಳಿಕ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರನ್ನು ನೇಮಕ ಮಾಡಿದ್ದು ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.
ಇದೀಗ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಅಜಯ್ ಸೇಠ್ ಅವರನ್ನು ನೇಮಕ ಮಾಡಲಾಗಿದೆ.
ಅವರು ಆರೋಗ್ಯ ಮತ್ತು ಕಟುಉಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ ವಲಯದಲ್ಲಿ ಇರುವ ಅಧಿಕಾರಿಗಳ ಪೈಕಿ ಅಜಯ್ ಸೇಠ್ ಕೂಡ ಒಬ್ಬರಾಗಿದ್ದರು.