ವಿಮಾನ ನಿಲ್ದಾಣಕ್ಕೆ ಹೋಗಲು ಮುಂಗಡ ಟಿಕೆಟ್ ಬುಕ್ ಮಾಡಿ
ಬೆಂಗಳೂರು, ಡಿಸೆಂಬರ್ 6: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ವಾಯು ವಜ್ರ ಬಸ್ಗಳಲ್ಲಿ ಇನ್ನು ಮುಂದೆ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಬಿಎಂಟಿಸಿ ಅವತಾರ್ ತಂತ್ರಾಶದಲ್ಲಿ ಸೀಟು ಬುಕ್ ಮಾಡುವ ಅವಕಾಶವನ್ನು ನೀಡಿದೆ.
ವಾಯು ವಜ್ರ ಬಸ್ಗಳಲ್ಲಿ ಸೀಟು ಕಾಯ್ದಿರಿಸುವ ಅವಕಾಶವನ್ನು ನೀಡಲಾಗುತ್ತದೆ ಎಂದು ಬಿಎಂಟಿಸಿ ಹಿಂದೆ ಹೇಳಿತ್ತು. ಈಗ ಅದನ್ನು ಜಾರಿಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬಸ್ಗಳಲ್ಲಿ ಹೋಗುವಾಗ ಇನ್ನು ಮುಂದೆ ಸೀಟನ್ನು ಕಾಯ್ದಿರಿಸಬಹುದು.
ಬೆಂಗಳೂರು ನಗರದ ವಿವಿಧ ಕಡೆಯಿಂದ ಕೆಐಎಲ್ಗೆ 164 ಮಾರ್ಗದಲ್ಲಿ, ವಿಮಾನ ನಿಲ್ದಾಣದಿಂದ 171 ಮಾರ್ಗದಲ್ಲಿ ಹವಾನಿಯಂತ್ರಿತ ವಾಯುವಜ್ರ ಬಸ್ಗಳು ಸಂಚಾರ ನಡೆಸುತ್ತವೆ. ಮುಂಗಡ ಸೀಟು ಬುಕ್ ಮಾಡಿದವರು ಪ್ರಯಾಣದ ಸಂದರ್ಭದಲ್ಲಿ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬೇಕು.

ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಜನರು ಒಂದೇ ಗುಂಪಿನಲ್ಲಿ ನಾಲ್ಕು ಅಥವ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದರೆ ಶೇ 5ರಷ್ಟು ರಿಯಾಯಿತಿ ದೊರೆಯಲಿದೆ. ಹೋಗುವ ಮತ್ತು ವಾಪಸ್ ಬರುವ ಟಿಕೆಟ್ಗಳನ್ನು ಒಮ್ಮೆ ಬುಕ್ ಮಾಡಿದರೆ ಶೇ 10ರಷ್ಟು ರಿಯಾಯಿತಿ ಸಿಗಲಿದೆ.
ಹೆಚ್ಎಎಲ್, ವೈಟ್ಫೀಲ್ಡ್ ಟಿಟಿಎಂಸಿ, ಕಾಡುಗೋಡಿ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಡಿಎಲ್ಎಫ್ ಅಪಾರ್ಟ್ಮೆಂಟ್ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಜನರು ವಾಯುವಜ್ರ ಬಸ್ನಲ್ಲಿ ಟಿಕೆಟ್ ಕಾಯ್ದಿರಿಸಲು ಅವಕಾಶವನ್ನು ನೀಡಲಾಗಿದೆ.
ಪ್ರಯಾಣಿಕರು ಕೆಎಸ್ಆರ್ಟಿಸಿ ಬುಕ್ಕಿಂಗ್ ಕೌಂಟರ್, ಕೆಎಸ್ಆರ್ಟಿಸಿ ವೆಬ್ ಸೈಟ್, ಕೆಎಸ್ಆರ್ಟಿಸಿ ಮೊಬೈಲ್ ಅಪ್ಲಿಕೇಶನ್, ಅಧಿಕೃತ ಏಜೆನ್ಸಿಗಳಿಗೆ ಭೇಟಿ ನೀಡುವ ಮೂಲಕವೂ ಟಿಕೆಟ್ ಬುಕ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications