ಮಾದಕವಸ್ತು ಜಾಲದಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಅಂದರ್
ಬೆಂಗಳೂರು, ಅಕ್ಟೋಬರ್ 5: ಹೊರ ರಾಜ್ಯಗಳಿಗೆ ಕೆ.ಜಿ.ಗಟ್ಟಲೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ವಿಜ್ಞಾನಿ, ಅತನ ಪತ್ನಿ, ಸಹವರ್ತಿಯನ್ನು ಬಂಧಿಸಿದ್ದ ಎನ್ಸಿಬಿ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಜಿ.ರಾಜಶೇಖರ್ ರೆಡ್ಡಿ ಎಂಬುವರನ್ನು ಸಹ ಹೈದರಾಬಾದ್ನಲ್ಲಿ ವಶಕ್ಕೆ ಪಡೆದಿದೆ.
ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಅಕ್ಟೋಬರ್ 1ರಂದು ಕಾರ್ಯಾಚರಣೆ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು, ಬೆಂಗಳೂರಿನ ಕಂಪೆನಿಯೊಂದರಲ್ಲಿ ವಿಜ್ಞಾನಿಯಾಗಿದ್ದ ವೆಂಕಟರಾಮ ರಾವ್, ಅತನ ಹೆಂಡತಿ ಹಾಗೂ ಸಹಚರ ರವಿ ಎಂಬುವರನ್ನು ಬಂಧಿಸಿ ₹ 45 ಕೋಟಿ ಮೌಲ್ಯದ ಆಂಫೆಥಮೈನ್ ವಶಪಡಿಸಿಕೊಂಡಿದ್ದರು.[45 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ: ಸಿಕ್ಕಿಬಿದ್ದವನು ವಿಜ್ಞಾನಿ!]

ವಿಚಾರಣೆ ಸಂದರ್ಭದಲ್ಲಿ ಬಂಧಿತರು ವಿಂಗ್ ಕಮಾಂಡರ್ ಜಿ.ರಾಜಶೇಖರ್ ರೆಡ್ಡಿ ಹೆಸರು ಬಾಯ್ಬಿಟ್ಟಿದ್ದರು. ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೆಡ್ಡಿ, ಈ ಮಾಹಿತಿ ಸಿಗುತ್ತಿದ್ದಂತೆಯೇ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಮಾರ್ಗ ಮಧ್ಯದಲ್ಲಿಯೇ ಅವರನ್ನು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಲಾಗಿದೆ.
ಆಂಧ್ರ ಮೂಲದ ರಾಜಶೇಖರ್ ರೆಡ್ಡಿ, ಮಾದಕ ವಸ್ತುಗಳನ್ನು ಕೇರಲ, ಚೆನ್ನೈ ಹಾಗೂ ಕರ್ನಾಟಕ ಸಾಗಲು ನೆರವು ನೀಡುತ್ತಿದ್ದುದು ಗೊತ್ತಾಗಿದೆ. ಸದ್ಯಕ್ಕೆ ವಿಚಾರಣೆ ಮುಂದುವರಿದಿದೆ. ಇನ್ನೂ ಪ್ರಮುಖರ ಬಂಧನವಾಗುವ ಸಾಧ್ಯತೆಗಳಿವೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಸರಕಿನ ಜತೆಗೆ ಹೊರಟಿದ್ದಾಗಲೇ ಹೈದರಾಬಾದ್ ನ ಮಿಯಾಪುರ್ ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದರು.[ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ: ಮಮತಾ ಕುಲಕರ್ಣಿ]
ಎಲೆಕ್ಟ್ರಾನಿಕ್ಸಿಟಿಯ ಆರೋಪಿ ವೆಂಕಟರಾಮ ರಾವ್ ಮನೆ ಮೇಲೆ ದಾಳಿ ನಡೆಸಿದಾಗ, 30 ಗ್ರಾಂ 'ಆಂಫೆಥಮೈನ್' ಹಾಗೂ ₹ 1.23 ಕೋಟಿ ನಗದು ಸಿಕ್ಕಿತು. ಅದನ್ನೆಲ್ಲ ಜಪ್ತಿ ಮಾಡಿ, ರಾವ್ ಅವರ ಪತ್ನಿಯನ್ನು ಸಹ ಬಂಧಿಸಲಾಗಿತ್ತು. ವಿಜ್ಞಾನಿ ವೆಂಕಟ ರಾಮ ರಾವ್ ಕೆಲಸ ಮಾಡುತ್ತಿದ್ದ ಕಂಪೆನಿಯ ಒಂದು ಘಟಕ ಮಿಯಾಪುರದಲ್ಲಿದೆ. ಹೀಗಾಗಿ, ಆತನಿಗೆ ಮಾದಕ ವಸ್ತು ತಯಾರಕರ ಪರಿಚಯವಿತ್ತು.
ಹಣದಾಸೆಗೆ ಈ ದಂಧೆಗೆ ಕೈಜೋಡಿಸಿದ್ದ ಅವರು, ಕ್ರಮೇಣ ತಾನೇ ಜಾಲವೊಂದನ್ನು ರೂಪಿಸಿದ್ದ. ಬಂಧಿತರು ಗ್ರಾಹಕರ ಜತೆ ನೇರ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಈ ಬಗ್ಗೆ ಜಾಲದ ಇತರ ಸದಸ್ಯರಿಗೂ ಮಾಹಿತಿ ಇರಲಿಲ್ಲ. ಹೀಗಾಗಿ, ಇಷ್ಟು ದಿನ ಪತ್ತೆ ಮಾಡಲು ಆಗಿರಲಿಲ್ಲ. ಮಲೇಷ್ಯಾ, ನೈಜೀರಿಯಾದ ಕೆಲ ಪ್ರಜೆಗಳ ಜತೆಗೂ ಇವರು ನಂಟು ಹೊಂದಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.[ಡ್ರಗ್ಸ್ ಮಾಫಿಯಾ: ಚಿಕ್ಕಮಗಳೂರಿನ ರೂಪದರ್ಶಿ ಬಂಧನ]
ಎನ್ ಸಿಬಿ ಚೆನ್ನೈನ ಘಟಕವು ಕೊಯಂಬೀಡ್ ನಲ್ಲಿ ಬಿ.ವಿ.ಜೀವನ್ ಕುಮಾರ್ ಎಂಬಾತನನ್ನು ಬಂಧಿಸಿ 5.15 ಕೆ.ಜಿ ಮೆಥಾಂಫೆಟಮೈನ್ ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಅತ ಬಾಯ್ಬಿಟ್ಟ ಸಂಗತಿಗಳಿಂದ ಇಡೀ ಜಾಲವನ್ನು ಭೇದಿಸಲು ಸಾಧ್ಯವಾಯಿತು ಎಂದು ಎನ್ ಸಿಬಿಯ ಚೆನ್ನೈ ವಲಯ ನಿರ್ದೇಶಕ ಪ್ರೇಮ್ ಆನಂದ್ ಸಿನ್ಹಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications