ಬಿಬಿಎಂಪಿ ರಿಸಲ್ಟ್ ನಂತರ ಬೆಂಗಳೂರಿಗೆ ಪ್ರತ್ಯೇಕ ಸಚಿವರು?
ಬೆಂಗಳೂರು, ಆಗಸ್ಟ್. 21: ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಸಚಿವ ಸ್ಥಾನವೊಂದನ್ನು ಹುಟ್ಟುಹಾಕಲಾಗುತ್ತಿದೆ. ಹೌದು ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಕಟ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ಫಲಿತಾಂಶದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಉಸ್ತುವಾರಿ ಸಚಿವರ ಲೆಕ್ಕದಲ್ಲಿದ್ದ ಜವಾಬ್ದಾರಿಗಳು ಹೊಸ ಸಚಿವ ಸ್ಥಾನಕ್ಕೆ ವರ್ಗಾವಣೆಯಾಗಲಿದೆ. ಬೆಂಗಳೂರು ನಾಗರಿಕರ ದೃಷ್ಟಿಯಿಂದ ಇದೊಂದು ಸಿಹಿಸುದ್ದಿ ಎಂದೇ ಹೇಳಬಹುದು.[ಹಲೋ ಬೆಂಗಳೂರು. ಫಸ್ಟ್ ಓಟು ಮಾಡು, ಆಮೇಲೆ ಮಾತಾಡು!]

ಹೊಸ ಸಚಿವ ಖಾತೆಗೆ ಮುಖ್ಯಮಂತ್ರಿ ಒಲವು
ಉದ್ಯಾನ ನಗರಿಯ ಅಭಿವೃದ್ಧಿ ಕನಸು ಸಾಕಾರಗೊಳಿಸಲು ಬೆಂಗಳೂರು ನಗರಕ್ಕಾಗಿ ಪ್ರತ್ಯೇಕ ಸಚಿವ ಸ್ಥಾನ ಹುಟ್ಟುಹಾಕುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಬಿಬಿಎಂಪಿ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಬೆಂಗಳೂರು ನಗರ ಎಂಬ ಸ್ವತಂತ್ರ ಖಾತೆ ಹುಟ್ಟುಹಾಕಿ ಒಬ್ಬ ಸಚಿವರನ್ನು ನೇಮಕ ಮಾಡಲಾಗುವುದು. ಬಿಬಿಎಂಪಿ ಚುನಾವಣೆ ನಂತರ ನಗರಕ್ಕಾಗಿಯೇ ಹೊಸ ಸಚಿವ ಖಾತೆ ಹುಟ್ಟುಹಾಕುವುದು ಖಚಿತ ಎಂದು ಹೇಳಿದ್ದಾರೆ.[ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ]
ಬೆಂಗಳೂರಿಗೆ ಸಂಬಂಧಿಸಿದ ಕೆಲಸಗಳು ವೇಗ ಕಳೆದುಕೊಂಡಿವೆ ಎಂಬ ದೂರುಗಳಿವೆ. ಇದಕ್ಕೆ ಒಬ್ಬ ಮಂತ್ರಿಯ ನೇಮಕವಾದರೆ ಹೊಸ ಇಲಾಖೆಗಳ ಮೂಲಕ ತ್ವರಿತವಾಗಿ ಕಾಮಗಾರಿಗಳನ್ನು ಪೂರೈಸಲು ಸಾಧ್ಯ ಎಂಬುದು ಮುಖ್ಯಮಂತ್ರಿ ಅವರ ನಡೆಯ ಹಿಂದಿರುವ ಉದ್ದೇಶ.
ಬೆಂಗಳೂರಿಗೆ ಪ್ರತ್ಯೇಕ ಸಚಿವರ ನಿಯುಕ್ತಿ ಇದೇ ಮೊದಲೇನಲ್ಲ. ಈ ಹಿಂದೆ ಜೆ.ಎಚ್.ಪಟೇಲ್ ಅವರ ಕಾಲಾವಧಿಯಲ್ಲಿ ಅನಂತನಾಗ್, ಅನಂತರ ಸೋಮಣ್ಣ ಹಾಗೂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರ ಖಾತೆ ಸಚಿವರಾಗಿದ್ದರು. ಅದೇ ಮಾದರಿಯಲ್ಲಿ ಹೊಸ ಖಾತೆ ಸೃಷ್ಟಿಸಲಾಗುವುದು ಎಂದು ತಿಳಿಸಿದರು
ಸಚಿವ ಖಾತೆ ನಿರ್ಧರಿಸುವ ಬಿಬಿಎಂಪಿ ಫಲಿತಾಂಶ
ಬಿಬಿಎಂಪಿ ಚುನಾವಣೆ ಪ್ರತಿಯೊಂದು ಪಕ್ಷಗಳಿಗೂ ಬಹುಮುಖ್ಯವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದೇ ಆದರೆ ಬೆಂಗಳೂರಿಗೆ ಪ್ರತ್ಯೇಕ ಸಚಿವ ಸ್ಥಾನ ಅನುಷ್ಠಾನ ಬಹಳ ದೂರವಿಲ್ಲ.
ಬೆಂಗಳೂರಿಗೆ ಸಂಬಂಧಿಸಿದ ಅನೇಕ ಇಲಾಖೆಗಳ ಜವಾಬ್ದಾರಿ ಸದ್ಯ ಮುಖ್ಯಮಂತ್ರಿ ಅವರ ಕೈಯಲ್ಲೇ ಇದೆ. ಬಿಡಿಎ. ಬಿಬಿಎಂಪಿ ಮತ್ತು ಬಿಎಂಆರ್ ಡಿಎ ಜವಾಬ್ದಾರಿ ಸಹ ಮುಖ್ಯಮಂತ್ರಿಗಳ ಬಳಿ ಇದೆ. ಹೊಸ ಸಚಿವ ಸ್ಥಾನ ಘೋಷಣೆಯಾದರೆ ಎಲ್ಲ ಜವಾಬ್ದಾರಿಗಳು ನೂತನ ಮಂತ್ರಿಯನ ಹೆಗಲೇರಲಿದೆ.












Click it and Unblock the Notifications