Vinod Raj: ಲೀಲಮ್ಮನ ಮಗನ ಕಾರ್ಯಕ್ಕೆ ಜನರ ಮೆಚ್ಚುಗೆ: ಬಿರು ಬಿಸಿಲಿನಲ್ಲೂ ವಿನೋದ್ ರಾಜ್ ಸಮಾಜಸೇವೆ
ಬೆಂಗಳೂರು, ಮೇ 06: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಪುತ್ರ, ಸ್ಯಾಂಡಲ್ವುಡ್ ನಟ ವಿನೋದ್ ರಾಜ್ ಅವರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಸಮಾಜಮುಖಿ ಕಾರ್ಯ ಹಾಗೂ ದಾನ- ಧರ್ಮಗಳಲ್ಲಿ ಸದಾ ಮುಂದಿರುವ ವಿನೋದ್ ರಾಜ್ ಅವರು ಇದೀಗ ಮತ್ತೊಂದು ಜನ ಮೆಚ್ಚುವ ಕಾರ್ಯವನ್ನು ಮಾಡಿದ್ದು, ಲೀಲಾವತಿ ಅವರ ಪುತ್ರನ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
ಸ್ಯಾಂಡಲ್ವುಡ್ ನಟ ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್ ರಾಜ್ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದಾರೆ.

ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ಗುಂಡಿ ಬಿದ್ದ ರಸ್ತೆ ಹಾಗೂ ಕೆಟ್ಟು ಹೋದ ರಸ್ತೆಗಳನ್ನು ಸರಿ ಪಡಿಸಿದ್ದಾರೆ. ಈ ಮೂಲಕ ಮಳೆಗಾಲ ಆರಂಭವಾಗುವ ಮೊದಲೇ ವಿನೋದ್ ರಾಜ್ ರಸ್ತೆಯನ್ನು ರಿಪೇರಿ ಮಾಡಿಸಿದ್ದಾರೆ.
ಒಮ್ಮೆ ಮಳೆಗಾಲ ಆರಂಭವಾಗಿ ಜೋರಾಗಿ ಮಳೆ ಶುರುವಾದರೆ, ರಸ್ತೆಗಳು ಮತ್ತಷ್ಟು ಕೆಟ್ಟು ಹೋಗಲಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೇ ರಸ್ತೆಗಳು ಕೆಸರು ಮಯವಾಗುತ್ತದೆ. ಇದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ.

ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿನೋದ್ ರಾಜ್ ಈ ಸುಡು ಬಿಸಿಲಿನ ಮಧ್ಯೆಯೂ ರಸ್ತೆಯಲ್ಲಿ ನಿಂತು ತಾವೇ ಸ್ವತಃ ರಸ್ತೆಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ಮಾಡಿಸಿದ್ದಾರೆ. ಇತ್ತೀಚಿಗಷ್ಟೇ ವಿನೋದ್ ರಾಜ್ ಅವರು ಈ ಬೇಸಿಗೆಯಲ್ಲಿ ನೀರು-ಹುಲ್ಲು ಇಲ್ಲದೇ ಹಸುಗಳನ್ನು ಸಾಕಲು ಪರದಾಡುತ್ತಿದ್ದ ರೈತರಿಗೆ ನೆರವಾಗಿದ್ದು, ರೈತರ ಹಸುಗಳಿಗೆ ಹುಲ್ಲು ನೀಡಿದ್ದರು.
ಸದ್ಯ ನಟಯಿಂದ ಅಂತರ ಕಾಯ್ದುಕೊಂಡಿರುವ ವಿನೋದ್ ರಾಜ್ ಅವರು, ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿ ಲೀಲಾವತಿ ಅವರ ಅಗಲಿಕೆ ಬಳಿಕ ಮೌನಕ್ಕೆ ಜಾರಿದ್ದ ವಿನೋದ್ ರಾಜ್, ಇತ್ತೀಚಿಗೆ ಮಹಾನಟಿ ಶೋನಲ್ಲಿ ಭಾಗಿಯಾಗಿದ್ದರು.












Click it and Unblock the Notifications