ಬಡತನಕ್ಕೆ ಮಿಡಿದ ನವರಸನಾಯಕನ ಮನ: ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ನೆರವು
ಬೆಂಗಳೂರು, ಜನವರಿ.09: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ದಿನಾಂಕ ನಿಗದಿಯಾಗಿದೆ. ದುಷ್ಟರಿಗೆ ಶಿಕ್ಷೆ ನೀಡುವ ಆ ದುಷ್ಟ ಸಂಹಾರಿ ಯಾರು ಎಂಬುದು ಈಗಾಗಲೇ ಜಗತ್ಜಾಹೀರು ಆಗಿದೆ.
ಉತ್ತರ ಪ್ರದೇಶ ಮೀರತ್ ಮೂಲದ ಪವನ್ ಜಲ್ಲಾದ್ ಅವರನ್ನು ಹ್ಯಾಂಗ್ ಮ್ಯಾನ್ ಆಗಿ ಈಗಾಗಲೇ ನೇಮಿಸಲಾಗಿದೆ. ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲಿಗೆ ಏರಿಸುವ ಪವನ್ ಜಲ್ಲಾದ್ ಅವರು ಆಡಿದ ಒಂದೇ ಒಂದು ಮಾತು, ಚಂದನವನದ ನವರಸನಾಯಕ ಜಗ್ಗೇಶ್ ಅವರ ಮನಸು ಮುಟ್ಟಿದೆ.
ನಿರ್ಭಯಾ ಕೇಸ್ : ಹ್ಯಾಂಗ್ ಮ್ಯಾನ್ ಪವನ್ ಸಂಭಾವನೆ ಮೊತ್ತ ಬಹಿರಂಗ
ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಸಿಗುವ ಒಂದು ಲಕ್ಷ ರೂಪಾಯಿ ಸಂಭಾವನೆಯಿಂದ ಮಗಳ ಮದುವೆಯನ್ನು ಮಾಡುತ್ತೇನೆ ಎಂದು ಸ್ವತಃ ಪವನ್ ಜಲ್ಲಾದ್ ಹೇಳಿಕೆ ನೀಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ನವರಸನಾಯಕ ಜಗ್ಗೇಶ್, ಬಡತನದಲ್ಲಿರುವ ಪವನ್ ಅವರ ನೆರವಿಗೆ ಧಾವಿಸಿದ್ದಾರೆ.
ಮಮತೆಯಲಿ ದೇಣಿಗೆ ನೀಡುವೆ ಮಗಳ ಮದುವೆಗೆ
ಮಾನ್ಯರೇ ರಾಕ್ಷಸರ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಲ್ಲಿ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ. ನೀವೆ ಆ ಪಾಪಿಗಳ ನೇಣಿಗೇರಿಸಿದರೆ, ನಾನು ಕಲೆಯಿಂದ ದುಡಿದ 1ಲಕ್ಷ ರೂ, ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ. ಇದು ದುರುಳ ನಿಗ್ರಹ ದೇವರ ಸೇವೆ. ಹರಿಓಂ. ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಬಡತನದಲ್ಲಿ ಬೆಳೆದ ಪವನ್ ಜಲ್ಲಾದ್ ಗೆ ನೆರವು
ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದ ಪವನ್ ಜಲ್ಲಾದ್ ರನ್ನು ಹ್ಯಾಂಗ್ ಮ್ಯಾನ್ ಆಗಿ ನೇಮಿಸಲಾಗಿದೆ. ತಲಾ ಅಪರಾಧಿಗೆ 25 ಸಾವಿರ ರುಪಾಯಿಯಂತೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಹ್ಯಾಂಗ್ ಮ್ಯಾನ್ ಗೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟುಕರನ್ನು ಗಲ್ಲಿಗೇರಿಸುವ ಹ್ಯಾಂಗ್ಮ್ಯಾನ್ಗಳ ಸಂಬಳ ಎಷ್ಟಿರುತ್ತೆ ಗೊತ್ತೆ?
"ಜೈಲಾಧಿಕಾರಿಗಳ ಸೂಚನೆ ಸಿಗುತ್ತಿದ್ದಂತೆ ಜೈಲಿಗೆ ಹೋಗುವೆ"
ಅಪರಾಧಿಗಳನ್ನು ನೇಣಿಗೇರಿಸುವ ಪ್ರಕ್ರಿಯೆ ಹೊಸದೇನಲ್ಲ. ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳವನ್ನು ಮೊದಲಿಗೆ ಪರಿಶೀಲಿಸಬೇಕು. ಅಪರಾಧಿಗಳ ದೇಹದ ಅಳತೆಯನ್ನು ನೋಡಬೇಕು. ತಿಹಾರ್ ಜೈಲಿನ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣ ಅಲ್ಲಿಗೆ ತೆರಳುತ್ತೇನೆ ಎಂದು ಪವನ್ ಜಲ್ಲಾದ್ ಹೇಳಿದ್ದಾರೆ.
ಎಂದೋ ಆಗಬೇಕಿದ್ದ ಕೆಲಸ ಈಗ ಆಗಬೇಕಿದೆ ಎಂದ ಪವನ್
2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಎಂದೋ ಶಿಕ್ಷೆಯಾಗಬೇಕಿತ್ತು. ಆದರೆ, ಈಗ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದು, ಜನವರಿ.22ರ ಬೆಳಗ್ಗೆ 7 ಗಂಟೆಗೆ ಅಪರಾಧಿಗಳನ್ನು ಗಲ್ಲಿಗೆ ಏರಿಸಲಾಗುತ್ತದೆ. ಮಗಳನ್ನು ಕಳೆದುಕೊಂಡು ನೊಂದ ನಿರ್ಭಯಾ ಪೋಷಕರಿಗೆ ಇದರಿಂದ ಖುಷಿಯಾಗಲಿದ್ದು, ಅವರ ಸಂತೋಷದಲ್ಲೇ ನಾನು ಸಂತೋಷವನ್ನು ಕಾಣುತ್ತೇನೆ ಎಂದು ಪವನ್ ಜಲ್ಲಾದ್ ಹೇಳಿದ್ದರು.