'ಯಾರಿಗೂ ಹೇಳಬಾರದು ಎಂದು ದರ್ಶನ್ ನನಗೆ ದೊಡ್ಡ ಚೀಲದಲ್ಲಿ ಹಣ ಕಳುಹಿಸಿದ್ದರು'
ಬೆಂಗಳೂರು ಜೂನ್ 30: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಹರೀಶ್ ರಾಯ್ ಮಾತನಾಡಿದ್ದು, ನಟ ದರ್ಶನ್ ತಮಗೆ ಮಾಡಿದ ಸಹಾಯವನ್ನು ನೆನೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಹರೀಶ್ ರಾಯ್, ತುಂಬಾ ಜನ ದರ್ಶನ್ ಅವರನ್ನು ನಂಬಿಕೊಂಡು ಬದುಕಿದ್ದೇವೆ. ತುಂಬಾ ಕಲಾವಿದರು, ಸಿನಿಮಾದಲ್ಲಿ ಬೇರೆ ಕೆಲಸ ಮಾಡುವವರು, ನಿರ್ದೇಶಕರು ಹೀಗೆ ತುಂಬಾ ಜನ ನಂಬಿಕೊಂಡಿದ್ದೇವೆ. ಈ ಎಷ್ಟು ಜನರ ದುಡಿಮೆ ಹಾಳಾಯಿತು. ಎಷ್ಟು ಜನರ ಬದುಕು ಹಾಳಾಯಿತು ಎಂದರು.

ಈ ಘಟನೆಯನ್ನು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಒಂಥರಾ ಮಂಕು ಬಡಿದ ಹಾಗಾಗಿದೆ. ನಮ್ಮ ದರ್ಶನ್ಗೆ ಹೀಗಾಯ್ತು ಅಂತಾ ಏನೋ ಒಂದು ಕಳೆದುಕೊಂಡ ಹಾಗೆ ಆಗಿದೆ. ನನ್ನ ಮನೆಯಲ್ಲಿ ಮಾತ್ರವಲ್ಲ. ಅವರ ಅಭಿಮಾನಿಗಳ ಮನೆಯಲ್ಲೂ ಇದೇ ಸ್ಥಿತಿ ಇದೆ. ನಮ್ಮಂತ ನಟರ ಜೊತೆ ಮೊದಲು ನಿಲ್ಲುವುದು ದರ್ಶನ್. ಅವರು ನಮಗೆ ಸುಲಭವಾಗಿ ಸಿಗುತ್ತಾರೆ.
ಎಲ್ಲೇ ಸಿಕ್ಕರೂ ಕಂಡು ಮಾತನಾಡಿಸಿ ಏನಾದರೂ ಸಮಸ್ಯೆ ಇದೆಯಾ ಎಂದು ವಿಚಾರಿಸುತ್ತಾರೆ. ಬೇರೆಯವರಿಂದಲೂ ಸಹ ತಿಳಿದುಕೊಳ್ಳುತ್ತಾರೆ. ಹೀಗೆ ಅನೇಕರಿಗೆ ಸಹಾಯ ಮಾಡಿದ್ದಾರೆ. ಆದರೆ ಅವರು ಮಾಡಿರುವ ಸಹಾಯ ಅವರು ಎಂದೂ ಹೇಳಿಕೊಳ್ಳುವುದಿಲ್ಲ. ದರ್ಶನ್ಗೆ ಸಹಾಯ ಮಾಡಿ ಹೆಸರು ಮಾಡಬೇಕೆನ್ನುವುದಿಲ್ಲ ಎಂದು ದರ್ಶನ್ ದೊಡ್ಡ ಗುಣವನ್ನು ನೆನಪಿಸಿಕೊಂಡರು.
ನಾನು ಇಂದು ಧೈರ್ಯವಾಗಿದ್ದೇನೆ ಎಂದರೆ ಅದಕ್ಕೆ ಯಶ್, ದರ್ಶನ್ ಕಾರಣ. ಯಶ್ ಕೋಟಿ ಖರ್ಚಾದರೂ ನಾನು ನಿಮ್ಮನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದರು. ಆ ಕ್ಷಣದಿಂದಲೇ ನಾನು ಗೆದ್ದಂತೆ ಆಗಿತ್ತು. ದರ್ಶನ್ ಕೂಡ ಅದೇ ದಿನ ಹುಡುಗರ ಜೊತೆಗೆ ಹಣವನ್ನು ಕಳುಹಿಸಿದ್ದರು. ಮಾರನೇ ದಿನ ಮತ್ತೆ ಎಲ್ಲರ ಹತ್ತರ ಮಾತನಾಡಿ ದೊಡ್ಡ ಬ್ಯಾಗಿನಲ್ಲಿ ಹಣ ಕಳುಹಿಸಿಕೊಟ್ಟಿದ್ದರು.

ಒಬ್ಬ ಹೀರೋ ಅಂದ ಮೇಲೆ ಅವನ ಹಿಂದೆ ಸೇನೆ ಇರಲೇಬೇಕು. ನಮ್ಮ ಜೊತೆಯಲ್ಲ ಯಾರೂ ಇರಲಿಲ್ಲ. ನಾವು ಬೆಳೆಯಲಿಲ್ಲ. ದರ್ಶನ್ ಜೊತೆಗಿದ್ದ ಹುಡುಗರು ನನಗೆ ಆರೋಗ್ಯ ಕೆಟ್ಟಾಗ ಒಂದು ಬ್ಯಾಗ್ನಲ್ಲಿ ಹಣ ತಂದು ಬಾಸ್ ಕೊಟ್ಟಿದ್ದಾರೆ ಎಂದರು. ಆಗ ನನಗೆ ಶಾಕ್ ಆಯ್ತು. ಯಾಕೆಂದರೆ ದೊಡ್ಡ ಬ್ಯಾಗ್ ಇತ್ತು. ಯಾರಿಗೂ ಹೇಳಬಾರದು ಬಾಸ್ ಹೇಳಿದ್ದಾರೆ ಎಂದು ಮೂರು ನಿಮಿಷದಲ್ಲೇ ಹೊರಟು ಹೋದರು ಎಂದು ಹರೀಶ್ ರಾಯ್ ನಟ ದರ್ಶನ್ ತಮಗೆ ಮಾಡಿದ ಸಹಾಯ ನೆನೆದಿದ್ದಾರೆ.












Click it and Unblock the Notifications