'ಯಾವತ್ತಿಗೂ ನೀವೇ ನನ್ನ ಹೀರೋ': ಅಪ್ಪಂದಿರ ದಿನಕ್ಕೆ ದರ್ಶನ್ ಪುತ್ರನ ಭಾವುಕ ಪೋಸ್ಟ್
ಬೆಂಗಳೂರು, ಜೂನ್ 16: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ಗೆ ಮಗ ವಿನೀಶ್ ದರ್ಶನ್ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ. ಅಪ್ಪನೊಂದಿಗೆ ಅತಿಯಾದ ಬಾಂಧವ್ಯ ಇಟ್ಟುಕೊಂಡಿರುವ ವಿನೀಶ್, ಈ ದಿನ ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಾ ಭಾವುಕ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾನೆ.
ತಂದೆ ಕೂಲಿಗಾರನೇ ಆಗಿರಲಿ, ಕೊಲೆಗಾರನೇ ಆಗಿರಲಿ ಮಕ್ಕಳ ಪಾಲಿಗೆ ಮೊದಲ ಹೀರೋ ಅಪ್ಪ. ಹೆಂಡತಿ-ಮಕ್ಕಳು ಹಾಗೂ ತನ್ನ ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ಮೀಸಲಿಡುವ ಅಪ್ಪಂದಿರನ್ನು ಸಂಭ್ರಮಿಸುವ ದಿನ ಇಂದು. ಇಂತಹ ಸಂದರ್ಭದಲ್ಲಿ ವಿನೀಶ್, ಪೊಲೀಸ್ ಠಾಣೆಯಲ್ಲಿರುವ ತನ್ನ ತಂದೆ ದರ್ಶನ್ಅನ್ನು ನೆನಪಿಸಿಕೊಂಡು ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾನೆ.

ತಾಯಿ ವಿಜಯಲಕ್ಷ್ಮಿ ಹಾಗೂ ತಂದೆ ದರ್ಶನ್ ಜೊತೆಗಿನ ವಿಶೇಷವಾದ ಫೋಟೋಗಳನ್ನು ಹಂಚಿಕೊಂಡಿರುವ ವಿನೀಶ್, 'ನಿಮ್ಮನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐ ಲವ್ ಯು, ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.
ಅತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸರ ವಶದಲ್ಲಿದ್ದರೆ, ಇತ್ತ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ನೋವು ಅನುಭವಿಸುತ್ತಿದ್ದಾರೆ. ಘಟನೆ ಬೆಳಕಿಗೆ ಬಂದ ದಿನದಿಂದ ವಿಜಯಲಕ್ಷ್ಮಿ ಯಾರ ಸಂಪರ್ಕಕ್ಕೂ ಸಿಗದೇ ಮೌನಕ್ಕೆ ಜಾರಿದ್ದರೆ, ವಿನೀಶ್ ತಮ್ಮ ನೋವನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಳ್ಳುತ್ತಿರುತ್ತಾನೆ.
ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ-ವಿನೀಶ್
ತಂದೆ ದರ್ಶನ್ ಅರೆಸ್ಟ್ ಆದ ನಂತರ ಈ ಹಿಂದೆ ಕೂಡ ವಿನೀಶ್ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದನು. 'ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೀಗ 15 ವರ್ಷ, ನನಗೂ ಮನಸ್ಸಿದೆ. ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲ ಬೇಕಾಗಿದೆ. ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ' ಎಂದು ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದನು. ವಿನೀಶ್ ಇನ್ಸ್ಟಾಗ್ರಾಮ್ನ ಸ್ಟೋರಿ ಸದ್ಯ ಭಾರೀ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ವಿನೀಶ್ಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾರೆ.












Click it and Unblock the Notifications